ಇಷ್ಟೇ ಎತ್ತರದ ಗಣೇಶ ಕೂರಿಸಬೇಕು, ಇದೇ ಸಮಯಕ್ಕೆ ವಿಸರ್ಜನೆ ಮಾಡ್ಬೇಕು: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ವಿಧಿಸಿರುವ 19 ಷರತ್ತುಗಳು

| Updated By: ರಮೇಶ್ ಬಿ. ಜವಳಗೇರಾ

Updated on: Sep 03, 2024 | 6:02 PM

ಪ್ರತಿ ವರ್ಷ ಗಣೇಶ ಚತುರ್ಥಿ ಬಂದಾಗ ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಕುರಿತ ಪರ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ಕಳೆದ ವರ್ಷದಂತೆ ಈ ವರ್ಷವೂ ಸಹ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಆದ್ರೆ, ಕೆಲವೊಂದಿಷ್ಟು ಷರತ್ತುಗಳನ್ನು ವಿಧಿಸಿದೆ. ಹಾಗಾದ್ರೆ, ಆ ಷರತ್ತುಗಳು ಏನೇನು ಎನ್ನುವ ವಿವರ ಇಲ್ಲಿದೆ.

ಇಷ್ಟೇ ಎತ್ತರದ ಗಣೇಶ ಕೂರಿಸಬೇಕು, ಇದೇ ಸಮಯಕ್ಕೆ ವಿಸರ್ಜನೆ ಮಾಡ್ಬೇಕು: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ವಿಧಿಸಿರುವ 19 ಷರತ್ತುಗಳು
ಹುಬ್ಬಳ್ಳಿ ಈದ್ಗಾ ಮೈದಾನ
Follow us on

ಹುಬ್ಬಳ್ಳಿ, (ಸೆಪ್ಟೆಂಬರ್ 03): ಕಳೆದ ವರ್ಷದಂತೆ ಈ ಬಾರಿಯು ಇಲ್ಲಿನ ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಅನುಮತಿ ದೊರೆಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು, ಗಣೇಶ ಮಂಡಳಿಗಳ ಸದಸ್ಯರಲ್ಲಿ ಹರ್ಷ ನೂರ್ಮಡಿ ಹೆಚ್ಚಾಗಿದೆ. ಆದ್ರೆ, ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆ ಬರೋಬ್ಬರಿ 19 ಷರತ್ತುಗಳನ್ನು ವಿಧಿಸಿದ್ದು, ಇವುಗಳ ಪಾಲನೆ ಕಡ್ಡಾಯ ಎಂದು ಸುತ್ತೋಲೆ ಹೊರಡಿಸಿದೆ. ಕೇವಲ ಮೂರೇ ದಿನ ಸೆ.7ರಿಂದ 9ರವರೆಗೆ ಆಚರಣೆಗೆ ಅನುಮತಿ ನೀಡಲಾಗಿದೆ. ಅದು ಸೆ.9ರಂದು ಮಧ್ಯಾಹ್ನ 12 ಗಂಟೆಯೊಳಗೆ ಮೂರ್ತಿ ವಿಸರ್ಜನೆ ಮಾಡಬೇಕು ಅಂತೆಲ್ಲಾ ಷರತ್ತುಗಳನ್ನು ಹಾಕಲಾಗಿದೆ. ಹಾಗಾದ್ರೆ, ಬರೋಬ್ಬರಿ 19 ಷರತ್ತುಗಳು ಏನೇನು ಎನ್ನುವುದು ಈ ಕೆಳಗಿನಂತಿವೆ ನೋಡಿ.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್: ಷರತ್ತುಗಳು ಅನ್ವಯ

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿಧಿಸಿರುವ ಷರತ್ತುಗಳು

  1. ಸಂಘಟನೆ ಪಾಲಿಕೆ ವಿಧಿಸುವ ಯಾವತ್ತು ಕರಾರುಗಳಿಗೆ ಬದ್ಧರಾಗಿರಬೇಕು.
  2.  ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮುನ್ನ ಕಡ್ಡಾಯವಾಗಿ ಪಾಲಿಕೆ ಮತ್ತು ಪೊಲೀಸ್ ಆಯುಕ್ತರ ಅನುಮತಿ ಪಡೆದುಕೊಳ್ಳಬೇಕು.
  3.  ದಿನಾಂಕ: 07.09.2024 ರಂದು ಬೆಳಗಿನ 06.00 ಘಂಟೆಯಿಂದ ಬೆಳಗಿನ 08.00 ಮೂರ್ತಿ ಪ್ರತಿಷ್ಠಾಪನೆ
    ದಿನಾಂಕ: 09.09.2024 ರ ಮದ್ಯಾಹ್ನ 12.00 ರ ಒಳಗಾಗಿ ಗಣೇಶ ವಿಸರ್ಜನೆ ಮಾಡಬೇಕು.
  4. 30 ಅಡಿ ಉದ್ದ, 30 ಅಡಿ ಅಗಲಕ್ಕೆ ಮೀರದಂತೆ ಹಾಗೂ ಪಾಲಿಕೆ/ಪೊಲೀಸ್/ಕಂದಾಯ ಅಧಿಕಾರಿಗಳು ಸೂಚಿಸುವ ಜಾಗದಲ್ಲಿ ನಿರ್ದಿಷ್ಟವಾಗಿ ಸೂಚಿತವಾದ ಜಾಗೆಯಲ್ಲಿ ಮಾತ್ರ ಪೆಂಡಾಲನ್ನು ಹಾಕುವುದು.
  5.  ಸದರ ಜಾಗೆಯಲ್ಲಿ ಯಾವುದೇ ಖಾಯಂ ಕಟ್ಟಡ ನಿರ್ಮಿಸತಕ್ಕದಲ್ಲ.
  6.  ಉತ್ಸವ ಮೂರ್ತಿಯ ಹೊರತಾಗಿ ಯಾವುದೇ ರೀತಿಯ ಭಾವುಟಗಳು ಹಾಗೂ ಇತರೆ ಮೈದಾನದ ಭಾಗದಲ್ಲಿ ಯಾವುದೇ ರೀತಿಯ ವಿವಾದಿತ ಹಾಗೂ ಪ್ರಚೋದನಕಾರಿ ಪೋಟೊಗಳನ್ನು, ಬಿತ್ತಿ ಪತ್ರ, ಬ್ಯಾನರ & ಬಂಟಿಂಗ್ಸ್‌ಗಳನ್ನು ಅಳವಡಿಸಕೂಡದು ಹಾಗೂ ಪ್ರದರ್ಶಿಸಕೂಡದು ಮತ್ತು ಯಾವುದೇ ಪ್ರಚೋದನಕಾರಿ ಹಾಡುಗಳನ್ನು ಹಾಕತಕ್ಕದಲ್ಲ ಹಾಗೂ ಡಿಜೆ ಅಥವಾ ಇತರೇ ಕರ್ಕಶಯುಕ್ತ ಧ್ವನಿವರ್ಧಕಗಳನ್ನು ಉಪಯೋಗಿಸುವಂತಿಲ್ಲ.
  7.  ಯಾವುದೇ ಮನರಂಜನಾ ಹಾಗೂ ಇನ್ನಿತರ ಕಾರ್ಯಕ್ರಮ ಕೈಗೊಳ್ಳಲು/ಆಯೋಜಿಸಲು ಅವಕಾಶ ಇರುವುದಿಲ್ಲ.
  8. ಶ್ರೀ ಗಣೇಶ ಚತುರ್ಥಿಯ ಉತ್ಸವ ಆಚರಿಸುವ ಸಂದರ್ಭದಲ್ಲಿ ಉಂಟಾಗುವ ಯಾವುದೇ ರೀತಿಯ ಗೊಂದಲಗಳಿಗೆ ಗಲಭೆಗಳಿಗೆ ಅವಕಾಶಗಳನ್ನು ನೀಡಕೂಡದು. ಸಾರ್ವಜನಿಕರ ವಿರೋಧಗಳಿಗೆ ಮತ್ತು ಪ್ರತಿಭಟನೆಗಳಿಗೆ ಪ್ರಚೋದನೆಯನ್ನು ನೀಡುವಂತೆ ಆಯೋಜಿಸಬಾರದು.
  9. ಸಾರ್ವಜನಿಕ ಗಣೇಶ ಉತ್ಸವ ಆಚರಣೆಗಾಗಿ ಪೆಂಡಾಲಗಳಲ್ಲಿ ಯಾವುದೇ ವಾಣಿಜ್ಯ ಹಾಗೂ ಇನ್ನಿತರ ಜಾಹಿರಾತು (Advertisement) ಗಳನ್ನು ಹಾಕತಕ್ಕದಲ್ಲ.
  10.  ಈ ಸಂಧರ್ಭದಲ್ಲಿ ಸಾರ್ವಜನಿಕ ಶಾಂತಿಯನ್ನು ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುವ ಭರವಸೆಯನ್ನು ಸಮಾರಂಭದ ಆಯೋಜಕರು ನೀಡಬೇಕು ಹಾಗೂ ಯಾವುದೇ ಪರಿಸ್ಥಿತಿಯಲ್ಲಿ ಅನಾವಶ್ಯಕವಾಗಿ ಗಲಭೆಗಳು ಗಲಾಟೆಗಳು ಉಂಟಾಗಿ ಸಾರ್ವಜನಿಕರ ಸ್ವಸ್ಥತೆಗೆ ಮತ್ತು ಆಸ್ತಿ ಪಾಸ್ತಿಗಳಿಗೆ ಹಾನಿಯಾದ ಸಂಧರ್ಭದಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ಸಮಾರಂಭದ ಆಯೋಜಕರು ವಹಿಸಿಕೊಂಡು ಮುಂದಿನ ಯಾವುದೇ ಕಾನೂನು ರೀತಿಯ ಕ್ರಮಗಳಿಗೆ ಒಪ್ಪಿಕೊಂಡು ತನ್ಮೂಲಕ ಉಂಟಾಗುವ ಹಾನಿಯ ಮೊತ್ತವನ್ನು ಭರಿಸುವದಾಗಿ ಘೋಷಿಸಿ ಲಿಖಿತವಾಗಿ ಪ್ರಮಾಣವನ್ನು ಸಲ್ಲಿಸಬೇಕು.
  11.  ಮಹಾನಗರ ಪಾಲಿಕೆ ಹಾಗೂ ಪೋಲೀಸ್ ಅಧಿಕಾರಿಗಳು ಸೂಚಿಸಿದಂತೆ ಗಣೇಶ ಮೆರವಣಿಗೆ ಮಾರ್ಗಕ್ಕೆ ಬದ್ದರಾಗಿರತಕ್ಕದ್ದು ಹಾಗೂ ಸದರಿ ಮೆರವಣಿಗೆಯನ್ನು ಒಂದು ಗಂಟೆಯ ಒಳಗೆ ಮುಕ್ತಾಯಗೊಳಿಸಿ ಪಾಲಿಕೆ ಹಾಗೂ ಪೋಲೀಸ್ ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ ಗಣೇಶ ವಿಸರ್ಜನೆ ಮಾಡತಕ್ಕದ್ದು.
  12. ಸಮಾರಂಭವನ್ನು ಆಚರಿಸಿದ ನಂತರದಲ್ಲಿ ಪಾಲಿಕೆಯ ಸ್ಥಳವನ್ನು ತೆರವುಗೊಳಿಸಿ ಮತ್ತು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಮಹಾನಗರ ಪಾಲಿಕೆಗೆ ವರದಿಯನ್ನು ನೀಡಬೇಕು.
  13.  ಕಾಲಕಾಲಕ್ಕೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯ ನೀಡುವ ಆದೇಶ ಹಾಗೂ ಸೂಚನೆಗಳಿಗೆ ಬದ್ಧರಾಗಿರಬೇಕು.
  14.  ಪೊಲೀಸ್ ಇಲಾಖೆಯಿಂದ ಭದ್ರತೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡತಕ್ಕದ್ದು.
  15. ಸದರಿ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪಾಲಿಕೆ, ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸೂಚಿಸುವ ಜಾಗದಲ್ಲಿ ಹಾಗೂ ವಿಧಿಸುವ ಮಾನದಂಡಗಳಿಗೆ ಅನುಗುಣವಾಗಿ ಮಾತ್ರ ಆಚರಿಸಬೇಕು.
  16. ಸರ್ಕಾರದ ಮತ್ತು ಇತರೆ ಇಲಾಖೆಗಳ ಇನ್ನಿತರ ಕರಾರುಗಳು ಅನ್ವಯಿಸುತ್ತವೆ.
  17. ಈದ್ಗಾ ಮೈದಾನದ ಆವರಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಪಟಾಕಿ ಹಾಗೂ ಇತರೆ ಸಿಡಿಮದ್ದುಗಳನ್ನು ಬಳಸತಕ್ಕದಲ್ಲ.
  18. ಯಾವುದೇ ರೀತಿಯ ಪ್ರಚೋದನಾಕಾರಿ ಹೇಳಿಕೆ ಹಾಗೂ ಭಾಷಣ ಮಾಡತಕ್ಕದ್ದಲ್ಲ.
  19.  ಅನ್ಯ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ಕಾರ್ಯಕ್ರಮಗಳನ್ನು ಅಥವಾ ಧಾರ್ಮಿಕ ಚಟುವಟಿಕೆಗಳನ್ನು ಮಾಡತಕ್ಕದ್ದಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ