AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರೇನು ನಿಮ್ಮ ಜಹಗೀರೇ: ತಗ್ಗಿಬಗ್ಗಿ ನಡೆಯಬೇಕೆಂಬ ಹೇಳಿಕೆಗೆ ಅಶೋಕ್ ಕೌಂಟರ್, ಡಿಕೆಶಿ ಸ್ಪಷ್ಟನೆ ಇಲ್ಲಿದೆ

ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ವಿತರಣೆಯಲ್ಲಿ ಜಯನಗರವನ್ನು ಹೊರಗಿಟ್ಟಿರುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ‘ತಗ್ಗಿ-ಬಗ್ಗಿ ನಡೆಯಬೇಕು' ಹೇಳಿಕೆ ಆಕ್ಷೇಪಕ್ಕೆ ಒಳಗಾಗಿದ್ದು, ಆರ್. ಅಶೋಕ್ ಅವರು ಟ್ವೀಟ್ ಮೂಲಕ ಟೀಕಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ವಿವರ ಇಲ್ಲಿದೆ.

ಬೆಂಗಳೂರೇನು ನಿಮ್ಮ ಜಹಗೀರೇ: ತಗ್ಗಿಬಗ್ಗಿ ನಡೆಯಬೇಕೆಂಬ ಹೇಳಿಕೆಗೆ ಅಶೋಕ್ ಕೌಂಟರ್, ಡಿಕೆಶಿ ಸ್ಪಷ್ಟನೆ ಇಲ್ಲಿದೆ
ಡಿಸಿಎಂ ಡಿಕೆ ಶಿವಕುಮಾರ್ & ಅಶೋಕ್
ಗಣಪತಿ ಶರ್ಮಾ
|

Updated on:Nov 07, 2024 | 1:05 PM

Share

ಬೆಂಗಳೂರು, ನವೆಂಬರ್ 7: ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ನೀಡುವಾಗ ಜಯನಗರವನ್ನು ಹೊರಗಿಟ್ಟಿರುವ ವಿಚಾರ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಸಂಸದ ತೇಜಸ್ವಿ ಸೂರ್ಯ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಡಿಸಿಎಂ ನೀಡಿದ್ದ ತಗ್ಗಿ-ಬಗ್ಗಿ ನಡೆಯಬೇಕೆಂಬ ಹೇಳಿಕೆ ಈಗ ಆಕ್ಷೇಪಕ್ಕೆ ಗುರಿಯಾಗಿದೆ. ಈ ವಿಚಾರವಾಗಿ ಖಂಡಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಟ್ವೀಟ್ ಮಾಡಿದ್ದು, ಹಾಗೆ ಹೇಳಲು ಬೆಂಗಳೂರೇನು ನಿಮ್ಮ ಜಹಗೀರೇ ಎಂದು ಡಿಕೆ ಶಿವಕುಮಾರ್​​ ಅವರನ್ನು ಪ್ರಶ್ನಿಸಿದ್ದಾರೆ.

‘ಅನುದಾನ ಬೇಕಾದರೆ ನನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು – ಡಿಸಿಎಂ ಸಾಹೇಬರ ಲೇಟೆಸ್ಟ್ ನುಡಿಮುತ್ತುಗಳು. ಡಿಕೆ ಶಿವಕುಮಾರ್ ಅವರೇ, ನಿಮ್ಮ ಬಳಿ ತಗ್ಗಿ-ಬಗ್ಗಿ ಇರಬೇಕು ಅನ್ನುವುದಕ್ಕೆ ಬೆಂಗಳೂರು ನಗರವನ್ನು ನಿಮ್ಮ ಜಹಗೀರು ಅಂದುಕೊಡಿದ್ದೀರಾ? ಅಧಿಕಾರ ಎನ್ನುವುದು ಮತದಾರರು ಕೊಟ್ಟಿರುವ ಭಿಕ್ಷೆ, ಸಂವಿಧಾನ ಕೊಟ್ಟಿರುವ ಜವಾಬ್ದಾರಿಯೇ ಹೊರತು ಪಾಳೆಗಾರಿಕೆ ಅಲ್ಲ. ಪ್ರಜಾಪ್ರಭುತ್ವದಲ್ಲಿ ನಾವು ತಗ್ಗಿ-ಬಗ್ಗಿ ನಡೆಯಬೇಕಿರುವುದು ಮತಭಿಕ್ಷೆ ನೀಡಿರುವ ಮತದಾರ ಪ್ರಭುಗಳಿಗೆ, ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಸಂವಿಧಾನಕ್ಕೆ ಹೊರತು ಯಾವ ದೊಣ್ಣೆ ನಾಯಕನಿಗೂ ಅಲ್ಲ’ ಎಂದು ಅಶೋಕ್ ತಿರುಗೇಟು ನೀಡಿದ್ದಾರೆ. ಮುಂದುವರಿದು, ಈ ನಿಮ್ಮ (ಡಿಕೆ ಶಿವಕುಮಾರ್ ಉದ್ದೇಶಿಸಿ) ಒಣ ಪ್ರತಿಷ್ಠೆ, ಧಿಮಾಕು, ದರ್ಬಾರು ಎಲ್ಲ ಬಿಟ್ಟು ಜನರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ. ಯಾವುದೇ ಕ್ಷೇತ್ರದ ಬಗ್ಗೆ ತಾರತಮ್ಯ ಮಾಡದೆ ಸಚಿವರಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ’ ಎಂದು ಟ್ವಿಟರ್​ನಲ್ಲಿ ಅಶೋಕ್

ಅಶೋಕ್ ಟ್ವೀಟ್

ಡಿಕೆ ಶಿವಕುಮಾರ್ ಸ್ಪಷ್ಟನೆ ಏನು?

ಅಶೋಕ್ ಟ್ವೀಟ್ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಆ ರೀತಿಯಾಗಿ ಹೇಳಿದ್ದು ಸಂಸದ ತೇಜಸ್ವಿ ಸೂರ್ಯ ಬಳಿ ಶಾಸಕ ಸಿಕೆ ರಾಮಮೂರ್ತಿ ಬಗ್ಗೆ. ನಾನು ಎಂಎಲ್ಎ ಆದಮೇಲೆ ಬೆಂಗಳೂರು ಅಧೋಗತಿಗೆ ಹೋಗಿದೆ ಎಂದಿದ್ದರು. ಅದಕ್ಕೆ ಹಾಗೆ ಹೇಳಿದ್ದೆ. ಅಲ್ಲದೆ, ಏನು ಅಗತ್ಯವಿದೆಯೋ ಲೆಕ್ಕ ಕೊಡಿ ಅಂತ ಹೇಳಿದ್ದೆ ಎಂದು ಹೇಳಿದರು.

ಇದನ್ನೂ ಓದಿ: ನನ್ನ ಬಳಿ ತಗ್ಗಿ ಬಗ್ಗಿ ಇರಬೇಕು, ಬೇರೆಯವರ ಜತೆಗಿದ್ದಂತೆ ಇದ್ದರೆ ಆಗುವುದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಮಾತು

ನಮ್ಮ ಮೆಟ್ರೋ ನಾಗಸಂದ್ರ ಮಾದಾವರ ವಿಸ್ತರಿತ ಮಾರ್ಗದ ಮೆಟ್ರೋ ರೈಲಿನಲ್ಲಿ ಮಾತನಾಡಿದ್ದ ಸಂದರ್ಭ ಬುಧವಾರ ಸಂಸದ ತೇಜಸ್ವಿ ಸೂರ್ಯ ಜಯನಗರಕ್ಕೆ ಅನುದಾನ ನೀಡದಿರುವ ಬಗ್ಗೆ ಡಿಕೆ ಶಿವಕುಮಾರ್​ ಬಳಿ ಪ್ರಸ್ತಾಪಿಸಿದ್ದರು. ಆಗ ಡಿಕೆ ಶಿವಕುಮಾರ್ ತಗ್ಗಿ-ಬಗ್ಗಿ ನಡೆಯುವ ಹೇಳಿಕೆ ನೀಡಿದ್ದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:57 pm, Thu, 7 November 24