ರಜೆ ದಿನ ಸಮಾಜ ಸೇವೆಗೆ ಮೀಸಲಿಟ್ಟ ವಿದ್ಯಾರ್ಥಿಗಳು: ಸ್ವಂತ ಹಣದಲ್ಲಿ ರಸ್ತೆ ದುರಸ್ಥಿ, ರಾಜಕಾರಣಿಗಳಿಗೆ ಮಾದರಿ
ಹುಬ್ಬಳ್ಳಿಯ ಶಾಲಾ ಮಕ್ಕಳು ತಮ್ಮ ರಜಾ ದಿನಗಳನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಅವರು ರಸ್ತೆ ಗುಂಡಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಸಮಾಜಮುಖಿ ಚಟುವಟಿಕೆಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಈ ಕೆಲಸ ಇತರರಿಗೆ ಮಾದರಿಯಾಗಿದೆ.

ಹುಬ್ಬಳ್ಳಿ, ಜೂನ್ 08: ಹೆಚ್ಚಿನ ಮಕ್ಕಳು (Childrens) ಶಾಲೆಗೆ ರಜೆ ಇದ್ದರೆ ಸಾಕು ಮೊಬೈಲ್, ಟಿವಿ ಮುಂದೆ ಕೂರುತ್ತಾರೆ. ಆದರೆ ಈ ಮಕ್ಕಳು ಶಾಲೆ ರಜೆ ದಿನಗಳಲ್ಲಿ ನಗರದ ರಸ್ತೆ ಗುಂಡಿಗಳನ್ನು (Road pothole) ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಹೆತ್ತವರು ಕೊಟ್ಟ ಪಾಕೆಟ್ ಮನಿಯನ್ನು ಉಳಿಸಿ, ತಾವೇ ಸಿಮೆಂಟ್, ಮರಳು, ಜಲ್ಲಿಕಲ್ಲು ಖರೀದಿಸಿ ತಂದು ದುರಸ್ಥಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಶಾಲಾ ಮಕ್ಕಳು ಮಾಡುತ್ತಿದ್ದಾರೆ.
ಹುಬ್ಬಳ್ಳಿ ನಗರದ ಅರುಣ್ ಕಾಲೋನಿಯಲ್ಲಿ ಶಾಲಾ ಮಕ್ಕಳು ಹಾಳಾಗಿರುವ ಪೇವರ್ ಬ್ಲಾಕ್ಗಳನ್ನು ಎತ್ತಿಟ್ಟು, ಆ ಸ್ಥಳವನ್ನು ಸ್ವಚ್ಚಗೊಳಿಸಿ, ನಂತರ ಪೇವರ್ಗಳನ್ನು ಸರಿಯಾಗಿ ಜೋಡಿಸಿ, ಅದಕ್ಕೆ ಸಿಮೆಂಟ್ ಹಾಕಿದ್ದಾರೆ. ಆ ಮೂಲಕ ರಸ್ತೆಯಲ್ಲಿ ಹಾದು ಹೋಗುವ ಪಾದಚಾರಿಗಳಿಗೆ, ವಾಹನ ಸವಾರರು ಸರಿಯಾಗಿ ಓಡಾಡಲು ಅನಕೂಲ ಮಾಡುತ್ತಿದ್ದರು. ಈ ಮಕ್ಕಳನ್ನು ನೋಡುತ್ತಿದ್ದಂತೆ, ಇಲ್ಲಿ ಬಾಲಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದಾರೆ ಅಂತ ಅನೇಕರು ಅಂದುಕೊಳ್ಳುತ್ತಿದ್ದರು. ಆದರೆ ಇವರೆಲ್ಲಾ ಬಾಲಕಾರ್ಮಿಕರಲ್ಲ, ಬದಲಾಗಿ ಬಾಲ ಸಮಾಜ ಸೇವಕರು. ಶಾಲಾ ಮಕ್ಕಳು ಅಂತ ಗೊತ್ತಾಗಿದ್ದು, ಅವರ ಕೆಲಸ ಮುಗಿದ ಮೇಲೆಯೇ.
ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಧಾರವಾಡ ಜಿಲ್ಲೆಗೆ ದೇಶದಲ್ಲೇ 2ನೇ, ರಾಜ್ಯದಲ್ಲಿ ಮೊದಲ ಸ್ಥಾನ!
ಹೌದು.. ನಗರದ ವೆಂಕಟೇಶ್ವರ ನಗರದಲ್ಲಿರುವ ಆರ್ಎಸ್ಎಸ್ನ ಮಾಧವ ಶಾಖೆ ಸ್ವಯಂ ಸೇವಕರಾಗಿರುವ ಈ ಮಕ್ಕಳು, ನಗರದ ವಿವಿಧ ಬಡಾವಣೆಯ ನಿವಾಸಿಗಳಾಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹೋಗುವ ಈ ಮಕ್ಕಳು, ಇದೀಗ ತಮ್ಮ ಸಮಾಜಮುಖಿ ಕಾರ್ಯಗಳಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಅರುಣ್ ಕಾಲೋನಿಯಲ್ಲಿ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರ ಸರಿಯಾಗಿ ನಿರ್ವಹಿಸಿದೇ ಬಿಟ್ಟು ಹೋಗಿದ್ದ. ರಸ್ತೆಗೆ ಹಾಕಿದ್ದ ಪೇವರ್ಗಳು ಕಿತ್ತುಹೋಗಿದ್ದವು. ಹೀಗಾಗಿ ಈ ರಸ್ತೆಯಲ್ಲಿ ಓಡಾಡುತ್ತಿದ್ದ ಅನೇಕ ವಾಹನ ಸವಾರರು ಬಿದ್ದು ಗಾಯಗೊಂಡಿದ್ದರು. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸ್ಥಳೀಯರು ಅನೇಕ ಬಾರಿ ಮಾಹಿತಿ ನೀಡಿದ್ದರು. ಆದರೆ ಯಾರು ಕೂಡ ದುರಸ್ಥಿತಿಗೆ ಮುಂದಾಗಿರಲಿಲ್ಲ. ಹಾಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕಿದ್ದ ಕೆಲಸವನ್ನು ಈ ಬಾಲ ಸಮಾಜ ಸೇವಕರಾಗಿರುವ ಶಾಲಾ ಮಕ್ಕಳು ಮಾಡಿ ಮುಗಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಪ್ಲಾಸ್ಟಿಕ್ನಿಂದ ನಿರ್ಮಾಣವಾಯ್ತು ರಸ್ತೆ: ಹೊಸ ಐಡಿಯಾದಿಂದ ಪಾಲಿಕೆಗೆ ಉಳಿತಾಯ
ಮುಂಜಾನೆ ಏಳು ಗಂಟೆಗೆ ಸ್ಥಳದಲ್ಲಿದ್ದ ಮಕ್ಕಳು ಬರುವಾಗ, ತಾವೇ ಮರಳು, ಸಿಮೆಂಟ್, ಜಲ್ಲಿಕಲ್ಲು, ಕೆಲಸಕ್ಕೆ ಬೇಕಾದ ಗುದ್ದಲಿ ಸೇರಿದಂತೆ ಅನೇಕ ಉಪಕರಣಗಳನ್ನು ಹೊತ್ತು ತಂದಿದ್ದರು. ಮೊದಲು ಹಾಳಾಗಿದ್ದ ಪೇವರ್ ಗಳನ್ನು ತೆಗೆದು, ಸ್ಥಳವನ್ನು ಸ್ವಚ್ಚಗೊಳಿಸಿದರು. ನಂತರ ಅಲ್ಲಿ ಮತ್ತೆ ಪೇವರ್ಗಳನ್ನು ಸರಿಯಾಗಿ ಜೋಡಿಸಿ, ಸಿಮೆಂಟ್, ಜಲ್ಲಿಕಲ್ಲು, ಮರಳು ಮಿಶ್ರವನ್ನು ಹಾಕಿದರು. ಸರಿಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಶ್ರಮವಹಿಸಿದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು, ತಾವು ಹಾಕಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು.
ಸ್ವಂತ ಹಣದಲ್ಲೇ ಸಮಾಜ ಸೇವೆ
ಇನ್ನು ಈ ಕಾಮಗಾರಿಗೆ ಬೇಕಾದ ಮರಳು, ಜಲ್ಲಿಕಲ್ಲು, ಸಿಮೆಂಟ್ನ್ನು ಕೂಡ ಯಾರಿಂದಲೂ ಪಡೆಯದೇ, ತಾವೇ ಖರೀದಿಸಿ ತಂದಿದ್ದರು. ಹೆತ್ತವರು ನೀಡುವ ಐದು, ಹತ್ತು ರೂಪಾಯಿಗಳನ್ನು ಖರ್ಚು ಮಾಡದೇ ಹಾಗೇ ಇಟ್ಟುಕೊಳ್ಳುವ ವಿದ್ಯಾರ್ಥಿಗಳು, ಇಂತಹ ಕೆಲಸಗಳಿಗೆ ಈ ಹಣವನ್ನು ಬಳಸುತ್ತಿದ್ದಾರಂತೆ. ಇನ್ನು ಅರುಣ್ ಕಾಲೋನಿ ಮಾತ್ರವಲ್ಲ, ನಗರದ ಬೇರಡೆ ಕೂಡ ತಗ್ಗು ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ತಮ್ಮಿಂದ ಆದಂತಹ ಅನೇಕ ಕೆಲಸಗಳನ್ನು ಕಳೆದ ಐದಾರು ತಿಂಗಳಿಂದ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಒಂದು ಜಾಗವನ್ನು ಗುರುತಿಸಿ, ಅಲ್ಲಿನ ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಕ್ಕಳು ಮಾಡುತ್ತಿದ್ದಾರೆ.

ರಜೆ ಇದ್ದಾಗ, ಬರಿ ಮೊಬೈಲ್, ಟಿವಿ ಮುಂದೆ ಕಾಲ ಕಳೆಯುವದಕ್ಕಿಂತ ಮಕ್ಕಳು, ಇಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದು, ಇತರೇ ಮಕ್ಕಳಿಗೆ ಮಾದರಿಯಾಗಿದೆ. ಇಂತಹ ಕೆಲಸಕ್ಕೆ ಹೆತ್ತವರು ಕೂಡ ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಇದರಿಂದ ಮಕ್ಕಳಿಗೆ ಸಮಾಜಮುಖಿ ಕೆಲಸ ಮಾಡಿದ ಅನುಭವ ಜೊತೆಗೆ, ವ್ಯವಸ್ಥೆಯನ್ನು ಹಳೆಯುವದಕ್ಕಿಂತ, ತಾವೇ ಸಮಸ್ಯೆಗೆ ಪರಿಹಾರ ಕಲ್ಪಿಸುವ ಆನಂದ ಕೂಡ ಉಂಟಾಗುತ್ತಿರುವುದು ವಿಶೇಷವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







