
ಧಾರವಾಡ, ಜೂನ್ 01: ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ (job vacancies) ಆಗ್ರಹಿಸಿ ಇತ್ತೀಚೆಗೆ ನಗರದಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರಮಾಣದಲ್ಲಿ ಹೊರಾಟ ಮಾಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿತ್ತು. ಆದರೆ ಖಾಲಿ ಹುದ್ದೆಗಳ ಭರ್ತಿ ವಿಳಂಬವಾಗುತ್ತಿದೆ. ಹೀಗಾಗಿ ಇದೀಗ ಮತ್ತೆ ಸಿಡಿದೆದ್ದಿರುವ ವಿದ್ಯಾರ್ಥಿಗಳು (Student) ಸತ್ಯಾಗ್ರಹಕ್ಕೆ ಮುಂದಾಗಿದ್ದು, ಡಿಕೆ ಶಿವಕುಮಾರ್ ಸಿಎಂ ಆಗುತ್ತಿರುವ ಹೊತ್ತಲ್ಲೇ ವಿದ್ಯಾರ್ಥಿಗಳು ಹೋರಾಟಕ್ಕೆ ಮುಂದಾಗುತ್ತಿರುವುದು ದೊಡ್ಡ ಸವಾಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಾಲಿ ಹುದ್ದೆ ಭರ್ತಿ ವಿಳಂಬ ವಿಚಾರವಾಗಿ ಹಿರಿಯ ಹೋರಾಟಗಾರ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಧಾರವಾಡದ ಮಿಚಿಗನ್ ಕಾಂಪೌಂಡ್ನಲ್ಲಿ ಜೂನ್ 3 ರಂದು ಸತ್ಯಪ್ರತಿಪಾದನಾ ಸತ್ಯಾಗ್ರಹಕ್ಕೆ ವಿದ್ಯಾರ್ಥಿಗಳು ಮುಂದಾಗಿದ್ದರು. ಆದರೆ ಈ ಹಿಂದಿನ ಘಟನಾವಳಿ ಉಲ್ಲೇಖಿಸಿ ಉಪನಗರ ಠಾಣೆ ಪೊಲೀಸರು ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಿದ್ದಾರೆ.
ಇನ್ನು ಈ ಬಗ್ಗೆ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಕೆಎಸ್ಎಸ್ಎ ಸಂಘಟನೆಯ ಗೌರವಾಧ್ಯಕ್ಷ ಬಿ.ಡಿ. ಹಿರೇಮಠ, ನಾವು ಜೂ. 9 ರವರೆಗೆ ಗಡುವು ನೀಡುತ್ತೇವೆ. ಅಷ್ಟರಲ್ಲಿ ಖಾಲಿ ಹುದ್ದೆ ಭರ್ತಿ ವಿಚಾರವಾಗಿ ರಾಜ್ಯದ 31 ಜಿಲ್ಲೆಯ ವಿದ್ಯಾರ್ಥಿ ಮುಖಂಡರೊಂದಿಗೆ ಸರ್ಕಾರ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದ್ಯೋಗಾಕಾಕ್ಷಿಗಳಿಂದ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ: ಧಾರವಾಡದಲ್ಲಿ ನಾಳೆ ನಡೆಯಲಿದ್ಯಾ ಹೈಡ್ರಾಮಾ?
ಹೋರಾಟಕ್ಕೆ ಅನುಮತಿ ನಿರಾಕರಿಸಿದ ಕಮಿಷನರ್ ಅವರೇ ಚರ್ಚೆಗೆ ಅವಕಾಶ ಕೊಡಿಸಬೇಕು. ಇಲ್ಲದಿದ್ದರೆ ಜೂ. 9 ರಿಂದ ಡಿಸಿ ಕಚೇರಿ ಎದುರು ವಿದ್ಯಾರ್ಥಿಗಳೊಂದಿಗೆ ಅನಿರ್ದಿಷ್ಟಾವಧಿ ಸತ್ಯಪ್ರತಿಪಾದನಾ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Mon, 1 June 26