ಗಣೇಶ ಹಬ್ಬದ ಪ್ರಯುಕ್ತ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಿಂದ ಹೆಚ್ಚುವರಿ ಬಸ್
ವಾರಾಂತ್ಯದ ರಜೆ ಮತ್ತು ಗೌರಿ- ಗಣೇಶ ಹಬ್ಬ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಿಸುತ್ತಾರೆ. ಹಬ್ಬದ ಜೊತೆ ವೀಕೆಂಡ್ ಹಿನ್ನೆಲೆಯಲ್ಲಿ ಕೆಲವರು ಬೆಂಗಳೂರಿನಿಂದ ತಮ್ಮ ಊರಿಗೆ ಹೋಗಲು ಸಜ್ಜಾಗಿದ್ದಾರೆ. ಹೀಗಾಗಿ ಜನದಟ್ಟಣೆಯಾಗುವ ಸಾಧ್ಯತೆಗಳಿವೆ. ಇದರಿಂದ ಎಚ್ಚೆತ್ತುಕೊಂಡ NWKRTC ಹೆಚ್ಚುವರಿ ಬಸ್ ಗಳನ್ನು ಬಿಟ್ಟಿದೆ

ಹುಬ್ಬಳ್ಳಿ,(ಆಗಸ್ಟ್ 22): ಗಣೇಶ ಹಬ್ಬದ (Gowri-Ganesha festival) ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC ) ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 265 ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ವಾರಾಂತ್ಯವಾದ ದಿನಾಂಕ 22-08-2025 ರಂದು ಶುಕ್ರವಾರ, 23-08-2025ರಂದು ಬೆನಕನ ಅಮವಾಸ್ಯೆ, ನಾಲ್ಕನೇ ಶನಿವಾರ, 24-08-2025 ರಂದು ಭಾನುವಾರ, 26-08-2025ರಂದು ಸ್ವರ್ಣಗೌರಿ ವ್ರತ ಮತ್ತು 27-08-2025 ರಂದು ಗಣೇಶ ಹಬ್ಬವಿರುವುದರಿಂದ ಬೆಂಗಳೂರು ಮತ್ತು ಇತರೇ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಹೆಚ್ಚುವರಿ ಸಾರಿಗೆ ಬಸ್ ಗಳು ಕಾರ್ಯಾಚರಣೆ ಮಾಡಲಿವೆ.
ಇದನ್ನೂ ಓದಿ: ವಾರಾಂತ್ಯ, ಗೌರಿ-ಗಣೇಶ ಹಬ್ಬ ರಜೆ: ಖಾಸಗಿ ಬಸ್ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ
ಬೆಂಗಳೂರಿನಿಂದ ರಾಜ್ಯ ಅಥವಾ ಅಂತಾರಾಜ್ಯ ವಿವಿದ ಸ್ಥಳಗಳಿಗೆ ತೆರಳಲು 22-08-2025 ರಿಂದ 26-08-2025 ರ ವರೆಗೆ ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಬ್ಬ ಮುಗಿದ ನಂತರ 27-08-2025 ಮತ್ತು ನಂತರ ದಿನಗಳಂದು ಪ್ರಮುಖ ಸ್ಥಳಗಳಿಗೆ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುವುದು.
ಇದನ್ನು ಸದುಪಯೋಗ ಪಡಿಸಿಕೊಳ್ಳುವದರೊಂದಿಗೆ, ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವಂತೆ ಮತ್ತು ವಿಶೇಷ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.



