ಬರಗಾಲವಿದ್ದರೂ ಗ್ಯಾರಂಟಿ ಯೋಜನೆ ಜಾರಿಯಿಂದ ಅದರ ತೀವ್ರತೆ ಕಡಿಮೆಯಿದೆ: ಸಿದ್ದರಾಮಯ್ಯ

| Updated By: Rakesh Nayak Manchi

Updated on: Jan 01, 2024 | 8:51 PM

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕರ್ನಾಟಕ ರಾಜ್ಯ ಪೊಲೀಸ್, ಸುವರ್ಣ ಮಹೋತ್ಸವ ದಿನಾಚರಣೆ 2024 ರ ಸಂಭ್ರಮ ಹಿನ್ನೆಲೆ ಪೊಲೀಸ್ ಅಧಿಕಾರಿಗಳೊಂದಿಗೆ ಕೇಕ್ ಕತ್ತರಿಸಿದ ಸಿದ್ದರಾಮಯ್ಯ ಅವರಿಗೆ ಗೃಹಸಚಿವ ಪರಮೇಶ್ವರ್ ಅವರು ಹೂಗುಚ್ಚ ನೀಡಿ ಹೊಸ ವರ್ಷದ ಶುಭಾಶಯ ತಿಳಿಸಿದರು.

ಬರಗಾಲವಿದ್ದರೂ ಗ್ಯಾರಂಟಿ ಯೋಜನೆ ಜಾರಿಯಿಂದ ಅದರ ತೀವ್ರತೆ ಕಡಿಮೆಯಿದೆ: ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಬೆಂಗಳೂರು, ಜ.1: ಕರ್ನಾಟಕದಲ್ಲಿ ಬರಗಾಲವಿದ್ದರೂ ಗ್ಯಾರಂಟಿ ಯೋಜನೆ ಜಾರಿಯಿಂದ ಅದರ ತೀವ್ರತೆ ಕಡಿಮೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ನಿರೀಕ್ಷಿತ ಫಲ ಕಾಣಲು ಸಮೃದ್ಧಿಯಾಗಿ ಮಳೆಯಾಗಲಿ ಎಂದರು.

ಶೇಕಡಾ 60ಕ್ಕೂ ಹೆಚ್ಚು ಜನ ವ್ಯವಸಾಯದ ಮೇಲೆ ಅವಲಂಬಿತರಾಗಿದ್ದಾರೆ. ಬಡವರ ಕುಟುಂಬಕ್ಕೆ ಹಣ ದೊರೆಯುತ್ತಿದ್ದು ಕೊಳ್ಳುವ ಶಕ್ತಿಯಿದೆ. ಬರಗಾಲವಿದ್ದರೂ ಸ್ವಲ್ಪಮಟ್ಟಿಗೆ ಅದರ ತೀವ್ರತೆ ಕಡಿಮೆಯಾಗಿದೆ. ಇಲ್ಲದಿದ್ದರೆ ಹಾಹಾಕಾರ ಶುರುವಾಗುತ್ತಿತ್ತು ಎಂದರು.

ಸಾರ್ವತ್ರಿಕ ಮೂಲ ಆದಾಯದ ತತ್ವದ ತಳಹದಿಯ ಮೇಲೆ ಜನರ ಆದಾಯ ಹೆಚ್ಚಿಸಿ ಆರ್ಥಿಕ ಚಟುವಟಿಕೆಗಳಿಗೆ ಇಂಬು ದೊರೆತಿದೆ. ರಾಜ್ಯದ ಜನರ ಅಭಿವೃದ್ಧಿಗಾಗಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರ ಆಡಳಿತ ವರ್ಗವನ್ನು ಆಯ್ಕೆಮಾಡಿದೆ. ಜನಪರ, ಸಮಾಜಮುಖಿ ಧೋರಣೆ ಇದ್ದಾಗ ಸಮಾಜದಲ್ಲಿ ಬದಲಾವಣೆ ತರಲು, ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯ ಎಂದರು.

2024ನೇ ವರ್ಷ ರಾಜ್ಯಕ್ಕೆ ಆಶಾದಾಯಕವಾಗಲಿದೆ: ಸಿದ್ದರಾಮಯ್ಯ

ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗಿನ ಸಭೆಯಲ್ಲಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ ಅವರು, 2024ನೇ ವರ್ಷ ರಾಜ್ಯಕ್ಕೆ ಆಶಾದಾಯಕವಾಗಲಿದೆ. ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 35 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಪ್ರಕೃತಿ ಸಹಾಯವಿಲ್ಲದಿದ್ದರೆ, ಏನು ಪರಿಹಾರ ಕೊಟ್ಟರೂ ಸಾಕಾಗುವುದಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಈ ವೈಪರೀತ್ಯ ಕಾಣುತ್ತಿದ್ದೇವೆ. ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. 2024ರಲ್ಲಿ ಉತ್ತಮ ಮಳೆ, ಬೆಳೆ ಆಗಲೆಂದು ಪ್ರಾರ್ಥಿಸುತ್ತೇನೆ ಎಂದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್: ಆರ್.ಅಶೋಕ್ ವಾಗ್ದಾಳಿ

ಜನರ ನಿರೀಕ್ಷೆಗಳು ಹುಸಿಯಾಗದ ರೀತಿ ಕೆಲಸ ಮಾಡಬೇಕಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಕಿವತಿ ಮಾತು ಹೇಳಿದ ಸಿದ್ದರಾಮಯ್ಯ, ಸಂವಿಧಾನ ಅರಿತು ಎಲ್ಲರೂ ಕೂಡ ಅದರಂತೆ ನಡೆಯಬೇಕಿದೆ. ಆ ದಿಕ್ಕಿನಲ್ಲಿ ಎಲ್ಲರೂ ಪ್ರಯತ್ನಿಸೋಣ ಎಂದರು. ಇದೇ ವೇಳೆ ಸರ್ಕಾರದ ಅಭಿವೃದ್ಧಿ ಆಯುಕ್ತೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಬರೆದಿರುವ ‘ಸುಸ್ಥಿರ ಬದುಕಿನ ಸುತ್ತ ಆಶಾಕಿರಣ’ ಪುಸ್ತಕ ಬಿಡುಗಡೆ ಮಾಡಿದರು.

ಪೊಲೀಸ್ ಅಧಿಕಾರಿಗಳೊಂದಿಗೆ ಕೇಕ್ ಕತ್ತರಿಸಿದ ಸಿದ್ದರಾಮಯ್ಯ

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಡಿಜಿ ಐಜಿಪಿ ಅಲೋಕ್ ಮೋಹನ್, ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ದಿನಾಚರಣೆ 2024ರ ಸಂಭ್ರಮಾಚರಣೆ ಹಿನ್ನೆಲೆ ಸಿದ್ದರಾಮಯ್ಯ ಅವರು ಸಭೆಯಲ್ಲಿ ಕೇಕ್ ಕತ್ತರಿಸಿದರು. ಈ ವೇಳೆ ಗೃಹಸಚಿವ ಪರಮೇಶ್ವರ್ ಅವರು ಸಿಎಂಗೆ ಹೂಗುಚ್ಚ ನೀಡಿ ಹೊಸ ವರ್ಷದ ಶುಭಾಶಯ ಕೋರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ