ಧರ್ಮ ದಂಗಲ್ ಮಧ್ಯೆ ಗದಗಿನಲ್ಲಿ ಭಾವೈಕ್ಯತೆಯ ಜಾತ್ರೆ: ಫಕಿರೇಶ್ವರನಿಗೆ ಶರಣು ಎಂದ ಹಿಂದೂ, ಮುಸ್ಲಿಮರು
ಗದಗ ಜಿಲ್ಲೆಯ ಶಿರಹಟ್ಟಿಯ ಐತಿಹಾಸಿಕ ಫಕ್ಕಿರೇಶ್ವರ ಮಠದ ಜಾತ್ರೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಆನೆ, ಕುದುರೆಗಳ ಮೆರವಣಿಗೆ ಮತ್ತು ಕಡಬಿನ ಕಾಳಗದಂತಹ ಸಂಪ್ರದಾಯಗಳು ಲಕ್ಷಾಂತರ ಭಕ್ತರನ್ನು ಆಕರ್ಷಿಸಿತು. ಒಂದೇ ಆವರಣದಲ್ಲಿ ಎರಡು ಧರ್ಮಗಳ ಪೂಜಾ ವಿಧಾನಗಳು ನಡೆದಿರುವುದು ಈ ಮಠದ ವಿಶೇಷತೆ.

ಗದಗ, ಮೇ 14: ಜಿಲ್ಲೆಯ ಶಿರಹಟ್ಟಿ ಪಟ್ಟಣದ ಐತಿಹಾಸಿಕ ಫಕ್ಕಿರೇಶ್ವರ ಮಠದ ಅದ್ದೂರಿ ಜಾತ್ರೆ ನಡೆದಿದ್ದು, ಹಿಂದೂ, ಮುಸ್ಲಿಂ (Hindu, Muslim) ಬಾಂಧವರ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಧರ್ಮ ದಂಗಲ್ ವಧ್ಯೆ ಎರಡು ಧರ್ಮದ ಸೌಹಾರ್ದ ಸಂಕೇತವಾಗಿರುವ ಈ ಮಠ ಫಕ್ಕೀರೇಶ್ವರ ಮಠ (Shri Fakkeereshwara Swaami Matha) ಅಂತ ಪ್ರಸಿದ್ಧಿ ಪಡೆದಿದೆ. ಇಂತಹ ಇತಿಹಾಸವಿರುವ ಫಕ್ಕಿರೇಶ್ವರ ಮಠದ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು. ಆನೆ, ಕುದುರೆಗಳ ಅದ್ಧೂರಿ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತರು ಭಾರಿಯಾಗಿದ್ದರು. ಜಯಘೋಷಗಳ ಮಧ್ಯೆ ಅದ್ಧೂರಿ ಕಡಬಿನ ಕಾಳಗ ನಡೆಯಿತು.
ಐತಿಹಾಸಿಕ ಫಕ್ಕಿರೇಶ್ವರ ಮಠದ ಜಾತ್ರೆ ದೇಶದ ಸೌಹಾರ್ದ ಪರಂಪರೆಯ ಇತಿಹಾಸದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತದೆ. ಪ್ರತಿ ವರ್ಷದಂತೆ ಆಗಿ ಹುಣ್ಣಿಮೆಯಂದು ಜಾತ್ರೆ ಆರಂಭವಾಗುತ್ತೆ. ಫಕ್ಕಿರೇಶ್ವರ ಮಠದ ಅದ್ದೂರಿ ಜಾತ್ರೆಗೆ ಹಿಂದೂ, ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಗಮವಾಗಿದೆ. ಶ್ರೀಮಠದ ಶ್ರೀಗಳ ಕುದುರೆ ಮೇಲೆ ಅದ್ಧೂರಿ ಮೆರವಣಿಗೆ ಹಿಂದೂ, ಮುಸ್ಲಿಂ ಲಕ್ಷಾಂತರ ಭಕ್ತರ ಜಯಘೋಷ ಮಧ್ಯೆ ನಡೆಯಿತು.
ಇದನ್ನೂ ಓದಿ: ಈ ಗ್ರಾಮದಲ್ಲಿ ಮಹಡಿ ಮನೆ ನಿರ್ಮಾಣ ಮಾಡಿದ್ರೆ ಕೇಡು: ಏನಿದು ಸತ್ಯಮ್ಮ ದೇವಿಯ ಪವಾಡ?
ಮಠದ ಅಂಗಳದಲ್ಲಿಯೇ ಒಂದು ಭಾಗದಲ್ಲಿ ಗರ್ಭಗುಡಿಯಲ್ಲಿ ಹಿಂದೂ ಧರ್ಮದ ಪ್ರಕಾರ ಪೂಜೆ, ಪುನಸ್ಕಾರಗಳು ನಡೆದರೆ, ಮತ್ತೊಂದೆಡೆ ದರ್ಗಾ ಕೂಡ ನಿರ್ಮಿಸಲಾಗಿದ್ದು, ಇಸ್ಲಾಂ ಧರ್ಮದ ಪ್ರಕಾರ ಸಾಂಪ್ರದಾಯಿಕ ಆಚರಣೆಗಳು ನಡೆದವು. ಈ ಹಿಂದೆ ಬಿಜಾಪುರದ ಸೂಫಿಸಂತ ಖಾಜಾ ಅಮೀನುದ್ದೀನ್ ಅವರ ಅನುಗ್ರಹದಿಂದ ಜಂಗಮ ದಂಪತಿಗಳಾದ ಶಿವಯ್ಯ ಅವರಿಗೆ ಗಂಡು ಮಗು ಜನಿಸಿರುತ್ತೆ. ಖ್ವಾಜಾ ಅವರ ಆದೇಶದಂತೆ ಹುಟ್ಟಿದ ಮಗುವನ್ನು ದರ್ಗಾಕ್ಕೆ ಬಿಡುತ್ತಾರೆ. ಆ ಮಗುವಿಗೆ ಚನ್ನವೀರನೆಂದು ನಾಮಕರಣ ಮಾಡಿ, ಮುಂದೆ ಫಕ್ಕೀರ ಚನ್ನವೀರನೆಂಬ ಅಭಿದಾನ ನೀಡಿದರು.

ತಮ್ಮ ಸೌಹಾರ್ದ ಸಂದೇಶದ ಜೊತೆಗೆ ಹಲವು ಪವಾಡಗಳನ್ನು ಮಾಡಿ ಫಕ್ಕಿರೇಶ್ವರರೆಂದು ಪ್ರಸಿದ್ಧಿ ಪಡೆದು ಫಕ್ಕಿರ ಚನ್ನವೀರರು ಶಿರಹಟ್ಟಿಗೆ ಬಂದು ನೆಲಸಿದರು ಅನ್ನೋದು ಶ್ರೀಮಠದ ಇತಿಹಾಸ. ಹೀಗಾಗಿ ಸದ್ಯ ಎಂಟನೇ ಪೀಠಾಧಿಪತಿಗಳಿದ್ದರು, ಮಠದ ಪರಂಪರೆಯಂತೆ ಒಂದೇ ಅಂಗಳದಲ್ಲಿ ಎರಡು ಧರ್ಮದ ಆಚರಣೆ ಮಾಡುತ್ತ ಜೀವನ ಸಾಗಿಸುವುದರ ಜೊತೆಗೆ ಜಾತ್ರಾ ಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.
ಅದ್ಧೂರಿ ಕಡಬಿನ ಕಾಳಗ
ನಿನ್ನೆ ಅದ್ಧೂರಿ ಕಡಬಿನ ಕಾಳಗ ನಡೆಯಿತು. ಶ್ರೀಮಠದ ಫಕೀರಸಿದ್ದರಾಮ ಶ್ರೀಗಳ ಕುದರೆ ಮೇಲೆ ಮೆರವಣಿಗೆ ಮಾಡಲಾಗುತ್ತೆ. ಆನೆ, ಕುದುರೆಗಳ ಮೆರವಣಿಗೆ ನಡೆಯುತ್ತೆ. ಈ ವೇಳೆ ಶ್ರೀಗಳು ಬೆಲ್ಲ ಎಸೆಯುತ್ತಾರೆ. ಭಕ್ತರು ಶ್ರೀಗಳ ಎಸೆದ ಬೆಲ್ಲ ಪಡೆಯಲು ಮುಗಿಬಿಳ್ತಾರೆ. ಶ್ರೀಮಠದ ಇತಿಹಾಸ 15 ನೇ ಶತಮಾನದಲ್ಲೇ ಆರಂಭವಾಗಿದೆ. ಶತಮಾನಗಳು ಉರುಳಿದ್ರು ಪರಂಪರೆ ಮಾತ್ರ ಈ ಭಾಗದ ಜನ್ರು ಜೋಪಾನವಾಗಿ ಉಳಿಸಿಕೊಂಡಿದ್ದಾರೆ.

ಜಾತಿಯ ವಿಷಯವಾಗಿ ಮನಸುಗಳ ಮಧ್ಯೆ ಕಂದಕ ನಿರ್ಮಾಣವಾಗ್ತಿದೆ. ನಿತ್ಯವೂ ಒಂದಿಲ್ಲೊಂದು ವಿಷಯದಲ್ಲಿ ಧರ್ಮ ಯುದ್ದ ನಡೆಯುತ್ತಿದೆ. ಈ ಧರ್ಮ ದಂಗಲ್ ಮಧ್ಯೆಯೂ ನಿನ್ನೆ ನಡೆದ ಫಕೀರೇಶ್ವರ ಜಾತ್ರೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಜನರು ಒಂದಾಗಿ ಜಾತ್ರೆ ಆಚರಣೆ ಮಾಡಿದರು. ಎಲ್ಲಿ ಏನೇ ನಡೆದ್ರೂ ಶಿರಹಟ್ಟಿ ಫಕೀರೇಶ್ವರ ಮಠದ ಜಾತ್ರೆಯಲ್ಲಿ ಮಾತ್ರ ಹಿಂದೂ ಮುಸ್ಲಿಂ ಜಾತಿ ಬೇಧವಿಲ್ಲದೇ ಸರ್ವಜನಾಂಗದ ಜನ್ರು ಜಾತ್ರೆ ಸಡಗರದಲ್ಲಿ ತೊಡಗಿದ್ದರು. ಇಂತಹ ಜಾತಿಯ ಕಂದಕಕ್ಕೆ ಫಕ್ಕಿರೇಶ್ವರ ಮಠದ ಕಾರ್ಯ ಮಾದರಿಯಾಗಿದೆ.
ರಾಜ್ಯ ಹೊರರಾಜ್ಯದ ಲಕ್ಷಾಂತರ ಜನರು ಫಕ್ಕಿರೇಶ್ವರ ಮಠದ ಜಾತ್ರೆಯ ಭಕ್ತಿಯಲ್ಲಿ ಮಿಂದೆದ್ದರು. ಕಾಯಿ ಕರ್ಪುರ ನೈವೇದ್ಯ ನೀಡಿ ಪೂಜೆ ಒಂದೆಡೆಯಾದ್ರೆ, ಸಕ್ಕರೆ, ಊದಬತ್ತಿ ಬೆಳಗೋ ಸಂಪ್ರದಾಯ ಒಂದೆಡೆ. ಎರಡು ಸಂಪ್ರದಾಯಗಳು ಒಂದೇ ಮಠದ ಅಂಗಳದಲ್ಲಿ ಅನಾವರಣಗೊಳ್ಳುತ್ತಿರೋದು ಸಾಮರಸ್ಯೆ ಬಯಸೋ ಪ್ರತಿ ಜೀವದ ಹಿಗ್ಗಿಗೆ ಕಾರಣವಾಗಿದೆ.
ಇದನ್ನೂ ಓದಿ: ಅವ್ಯವಸ್ಥೆ ಆಗರವಾದ ಗದಗ ಜಿಮ್ಸ್ ಆಸ್ಪತ್ರೆ: ಫ್ಯಾನ್, ಎಸಿ ಇಲ್ಲದೆ ಹಸುಗೂಸು, ಬಾಣಂತಿಯರು ನರಳಾಟ
ಸಹಸ್ರಾರು ಹಿಂದೂ, ಮುಸ್ಲಿಂ ಸಮುದಾಯದ ಭಕ್ತರು ಆಗಮಿಸಿ ಫಕೀರೇಶ್ವರನಿಗೆ ಭಕ್ತ, ಭಾವದಿಂದ ಪೂಜೆ ಮಾಡಿದರು. ಇಲ್ಲಿ ಹಿಂದೂ-ಮುಸ್ಲಿಂ ಎರಡು ಧರ್ಮಗಳ ಸಂಪ್ರದಾಯ ನಡೆಯುತ್ತದೆ. ಹೀಗಾಗಿ ಈ ಮಠಕ್ಕೆ ಸೌಹಾರ್ಧತೆಯ ಮಠ ಅಂತಲೇ ಕರೆಯುತ್ತಾರೆ. ಏನೇ ಇರಲಿ ಜಾತಿ, ಧರ್ಮಗಳ ಮಧ್ಯೆ ಹೊಡೆದಾಡುವ ಇಂದಿನ ದಿನಗಳಲ್ಲಿ ಫಕೀರೇಶ್ವರ ಮಠದ ಜಾತ್ರೆ ಎಲ್ಲರಿಗೂ ಮಾದರಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:29 am, Wed, 14 May 25







