ಚುರುಕು ಮುಟ್ಟಿಸಿದ ಡಿಕೆಶಿ:ಸರ್ಕಾರಿ ನೌಕರರು ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ನಿನ್ನೆ (ಜೂನ್ 04) ಪ್ರಮುಖ ಅಧಿಕಾರಿಗಳ ಸಭೆ ನಡೆಸಿದ ಡಿಕೆಶಿ, ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳದೇ ಆತ್ಮಸಾಕ್ಷಿಯಾಗಿ ಪಾದರ್ಶಕವಾಗಿ ಕೆಲಸ ನಿರ್ವಹಿಸುವಂತೆ ಖಡಕ್ ಸಲಹೆ ಸೂಚನೆಗಳನ್ನ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರಿಗೆ ಖಡಕ್ ಆದೇಶ ಹೊರಡಿಸಲಾಗಿದ್ದು, ನೌಕರರು ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ ಮಾಡಲಾಗಿದೆ.

ಬೆಂಗಳೂರು, (ಜೂನ್ 05) : ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ (karnataka government employees) ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಖಡಕ್ ಸೂಚನೆ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇಂದು (ಜೂನ್ 05) ಅಧಿಕಾರಿಗಳಿಗೆ ಈ ಆದೇಶ ಹೊರಡಿಸಿದ್ದು, ಹಾಜರಾತಿಗೆ ‘ಕರ್ತವ್ಯ ಆ್ಯಪ್’ (Kartavya App) ಬಳಕೆ ಕುರಿತು ಕೆಳಗಿನ ನಿರ್ದೇಶನಗಳನ್ನು ಪಾಲಿಸಬೇಕು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಚೆಕ್ ಇನ್, ಚೆಕ್ ಔಟ್ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ದಿನಾಂಕ 04-06-2026 ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ‘ಕರ್ತವ್ಯ ಆ್ಯಪ್’ (Kartavya App) ಬಳಕೆ ಕುರಿತು ಕೆಳಗಿನ ನಿರ್ದೇಶನಗಳನ್ನು ಪಾಲಿಸಲು ಸೂಚಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರು ಕಡ್ಡಾಯವಾಗಿ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕೆಂಬ ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಆದೇಶವನ್ನು ಜಾರಿಗೊಳಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆಶಿ, ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆಗಳೇನು?
ಹಾಜರಾತಿ ದಾಖಲಾತಿ
ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ 10 ಗಂಟೆಗೆ ‘ಕರ್ತವ್ಯ ಆಯಪ್’ನಲ್ಲಿ ‘Check In’ ಮಾಡಬೇಕು ಮತ್ತು ಕಚೇರಿಯಿಂದ ನಿರ್ಗಮಿಸುವಾಗ ‘Check Out’ ಮಾಡಬೇಕು. ಆಯಪ್ ಬಳಸುವ ವಿಧಾನವನ್ನು ಯೂಟ್ಯೂಬ್ ಲಿಂಕ್ (https://youtu.be/ZNGtSt2mUPY?si=k3rfqZJIMENeF5q) ಮೂಲಕ ವೀಕ್ಷಿಸಬಹುದು. ಇ-ಆಡಳಿತ ಇಲಾಖೆಯು ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸಿದ ಅಧಿಕಾರಿ, ಸಿಬ್ಬಂದಿಯ ಜಿಲ್ಲಾವಾರು ಮತ್ತು ಕಚೇರಿವಾರು ಮಾಹಿತಿಯನ್ನು AI ತಂತ್ರಜ್ಞಾನದ ಮೂಲಕ ಆಯಾ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸುತ್ತದೆ.
ಇಲಾಖಾ ಮುಖ್ಯಸ್ಥರು ತಮ್ಮ ವೈಯಕ್ತಿಕ ಲಾಗಿನ್ ಮೂಲಕ ‘ಕರ್ತವ್ಯ ಡ್ಯಾಶ್ಬೋರ್ಡ್’ನಲ್ಲಿ ದೈನಂದಿನ ಹಾಜರಾತಿ ವರದಿಯನ್ನು ಪರಿಶೀಲಿಸಬೇಕು ಮತ್ತು ಹಾಜರಾತಿ ದಾಖಲಿಸದವರಿಗೆ ಸೂಕ್ತ ಸೂಚನೆ ನೀಡಬೇಕು. ಒಂದು ವೇಳೆ ಅಧಿಕಾರಿಗಳು ಅಥವಾ ಸಿಬ್ಬಂದಿ ಕಚೇರಿ ಕರ್ತವ್ಯದ ಮೇರೆಗೆ ಪ್ರವಾಸದಲ್ಲಿದ್ದರೆ, ಅವರು ‘OOD’ ಆಯ್ಕೆಯನ್ನು ಬಳಸಿಕೊಂಡು ಪ್ರವಾಸದ ಉದ್ದೇಶವನ್ನು ನಮೂದಿಸಿ ಹಾಜರಾತಿಯನ್ನು ದಾಖಲಿಸಬೇಕು ಮತ್ತು ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ದೃಢೀಕರಿಸಬೇಕು.
ಅಧಿಕಾರಿಗಳಿಗೆ ಆತ್ಮಸಾಕ್ಷಿ ಪಾಠ ಮಾಡಿದ್ದ ಡಿಕೆಶಿ
ಇನ್ನು ಸಿಎಂ ಆದ ಬಳಿಕೆ ಡಿಕೆ ಶಿವಕುಮಾರ್ ಅವರು ನಿನ್ನೆ (ಜೂನ್ 04) ಮೊದಲ ಬಾರಿಗೆ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಜತೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರಮುಖವಾಗಿ ಭ್ರಷ್ಟಾಚಾರ ಮುಕ್ತ, ಪಾದರ್ಶಕ ಕೆಲಸ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಆತ್ಮಸಾಕ್ಷಿ ಪಾಠ ಮಾಡಿದ್ದಾರೆ.




