ಚಾಕೊಲೇಟ್ ಕೊಡುವ ನೆಪದಲ್ಲಿ ಹೇಯ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ

ಹುಬ್ಬಳ್ಳಿಯಲ್ಲಿ ಎರಡು ಆಘಾತಕಾರಿ ಘಟನೆಗಳು ವರದಿಯಾಗಿವೆ. 8 ವರ್ಷದ ಬಾಲಕಿ ಮೇಲೆ 75 ವರ್ಷದ ವೃದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದು, ಪೋಕ್ಸೋ ಅಡಿ ಬಂಧಿಸಲಾಗಿದೆ. ಮತ್ತೊಂದು ದುರ್ಘಟನೆಯಲ್ಲಿ, ಮಾಡಿದ ಸಾಲ ತೀರಿಸು ಎಂದಿದ್ದಕ್ಕೆ ಪತ್ನಿಯನ್ನ ಚಾಕುವಿನಿಂದ ಇರಿದು ಪತಿ ಕೊಲೆ ಮಾಡಿರುವಂತಹ ಘಟನೆ ನಡೆದಿದೆ.

ಚಾಕೊಲೇಟ್ ಕೊಡುವ ನೆಪದಲ್ಲಿ ಹೇಯ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ
ಅಶೋಕನಗರ ಪೊಲೀಸ್ ಠಾಣೆ
Image Credit source: tv9 kannada
Edited By:

Updated on: Feb 02, 2026 | 3:19 PM

ಹುಬ್ಬಳ್ಳಿ, ಫೆಬ್ರವರಿ 02: ಕ್ಯಾನ್ಸರ್ ಪೀಡಿತ 75 ವರ್ಷದ ವೃದ್ಧನಿಂದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವಂತಹ ಘಟನೆ ಹುಬ್ಬಳ್ಳಿಯ (Hubballi) ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 29ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಕೊಲೇಟ್ ಕೊಡುವುದಾಗಿ ಹೇಳಿ ಪಕ್ಕದ ಮನೆಯ ಬಾಲಕಿಯನ್ನ ಮನೆಗೆ ಕರೆಸಿಕೊಂಡು ವೃದ್ಧ ಕೃತ್ಯವೆಸಗಿದ್ದಾನೆ. ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ಪೋಕ್ಸೋ ಕೇಸ್ (POCSO Case) ದಾಖಲಾಗಿದ್ದು, ಸದ್ಯ ಆರೋಪಿ ವೃದ್ಧನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಸಾಲ ತೀರಿಸು ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಪತಿ ಕೊಲೆಗೈದಿರುವಂತಹ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆ ಮುಂದೆಯೇ ಪತ್ನಿ ತೆಹಸಿನ್(28)ರನ್ನು ಪತಿ ಇರ್ಫಾನ್ ಬರ್ಬರವಾಗಿ ಹತ್ಯೆಗೈದಿದ್ದಾರೆ. ಗೋಕುಲ್​ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆರತಕ್ಷತೆಗೆ ತೆರಳುವಾಗ ಅಡ್ಡಗಟ್ಟಿ ವರನಿಗೆ ಚಾಕು ಇರಿತ ಕೇಸ್​​​ಗೆ ಬಿಗ್ ಟ್ವಿಸ್ಟ್​, ಮದ್ವೆಯಾಗಬೇಕಿದ್ದವಳೇ ವಿಲನ್

ಕೊಲೆ ಮಾಡಿ ಕೆಲ ಹೊತ್ತು ತಲೆ ಮರೆಸಿಕೊಂಡಿದ್ದ ಇರ್ಫಾನ್, ಬಳಿಕ ತಾವೇ ಮಗುವಿನೊಂದಿಗೆ ಬಂದು ಕೇಶ್ವಾಪುರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ತೆಗೆದುಕೊಂಡಿದ್ದ ಸಾಲವನ್ನು ದುಡಿದು ತುಂಬುವಂತೆ ತೆಹಸಿನ್​​ ಹೇಳಿದ್ದಾರೆ. ಇದೇ ವಿಚಾರವಾಗಿ ದಂಪತಿ ಮಧ್ಯೆ ಪದೇ ಪದೇ ಜಗಳ ಕೂಡ ನಡೆದಿದೆ. ಹೀಗಾಗಿ ಆಕ್ರೋಶಗೊಂಡು ಕೊಲೆ ಮಾಡಲಾಗಿದೆ. ಕುತ್ತಿಗೆ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಚಲಿಸುತ್ತಿದ್ದ ಆಲ್ಟೋ ಕಾರಿಗೆ ಕ್ಯಾಂಟರ್ ಲಾರಿ ಡಿಕ್ಕಿ: ಇಬ್ಬರು ಸಾವು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳ್ಳೂರು ಗ್ರಾಮದ ಮುಡಿಂಗೆಮಟ್ಟೆ ಕ್ರಾಸ್ ಬಳಿ ಕ್ಯಾಂಟರ್​ ಡಿಕ್ಕಿಯಾಗಿ ಆಲ್ಟೋ ಕಾರು ಚಾಲಕ ಸೇರಿ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಕಾರು ಚಾಲಕ ವೀರೇಶ್, ಪವಿತ್ರಾ ಮೃತರು.

ಇದನ್ನೂ ಓದಿ: ಹಣಕ್ಕಾಗಿ ತ್ರಿವಳಿ ಕೊಲೆ ಶಂಕೆ: ತಂಗಿ ಗರ್ಭಿಣಿ ಎಂದು ಖಾಕಿ ಮುಂದೆ ಕತೆ ಹೇಳಿದ್ನಾ ಕಿರಾತಕ?

ಆನಂದಪುರದಲ್ಲಿ ಸ್ನೇಹಿತರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಸಾಗರ ಪಟ್ಟಣಕ್ಕೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಕ್ಯಾಂಟರ್ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:17 pm, Mon, 2 February 26