Legislative Council Election: ಕರ್ನಾಟಕ ವಿಧಾನಪರಿಷತ್‌ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

| Updated By: ರಮೇಶ್ ಬಿ. ಜವಳಗೇರಾ

Updated on: May 02, 2024 | 4:58 PM

Karnataka Legislative Council Elections 2024: ಲೋಕಸಭಾ ಚುನಾವಣೆ ಗದ್ದಲದ ಮಧ್ಯೆಯೇ ಕರ್ನಾಟಕ ವಿಧಾನಪರಿಷತ್​ನ ಆರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಮೂರು ಶಿಕ್ಷಕರ ಕ್ಷೇತ್ರಗಳು ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಹಾಗಾದ್ರೆ, ಯಾವ್ಯಾವ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ? ಯಾವಾಗ ಮತದಾನ? ಫಲಿತಾಂಶ ಯಾವಾಗ? ನಾಮಪತ್ರದ ಸಲ್ಲಿಕೆ, ಹಿಂಪಡೆಯುವಿಕೆ ವಿವರ ಇಲ್ಲಿದೆ.

Legislative Council Election: ಕರ್ನಾಟಕ ವಿಧಾನಪರಿಷತ್‌ 6 ಸ್ಥಾನಗಳಿಗೆ ಚುನಾವಣೆ ಘೋಷಣೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, (ಮೇ.02): ಕರ್ನಾಟಕ ವಿಧಾನಪರಿಷತ್‌ನ (Karnataka Legislative Council Elections 2024) ಆರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. 3 ಶಿಕ್ಷಕರ ಕ್ಷೇತ್ರ ಮತ್ತು 3 ಪದವೀಧರ ಕ್ಷೇತ್ರಗಳಿಗೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಜೂನ್ 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಇನ್ನು ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಈಶಾನ್ಯ ಪದವೀಧರ, ನೈಋತ್ಯ ಪದವೀಧರ, ಬೆಂಗಳೂರು ಪದವೀಧರ , ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಮೇ 16 ಕೊ‌ನೆಯ ದಿನವಾಗಿದೆ. ಇನ್ನು ನಾಮಪತ್ರ ಹಿಂಪಡೆಯಲು ಮೇ 20 ಕೊನೆಯ ದಿನವಾಗಿದೆ.

ಆರು ಸದಸ್ಯರ ಅಧಿಕಾರವಧಿ ಅಂತ್ಯ

  • ಈಶಾನ್ಯ ಪದವೀಧರ ಕ್ಷೇತ್ರದ ಪರಿಷತ್ ಸದಸ್ಯ ಡಾ ಚಂದ್ರಶೇಖರ್ ಬಿ ಪಾಟೀಲ್.
  • ನೈಋತ್ಯ ಪದವೀಧರ ಕ್ಷೇತ್ರ- ಆಯನೂರು ಮಂಜುನಾಥ್
  • ಬೆಂಗಳೂರು ಪದವೀಧರ- ಎ. ದೇವೇಗೌಡ
  • ಆಗ್ನೇಯ ಶಿಕ್ಷಕರ ಕ್ಷೇತ್ರ-ವೈ ಎ ನಾರಾಯಣಸ್ವಾಮಿ
  • ನೈಋತ್ಯ ಶಿಕ್ಷಕರ ಕ್ಷೇತ್ರ- ಎಸ್​ಎಲ್​ ಬೋಜೇಗೌಡ
  • ದಕ್ಷಿಣ ಶಿಕ್ಷಕರ ಕ್ಷೇತ್ರ- ಮರಿತಿಬ್ಬೇಗೌಡ

ಮೇಲೆ ತಿಳಿಸಲಾದ ಆರು ಸದಸ್ಯರ ವಿಧಾನಪರಿಷತ್ ಅವಧಿ ಜೂನ್ 21 ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆ ಆಗಿದೆ. ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಆಕಾಂಕ್ಷಿಗಳಲ್ಲಿ ಟಿಕೆಟ್​ ತಳಮಳ ಶುರುವಾಗಿದೆ.

ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ

ಬಿಜೆಪಿ ತೊರೆದ ತೇಜಸ್ವಿನಿ ಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಜೆಡಿಎಸ್‌ ತೊರೆದ ಮರಿತಿಬ್ಬೇಗೌಡ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಲ್ಲದೆ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಕ್ಕೆ ಬಿಜೆಪಿ ಕಾಂಗ್ರೆಸ್ ನಿಂದ ಸಾಕಷ್ಟು ಆಕಾಂಕ್ಷಿಗಳು ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ. ಇನ್ನು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಟಿಕೆಟ್​ ಕೈತಪ್ಪಿರುವ ನಾಯಕರು ಸಹ ಇದೀಗ ಪರಿಷತ್​ಗೆ ಪೈಪೋಟಿ ನಡೆಸಿದ್ದಾರೆ.

ಇಕ್ಕಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರು

ಹೌದು…ಕಳೆದ ವಿಧಾನಸಭೆ ಮತ್ತು ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆ ಟಿಕೆಟ್​ ಆಕಾಂಕ್ಷಿಯಾಗಿದ್ದ ಕೆಲವರಿಗೆ ಟಿಕೆಟ್​ ಕೈತಪ್ಪಿದೆ. ಮುಂಬರುವ ವಿಧಾನಪರಿಷತ್​ನಲ್ಲಿ ಅವಕಾಶ ಮಾಡಿಕೊಡುವುದಾಗಿ ನಾಯಕರನ್ನು ಸಮಾಧಾನಪಡಿಸಿದ್ದಾರೆ. ಹೀಗಾಗಿ ಹಲವು ನಾಯಕರು ವಿಧಾನಪರಿಷತ್ ಚುನಾವಣೆಗಾಗಿ ಎದುರು ನೋಡುತ್ತಿದ್ದರು. ಇದೀಗ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಕೊಟ್ಟ ಭರವಸೆಯಂತೆ ಟಿಕೆಟ್ ನೀಡಿ ಎಂದು ನಾಯಕರು ಎದ್ದು ನಿಲ್ಲುವ ಸಾಧ್ಯತೆಗಳಿವೆ. ಈ ಹಿಂದಿನ ಚುನಾವಣೆಯಲ್ಲಿ ಆಯಾ ಸಮಯಕ್ಕೆ ನಾಯಕರಿಗೆ ಪರಿಷತ್ ಭರವಸೆ ನೀಡಿ ಸಮಾಧಾನ ಮಾಡಿದ್ದ ರಾಜ್ಯ, ಹೈಕಮಾಂಡ್ ನಾಯಕರು ಕೊಟ್ಟ ಭರವಸೆ ಈಡೇರಿಸುವ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ.

ಸಾಕಷ್ಟು ನಾಯಕರು ಟಿಕೆಟ್ ಆಕಾಂಕ್ಷಿಗಳಿದ್ದು, ಹೈಕಮಾಂಡ್ ಯಾರಿಗೆಲ್ಲಾ ಮಣೆ ಹಾಕುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Thu, 2 May 24