
ಬೆಂಗಳೂರು, ಆಗಸ್ಟ್ 25: ಆರ್ಸಿಬಿ ವಿಜಯೋತ್ಸವ ಕಾಲ್ತುಳಿತ ಘಟನೆಯ ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ‘ನಮಸ್ತೇ ಸದಾ ವತ್ಸಲೇ’ ಎಂದು ಆರ್ಎಸ್ಎಸ್ ಗೀತೆ (RSS Song) ಹಾಡಿರುವುದು ಈಗ ಕಾಂಗ್ರೆಸ್ ಆಂತರಿಕ ವಲಯದಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಡಿಕೆ ಶಿವಕುಮಾರ್ ಅವರ ಈ ನಡೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿಡಿಮಿಡಿಗೊಂಡಿದ್ದಾರೆ. ಅವರು ಏನು ಬೇಕಾದರೂ ಮಾಡಬಹುದು ಎಂದಿದ್ದಾರೆ. ಈ ಮೂಲಕ ರಾಜಣ್ಣರ ಅಸಮಾಧಾನದ ಹೊಗೆ ಎದ್ದಿದೆ. ಇಷ್ಟಕ್ಕೆ ಸುಮ್ಮನಾಗದ ರಾಜಣ್ಣ, ಡಿಕೆಶಿಯ ಅನೇಕ ಕಾರ್ಯಕ್ರಮಗಳನ್ನು ನೆನಪಿಸಿದ್ದಾರೆ.
ಅವರು (ಡಿಕೆ ಶಿವಕುಮಾರ್) ಆರ್ಎಸ್ಎಸ್ ಗೀತೆ ಹಾಡಬಹುದು. ಖಾಸಗಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಜತೆ ವೇದಿಕೆ ಹಂಚಿಕೊಳ್ಳಬಹುದು. ಆದರೆ, ನಾವು ಮಾತ್ರ ಏನೂ ಮಾಡುವಂತಿಲ್ಲ ಎಂದು ರಾಜಣ್ಣ ಕಿಡಿಕಾರಿದ್ದಾರೆ.
ಕುಂಭಮೇಳದಲ್ಲಿ ಗಂಗಾ ಸ್ನಾನ ಮಾಡಿದ ಕೂಡಲೇ ಬಡತನ ನಿವಾರಣೆಯಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಅದಾದ ನಂತರ ಡಿಕೆ ಶಿವಕುಮಾರ್ ಅಲ್ಲಿ ಹೋಗಿ ಪುಣ್ಯ ಸ್ನಾನ ಮಾಡಿದರು. ರಾಹುಲ್ ಗಾಂಧಿ ಆಹ್ವಾನವನ್ನೂ ಸ್ವೀಕರಿಸಿದ ಅಂಬಾನಿ ಮಗನ ಮದುವೆಗೆ ಡಿಕೆಶಿ ಹೋಗಿದ್ದರು ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಕೂಡ ಟ್ವೀಟ್ ಮಾಡಿದ್ದು, ಆರ್ಎಸ್ಎಸ್ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂದು ಬರೆದುಕೊಂಡಿದ್ದಾರೆ.
ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ ಭಾರತದ ಪ್ರತಿ ಪ್ರಜೆಯೂ ‘‘ಆರ್ಎಸ್ಎಸ್ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು’’ ಎಂಬ ಪ್ರತಿಜ್ಞೆ ಕೈಗೊಳ್ಳಬೇಕು. ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ನರ ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ RSS ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಏಕೆಂದರೆ, ಆರ್ಎಸ್ಎಸ್ ಸಂವಿಧಾನಕ್ಕೆ ಶತ್ರು, ಆರ್ಎಸ್ಎಸ್ ಐಕ್ಯತೆಗೆ ಶತ್ರು, ಆರ್ಎಸ್ಎಸ್ ರಾಷ್ಟ್ರಧ್ವಜಕ್ಕೆ ಶತ್ರು, ಆರ್ಎಸ್ಎಸ್ ರಾಷ್ಟ್ರಗೀತೆಗೆ ಶತ್ರು, ಆರ್ಎಸ್ಎಸ್ ಏಕತೆಗೆ, ಸಾರ್ವಭೌಮತೆಗೆ ಶತ್ರು ಎಂದು ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ.
ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ ಭಾರತದ ಪ್ರತಿ ಪ್ರಜೆಯೂ “RSSಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು“ ಎಂಬ ಪ್ರತಿಜ್ಞೆ ಕೈಗೊಳ್ಳಬೇಕು.
ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ನರ ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ RSS ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 23, 2025
ಹೀಗೆ ಕಾಂಗ್ರೆಸ್ ನಾಯಕರು ಆರ್ಎಸ್ಎಸ್ ವಿರುದ್ಧ ಖಂಡತುಂಡವಾಗಿ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಡಿಕೆ ಶಿವಕುಮಾರ್ ಆರ್ಎಸ್ಎಸ್ ಗೀತೆ ಉಲ್ಲೇಖಿಸಿದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ. ‘‘ಬಿಜೆಪಿಗೆ ಹೋಗ್ತಾರಂತಲ್ಲ’’ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದರೆ, ಡಿಕೆ ಸಂಸ್ಕೃತ ಪಂಡಿತರು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಆರ್ಎಸ್ಎಸ್ ಎಂಬುದು ಬಿಜೆಪಿಯ ಸಂಸ್ಥೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಏತನ್ಮಧ್ಯೆ, ಉಪ ಮುಖ್ಯಮಂತ್ರಿಗಳಾಗಿ ಡಿಕೆ ಶಿವಕುಮಾರ್ ಆರ್ಎಸ್ಎಸ್ ಗೀತೆ ಹಾಡಿದ್ದರೆ ಆಕ್ಷೇಪಿಸುವುದಿಲ್ಲ. ಯಾಕೆಂದರೆ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ. ಆದರೆ, ಕೆಪಿಸಿ ಅಧ್ಯಕ್ಷರಾಗಿ ಆರ್ಎಸ್ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಬಿಕೆ ಹರಿಪ್ರಸಾದ್ ಮಾತಿನ ವಿಡಿಯೋ: ಕೆಪಿಸಿಸಿ ಅಧ್ಯಕ್ಷರಾಗಿ ಆರ್ಎಸ್ಎಸ್ ಗೀತೆ ಹಾಡಿದ್ದರೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು: ಬಿಕೆ ಹರಿಪ್ರಸಾದ್ ಆಗ್ರಹ
ಮತ್ತೊಂದೆಡೆ, ಕೆಲವು ಮಂದಿ ಕಾಂಗ್ರೆಸ್ ನಾಯಕರು ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅನ್ಯಥಾ ಭಾವಿಸಬಾರದು ಎಂದಿದ್ದಾರೆ.
ಪ್ರತಿಪಕ್ಷ ಬಿಜೆಪಿ ಡಿಕೆ ಶಿವಕುಮಾರ್ ನಡೆಯನ್ನು ಸ್ವಾಗತಿಸಿದೆ. ಈ ಬಗ್ಗೆ ಮಾತನಾಡಿರುವ ಶಾಸಕ ಅಶ್ವತ್ಥ್ ನಾರಾಯಣ್, ಅವರ ಪಕ್ಷಕ್ಕೆ ತಿಳಿಸಿದಂತಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿದ್ದೇಕೆ? ಡಿಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ
ಒಟ್ಟಿನಲ್ಲಿ, ಡಿಕೆ ಶಿವಕುಮಾರ್ ಸಂಘ ಗೀತೆ ಹಾಡಿದ್ದನ್ನು ಬಿಜೆಪಿಯವರೇನೋ ಸ್ವಾಗತ ಮಾಡುತ್ತಿದ್ದಾರೆ. ಆದರೆ, ಹಗಲೂ ರಾತ್ರಿ ಸಂಘದ ಸಿದ್ಧಾಂತಗಳನ್ನು ಕಿತ್ತು ಎಸೆಯಬೇಕು ಎಂದು ಬಯಸುವ ಕಾಂಗ್ರೆಸ್ ನಾಯಕರಿಗೆ ಡಿಕೆ ಪ್ರಾರ್ಥನೆಯ ವೈಖರಿ ಬಿಸಿ ತುಪ್ಪದಂತಾಗಿರುವುದು ನಿಜ.
Published On - 7:08 am, Mon, 25 August 25