ಅನಗತ್ಯ ಸಿಸೇರಿಯನ್ ಹೆರಿಗೆ ತಡೆಗೆ ಹೊಸ ಯೋಜನೆ: ದಿನೇಶ್ ಗುಂಡೂರಾವ್ ಘೋಷಣೆ

ಕರ್ನಾಟಕದಲ್ಲಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದಕ್ಕೆ ಖಾಸಗಿ ಆಸ್ಪತ್ರೆಗಳ ಪಾತ್ರ ದೊಡ್ಡದಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಅನಗತ್ಯ ಸಿಸೇರಿಯನ್‌ಗಳನ್ನು ತಡೆಯಲು ರಾಜ್ಯ ಸರ್ಕಾರ ಜನವರಿಯಲ್ಲಿ ವಿಶೇಷ ಕಾರ್ಯಕ್ರಮ ಆರಂಭಿಸಲಿದೆ. ತಾಲೂಕು ಆಸ್ಪತ್ರೆಗಳಲ್ಲಿ 24/7 ಹೆರಿಗೆ ಸೇವೆ ಒದಗಿಸುವ ಮೂಲಕ ಸಾಮಾನ್ಯ ಹೆರಿಗೆಯನ್ನು ಉತ್ತೇಜಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

ಅನಗತ್ಯ ಸಿಸೇರಿಯನ್ ಹೆರಿಗೆ ತಡೆಗೆ ಹೊಸ ಯೋಜನೆ: ದಿನೇಶ್ ಗುಂಡೂರಾವ್ ಘೋಷಣೆ
ಅನಗತ್ಯ ಸಿಸೇರಿಯನ್ ಹೆರಿಗೆ ತಡೆಗೆ ಹೊಸ ಯೋಜನೆ: ದಿನೇಶ್ ಗುಂಡೂರಾವ್ ಘೋಷಣೆ

Updated on: Dec 17, 2024 | 7:38 AM

ಬೆಳಗಾವಿ, ಡಿಸೆಂಬರ್ 17: ಕರ್ನಾಟಕದಲ್ಲಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚಾಗಲು ಖಾಸಗಿ ಆಸ್ಪತ್ರೆಗಳೇ ಕಾರಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅನವಶ್ಯಕವಾಗಿ ಸಿಸೇರಿಯನ್ ಹೆರಿಗೆ ಮಾಡುವುದನ್ನು ತಡೆಯಲು ಮುಂದಿನ ತಿಂಗಳು ವಿಶೇಷ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಘೋಷಿಸಲಿದೆ ಎಂದು ವಿಧಾನ ಪರಿಷತ್ತಿಗೆ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆಗಳು ಹೆಚ್ಚಾಗಿದ್ದು, ಒಟ್ಟಾರೆ ಹೆರಿಗೆಗಳ ಪೈಕಿ ಅವುಗಳ ಪಾಲು ಶೇ 46 ರಷ್ಟಿದೆ. ಒಟ್ಟು ಸಿಸೇರಿಯನ್ ಹೆರಿಗೆಗಳಲ್ಲಿ ಶೇಕಡಾ 61 ರಷ್ಟು ಖಾಸಗಿ ಆಸ್ಪತ್ರೆಗಳನ್ನು ನಡೆಯುತ್ತವೆ. ಶೇಕಡಾ 36 ರಷ್ಟು ಸರ್ಕಾರಿ ಆಸ್ಪತ್ರೆಗಳಿಂದ ವರದಿಯಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಎಂಎಲ್ಸಿ ಜಗದೇವ್ ಗುತ್ತೇದಾರ್ ಪ್ರಶ್ನೆಗೆ ಉತ್ತರಿಸುವಾಗ ಸಚಿವರು ಈ ವಿವರ ನೀಡಿದ್ದಾರೆ.

ಅನಗತ್ಯ ಸಿಸೇರಿಯನ್ ಹೆರಿಗೆಗಳನ್ನು ತಡೆಯುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಅದರ ತಡೆಗಾಗಿ ಇಲಾಖೆಯು ಪ್ರತ್ಯೇಕ ಕಾರ್ಯಕ್ರಮವನ್ನು ಜನವರಿಯಲ್ಲಿ ಪ್ರಾರಂಭಿಸಲಿದೆ ಎಂದು ಸದನಕ್ಕೆ ತಿಳಿಸಿದರು.

‘ಹಣದ ಉದ್ದೇಶದಿಂದ ಸಿಸೇರಿಯನ್’

ಕೆಲವು ಖಾಸಗಿ ಆಸ್ಪತ್ರೆಗಳು ಕೇವಲ ಹಣದ ಉದ್ದೇಶದಿಂದ ಶೇಕಡಾ 80 ರಿಂದ 90 ರಷ್ಟು ಪ್ರಕರಣಗಳಲ್ಲಿ ಸಿಸೇರಿಯನ್ ಹೆರಿಗೆಗಳನ್ನು ಮಾಡಿಸುತ್ತವೆ. ಸಾಮಾನ್ಯ ಹೆರಿಗೆಗೆ ಹೋಲಿಸಿದರೆ ಇದು ಸುಲಭವಾಗಿರುವುದೂ ಆ ಆಸ್ಪತ್ರೆಗಳ ನಡೆಗೆ ಕಾರಣ ಇರಬಹುದು ಎಂದು ಸಚಿವರು ಗಮನಸೆಳೆದರು.

ಗರ್ಭಿಣಿಯರಿಗೆ ಮಾನಸಿಕ ಸಿದ್ಧತೆಯೂ ಅಗತ್ಯ: ಗುಂಡೂರಾವ್

ಗರ್ಭಿಣಿಯರನ್ನು ಸಾಮಾನ್ಯ ಹೆರಿಗೆಗೆ ಮಾನಸಿಕವಾಗಿ ಸಿದ್ಧಪಡಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ. ಜತೆಗೆ, ವೈದ್ಯರ ನಿರ್ಧಾರದ ಹಿಂದಿನ ಅಗತ್ಯ ಮತ್ತು ಕಾರಣವನ್ನು ತಿಳಿಯಲು ನಾವು ಈಗಾಗಲೇ ಪ್ರತಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆಗಳ ಲೆಕ್ಕಪರಿಶೋಧನೆಯನ್ನು ನಡೆಸುತ್ತಿದ್ದೇವೆ ಎಂದೂ ತಿಳಿಸಿದ್ದಾರೆ.

ತಾಲೂಕು ಆಸ್ಪತ್ರೆಗಳಲ್ಲಿ 24/7 ಹೆರಿಗೆ ಸೇವೆ

ಸಿಸೇರಿಯನ್ ಹೆರಿಗೆಯನ್ನು ತಪ್ಪಿಸಲು ತಾಲೂಕು ಆಸ್ಪತ್ರೆಗಳಲ್ಲಿ 24/7 ಹೆರಿಗೆ ಸೇವೆ ಒದಗಿಸುವ ಸರ್ಕಾರದ ಯೋಜನೆಯ ಬಗ್ಗೆಯೂ ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸುದೀರ್ಘ 15 ಗಂಟೆ ವಿಧಾನಸಭೆ ಕಲಾಪ, ರಾತ್ರಿ 1 ಗಂಟೆವರೆಗೂ ನಡೆದ ಅಧಿವೇಶನ: ದಶಕದ ಬಳಿಕ ದಾಖಲೆ

ರಾಜ್ಯದಲ್ಲಿ ಭ್ರೂಣಹತ್ಯೆ ಪ್ರಕರಣಗಳ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, 2023-24 ಮತ್ತು 2024-25 ರಲ್ಲಿ 45 ಜನರನ್ನು ಎಂದು ತಿಳಿಸಿದ್ದಾರೆ. ಬೆಳಗಾವಿ ಕೋಲಾರ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಪ್ರಕರಣಗಳು ದಾಖಲಾಗಿವೆ ಎಂದೂ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us