ಬಾಳೆ ಹಣ್ಣಿಗೆ ಕೃತಕ ಬಣ್ಣ: ಮನಷ್ಯನ ಜೀವಕ್ಕೆ ಎಷ್ಟು ಡೇಂಜರ್? ಆಹಾರ ತಜ್ಞರು ಹೇಳಿದ್ದಿಷ್ಟು

ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಬಾಳೆಹಣ್ಣುಗಳು ರಾಸಾಯನಿಕ ಬಳಸಿ ಹಣ್ಣು ಮಾಡಿದ್ದಾ ಅಥವಾ ಸಹಜವಾಗಿಯೇ ಹಣ್ಣಾಗಿದೆಯಾ ಎಂದು ಗುರುತಿಸುವುದು ಬಹಳ ಮುಖ್ಯ. ಯಾಕೆಂದ್ರೆ ಉಡುಪಿಯಲ್ಲಿ 10,000 ಕೆಜಿಗೂ ಹೆಚ್ಚು ಬಾಳೆಹಣ್ಣುಗಳಿಗೆ ಕೃತಕ ಬಣ್ಣ, ರಾಸಾಯನಿಕ ಬೆರೆಸಿರುವುದು ಬೆಳಕಿಗೆ ಬಂದಿದ್ದು, ಜನರು ಆತಂಕಗೊಂಡಿದ್ದಾರೆ. ಇನ್ನು ರಾಸಾಯನಿಕಯುಕ್ತ ಬಾಳೆ ಹಣ್ಣು ಮನುಷ್ಯನ ಜೀವಕ್ಕೆ ಎಷ್ಟು ಡೇಂಜರ್ ಎನ್ನುವುದನ್ನು ಆಹಾರ ತಜ್ಞರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಬಾಳೆ ಹಣ್ಣಿಗೆ ಕೃತಕ ಬಣ್ಣ: ಮನಷ್ಯನ ಜೀವಕ್ಕೆ ಎಷ್ಟು ಡೇಂಜರ್? ಆಹಾರ ತಜ್ಞರು ಹೇಳಿದ್ದಿಷ್ಟು
Banana

Updated on: Aug 21, 2026 | 7:34 PM

ಬೆಂಗಳೂರು, (ಆಗಸ್ಟ್ 21): ಉಡುಪಿ (Udupi) ಜಿಲ್ಲೆಯ ಅಲೆವೂರು, ಕೆಮತೂರು ಮತ್ತು ದುಗ್ಲಿಪಾದವು ಗ್ರಾಮಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ದಾಳಿಯಲ್ಲಿ ಕೃತಕ ರಾಸಾಯನಿಕ ಬಳಸಿ ಮಾಗಿಸಲಾಗಿದ್ದ ಒಟ್ಟು 10,890 ಕೆ.ಜಿ (ಸುಮಾರು 11 ಟನ್) ಬಾಳೆಹಣ್ಣು (chemical banana) ಪತ್ತೆಯಾಗಿದೆ. ನ್ಯಾಚುರಲ್ ಆಗಿ ಹಣ್ಣಾಗ ಬೇಕಿದ್ದ ಬಾಳೆಹಣ್ಣುಗಳನ್ನು ಅಪಾಯಕಾರಿ ರಾಸಾಯನಿಕ ಬಳಸಿ ಕೃತಕವಾಗಿ ಮಾಗಿಸಲಾಗುತ್ತಿದೆ ಎಂಬುದು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದ್ದು, ನಿಜಕ್ಕೂ ಈ ವಿಚಾರ ಇದೀಗ ಇಡೀ ದೇಶದಾದ್ಯಂತ ಆತಂಕ ಮೂಡಿಸಿದೆ. ರಾಸಾಯನಿಕ ಬಳಸಿ ಮಾಗಿಸಿದ ಬಾಳೆಹಣ್ಣು ತಿಂದರೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬ್ರೇನ್, ಲಿವರ್, ಕಿಡ್ನಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಉದ್ಭವ ಆಗುತ್ತವೆ ಎಂದು ಆಹಾರ ತಜ್ಞರು ತಿಳಿಸಿದ್ದಾರೆ.

ಆಹಾರ ತಜ್ಞೆ ಕೀರ್ತಿ ಶ್ರೀ ಕಿರಿಸಾವೆ ಹೇಳಿದ್ದಿಷ್ಟು

ಬಾಳೆ ಹಣ್ಣುಗಳನ್ನು ಮಾಗಿಸಲು ರಾಸಾಯನಿಕ ಬಳಕೆ ವಿಚಾರದ ಬಗ್ಗೆ ಆಹಾರ ತಜ್ಞೆ ಕೀರ್ತಿ ಶ್ರೀ ಕಿರಿಸಾವೆ ಪ್ರತಿಕ್ರಿಯಿಸಿದ್ದು, ಖಂಡಿತ ಇದು ಮಾನವನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೊಟ್ಟೆ ನೋವು, ಮೈ ಕೆರೆತ, ವಾಂತಿ, ಬೇಧಿ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಹೆಚ್ಚು ಆಕರ್ಷಕವಾಗಿ ಕಾಣಿಸುವ ಹಣ್ಣುಗಳ ಖರೀದಿ ಮಾಡಬೇಡಿ. ನೈಸರ್ಗಿಕವಾಗಿ ಕಾಣಿಸುವ ಹಣ್ಣುಗಳನ್ನು ಹೆಚ್ಚಾಗಿ ಖರೀದಿ ಮಾಡಿ. ರಾಸಾಯನಿಕ ಸೇರಿದೆ ಅಂತ ಸುಲಭವಾಗಿ ಪತ್ತೆ ಹಚ್ಚೋಕೆ ಸಾಧ್ಯವಿಲ್ಲ. ರಾಸಾಯನಿಕಯುಕ್ತ ಹಣ್ಣು ಸೇವಿಸಿದ್ರೆ ಜೀವಕ್ಕೆ ಅಪಾಯ. ಅದರಲ್ಲೂ ಮಕ್ಕಳು, ವೃದ್ಧರು, ಗರ್ಭಿಣಿಯರಂತಹವರ ಮೇಲೆ ಸೂಕ್ಷ್ಮ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿ: ಹಾನಿಕಾರಕ ರಾಸಾಯನಿಕ ಬಳಸಿ ಬಾಳೆಕಾಯಿ ಹಣ್ಣಾಗಿಸುವ ಜಾಲ ಪತ್ತೆ, 10890 ಕೆಜಿ ಹಣ್ಣು ನಾಶ

ಬಾಳೆ ಹಣ್ಣು, ಮಾವಿನ ಹಣ್ಣು, ಕಲ್ಲಂಗಡಿ, ದ್ರಾಕ್ಷಿ ಸೇರಿದಂತೆ ಹಲವು ಹಣ್ಣುಗಳಿಗೆ ಹೆಚ್ಚಾಗಿ ಕೆಮಿಕಲ್ಸ್ ಬಳಸುತ್ತಾರೆ. ಹಣ್ಣುಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಹಲವರು ಅಡ್ಡ ದಾರಿ ಹಿಡಿಯುತ್ತಾರೆ. ಹಣ್ಣುಗಳನ್ನು ಬೆಳೆಯುವಾಗಲೂ ಸಾಕಷ್ಟು ರಾಸಾಯನಿಕ ಹಾಕುತ್ತಾರೆ. ರಾಸಾಯನಿಕ ಬಳಸಿದಾಗ ಹಣ್ಣುಗಳ ಗಾತ್ರದಲ್ಲಿ ಬದಲಾವಣೆ ಆಗಲ್ಲ ಎಂದು ತಿಳಿಸಿದ್ದಾರೆ.

ಸೀಸನ್ ತಕ್ಕಂತೆ ಮಾತ್ರ ಹಣ್ಣುಗಳನ್ನು ಖರೀದಿಸಿ

ಇನ್ನು ಈ ಬಗ್ಗೆ ಮತ್ತೋರ್ವ ಹಿರಿಯ ಆಹಾರ ತಜ್ಞೆ ಡಾ. ಪದ್ಮಿನಿ ಬಿ.ವಿ ಮಾತನಾಡಿದ್ದು, ಅತಿಯಾದ ಆಕರ್ಷಣೆ ಇರುವ ಯಾವ ಹಣ್ಣನ್ನೂ ಖರೀದಿಸಬೇಡಿ, ಸೀಸನ್ ತಕ್ಕಂತೆ ಮಾತ್ರ ಹಣ್ಣುಗಳನ್ನು ಖರೀದಿಸಿ ಸೇವಿಸಬೇಕು. ಸೀಸನ್ ಮುಗಿದ ನಂತರ ಹಣ್ಣು ತಿಂದರೆ ಕಲಬೆರಕೆ ಆಗೋದು ಸಹಜ. ಬಾಳೆ ಹಣ್ಣು ತುಂಬಾ ದಿನ ಇಟ್ಟರೆ ಮೆತ್ತಗೆ ಆಗುತ್ತೆ ಅಂತ ಅಡ್ಡದಾರಿ ಹಿಡಿಯುತ್ತಾರೆ, ಮಾರಾಟ ಆಗುವವರೆಗೂ ಗಟ್ಟಿಯಾಗಿ ಚೆಂದವಾಗಿ ಕಾಣಿಸೋಕೆ ಹೀಗೆಲ್ಲಾ ಮಾಡ್ತಾರೆ. ವ್ಯಾಪಾರ ದೃಷ್ಟಿಯಿಂದ ಜನರ ಅನಾರೋಗ್ಯಕ್ಕೆ ಕಾರಣ ಆಗುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬ್ರೇನ್, ಲಿವರ್, ಕಿಡ್ನಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಉದ್ಭವ ಆಗುತ್ತವೆ. ಮಕ್ಕಳು, ವೃದ್ಧರು, ಗರ್ಭಿಣಿಯರ ಆರೋಗ್ಯ ಬೇಗ ಹದಗೆಡುವ ಸಾಧ್ಯತೆ ಹೆಚ್ಚು . ಇನ್ನು ಕಲಬೆರಕೆ ಆಗಿರೋದು ಸುಲಭವಾಗಿ ಪತ್ತೆ ಹಚ್ಚೋಕೆ ಕಷ್ಟ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Fri, 21 August 26

Loading...
Unable to load recommendations.
Follow Us