ದೇವೇಗೌಡರ ಕುಟುಂಬದ ವಿರುದ್ಧ ವೈರತ್ವ ಇಟ್ಕೊಂಡು ಅಭಿವೃದ್ಧಿ ಕೊಲ್ಲಬೇಡಿ: ಕಾಂಗ್ರೆಸ್​ಗೆ ರೇವಣ್ಣ ಎಚ್ಚರಿಕೆ

ಮೂರು ತಿಂಗಳ ಬಳಿಕ ಹಾಸನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮಾಜಿ ಸಚಿವ ಹೆಚ್​ಡಿ ರೇವಣ್ಣ, ದೇವೇಗೌಡರ ಕುಟುಂಬದ ವಿರುದ್ಧ ವೈರತ್ವ ಇಟ್ಟುಕೊಂಡು ಜಿಲ್ಲೆಯ ಅಭಿವೃದ್ಧಿ ಕೊಲ್ಲಬೇಡಿ ಎಂದು ಕಾಂಗ್ರೆಸ್​ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ದೇವೇಗೌಡರು ಇರುವ ಕಾಣರ ಹಾಸನ ಹೀಗೆ ಬೆಳೆದಿದೆ ಎಂದು ಕಿಡಿಕಾರಿದ್ದಾರೆ.

ದೇವೇಗೌಡರ ಕುಟುಂಬದ ವಿರುದ್ಧ ವೈರತ್ವ ಇಟ್ಕೊಂಡು ಅಭಿವೃದ್ಧಿ ಕೊಲ್ಲಬೇಡಿ: ಕಾಂಗ್ರೆಸ್​ಗೆ ರೇವಣ್ಣ ಎಚ್ಚರಿಕೆ
ದೇವೇಗೌಡರ ಕುಟುಂಬದ ವಿರುದ್ಧ ವೈರತ್ವ ಇಟ್ಕೊಂಡು ಅಭಿವೃದ್ಧಿ ಕೊಲ್ಲಬೇಡಿ: ಕಾಂಗ್ರೆಸ್​ ವಿರುದ್ಧ ರೇವಣ್ಣ ವಾಗ್ದಾಳಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 14, 2024 | 5:57 PM

ಹಾಸನ, ಆಗಸ್ಟ್​ 14: ಹೆಚ್​ಡಿ ದೇವೇಗೌಡರ (H. D. Deve Gowda) ಕುಟುಂಬದ ವಿರುದ್ಧ ವೈರತ್ವ ಇಟ್ಕೊಂಡು ಅಭಿವೃದ್ಧಿ ಕೊಲ್ಲಬೇಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್​ಡಿ ರೇವಣ್ಣ (HD Revanna) ಹರಿಹಾಯ್ದಿದ್ದಾರೆ.  ಮೂರು ತಿಂಗಳ ಬಳಿಕ ಹಾಸನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೇವೇಗೌಡರು ಇರುವ ಕಾಣರ ಹಾಸನ ಹೀಗೆ ಬೆಳೆದಿದೆ. ಹೀಗಾಗಿ ಜಿಲ್ಲೆಯ ಮುಂದಿನ ಬೆಳವಣಿಗೆ ಹಾಳು ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಲ್ಯಾಂಡ್ ಮಾಫಿಯಾಗೆ ಜಿಲ್ಲಾಡಳಿತ ಸಹಕಾರ ಮಾಡುತ್ತಿದೆ. ಈ ಬಗ್ಗೆ ಮುಂದೆ ಮಾತಾಡುತ್ತೇನೆ. ಇದೇ ರೀತಿ ಜನರಿಗೆ ನೋವು ಕೊಟ್ಟರೆ ಏನು ಮಾಡಬೇಕೆಂದು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ಬದಲಾವಣೆ ಪ್ರಶ್ನೆಯೇ ಇಲ್ಲ-ಡಿಕೆ ಶಿವಕುಮಾರ್​

25 ವರ್ಷಗಳ ರಾಜಕೀಯ ಜೀವನದಲ್ಲಿ ಏಳುಬೀಳು ನೋಡಿದ್ದೇನೆ. 1989 ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷ ಏಳಕ್ಕೆ ಏಳೂ ಸ್ಥಾನ ಸೋತಿದ್ದೆವು. ದೇವೇಗೌಡರ ರಾಜಕಾರಣ ಮುಗಿದೇ ಹೋಯ್ತು ಅಂದರು. ಆದರೆ ನಂತರ ಮತ್ತೆ ದೇವೇಗೌಡರು ನಾಲ್ಕು ವರ್ಷದಲ್ಲಿ ಮುಖ್ಯಮಂತ್ರ, ಪ್ರದಾನಿ ಎಲ್ಲವೂ ಆದರು. ನಂತರ 1999 ರಲ್ಲಿ ಸ್ವಲ್ಪ ಪ್ರಮಾಣದ ಹಿನ್ನಡೆ ಆಗಿತ್ತು. ಹತ್ತು ವರ್ಷಕ್ಕೆ ಒಮ್ಮೆ ಇದು ರಿಪೀಟ್ ಆಗುತ್ತಿದೆ ಎಂದರು.

ಮೂರು ತಿಂಗಳಿಂದ ಎಲ್ಲಾ ನೋಡುತ್ತಿದ್ದೇನೆ

ನನಗೆ ಅವಕಾಶ ಸಿಕ್ಕಾಗ ಜನರ ಕೆಲಸ ಮಾಡಿದ್ದೇನೆ. ಕಳೆದ ಮೂರು ತಿಂಗಳಿಂದ ಏನೇನು ನಡೆಯುತ್ತಿದೆ ನೋಡುತ್ತಿದ್ದೇನೆ. ಜಿಲ್ಲೆಯ ಅಧಿಕಾರಿಗಳು ಯಾವ ರೀತಿ ವರ್ತನೆ ಮಾಡುತ್ತಿದ್ದಾರೆ ಗಮನಿಸಿದ್ದೇನೆ. ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ಮುಗಿದ ಬಳಿಕ ಜಿಲ್ಲೆಯಲ್ಲಿ ಏನು ನಡೆಸುತ್ತಿದೆ ಗೊತ್ತಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಪೋಲಿಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ್​ನಲ್ಲಿ ಏನು ನಡೆಯುತ್ತಿದೆ ಗೊತ್ತಿದೆ ಎಂದು ಹೇಳಿದ್ದಾರೆ.

ರೇವಣ್ಣ ಅವರದ್ದು ಮುಗಿದೇ ಹೋಯಿತು ಎಂದು ಕೆಲ ಅಧಿಕಾರಿಗಳು ಮಾತನಾಡುತ್ತಿರುವುದು ಗೊತ್ತಿದೆ. ಇದೆಲ್ಲವನ್ನೂ ನಾನು ಎದುರಿಸಿಯೇ ಬಂದವನು. ಅಧಿಕಾರಿಗಳನ್ನು ನೋಡಿ ನಾನು ರಾಜಕಾರಣ ಮಾಡಲ್ಲ. ಹಿಂದೆ ನಾನು ಹಾಗೂ ಅಂದಿನ ನಮ್ಮ ಎಂಪಿ ಸೇರಿ ರೈಲ್ವೆ ಮೇಲ್ಸೇತುವೆಗೆ ಅನುದಾನ ತಂದಿದ್ದೆವು. ಈಗ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ವಿ ಸೋಮಣ್ಣ ಅವರಿಗೆ ಹೇಳಿ ಸಹಾಯ ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ರಾಷ್ಟ್ರೀಕೃತ ಬ್ಯಾಂಕ್​​ಗಳ ಸರ್ಕಾರಿ ಖಾತೆ ಕ್ಲೋಸ್​ಗೆ ಸೂಚನೆ

ಶಿರಾಡಿಘಾಟ್​ನಲ್ಲಿ ಪದೇ ಪದೆ ಭೂ ಕುಸಿತವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಶಿರಾಡಿಘಾಟ್​ನಲ್ಲಿ ಟನಲ್ ಮಾಡುವ ಬಗ್ಗೆ ನಾನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಹೇಳಿದ್ದೆ. ನಾನು ಮಂತ್ರಿ ಆಗಿದ್ದಾಗ ಈ ಬಗ್ಗೆ ಗಮನ ಸೆಳೆದಿದ್ದೆ. ಈಗ ದೇವೇಗೌಡರು ಮತ್ತೆ ಈ ಬಗ್ಗೆ ಮಾತನಾಡಿದ್ದಾರೆ. ಗಡ್ಕರಿ ಅವರು ರಾಜ್ಯ ಸರ್ಕಾರ ಸಹಕಾರ ಮಾಡುತ್ತಿಲ್ಲ ಎಂದಿದ್ದಾರೆ. ಅಭಿವೃದ್ಧಿ ಮಾಡೋದಾದರೆ ಮಾಡಲಿ. ಆದರೆ ಏನೇನೊ ಮಾಡಿ ಹಾಳು ಮಾಡಬೇಡಿ. ಅವರು ಹತ್ತು ವರ್ಷ ಇರುತ್ತಾರೋ, ಹದಿನೈದು ವರ್ಷ ಇರುತ್ತಾರೋ ಅಭಿವೃದ್ಧಿ ಮಾಡಲಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:55 pm, Wed, 14 August 24