ಈ ಗ್ರಾಮದಲ್ಲಿ ಮಹಡಿ ಮನೆ ನಿರ್ಮಾಣ ಮಾಡಿದ್ರೆ ಕೇಡು: ಏನಿದು ಸತ್ಯಮ್ಮ ದೇವಿಯ ಪವಾಡ?
ಹೈಟೆಕ್ ಮನೆ ನಿರ್ಮಾಣ ಮಾಡಬೇಕು ಎಂದು ಎಲ್ಲರಿಗೆ ಆಸೆ ಇರುತ್ತದೆ. ಆದರೆ, ಗದಗ ಜಿಲ್ಲೆಯಲ್ಲಿನ ಈ ಗ್ರಾಮದಲ್ಲಿ ಒಂದೇ ಒಂದು ಮಹಡಿ ಮನೆ ಇಲ್ಲ. ಹಾಗೇನಾದರೂ ಮಹಡಿ ಮನೆ ನಿರ್ಮಾಣ ಮಾಡಿದರೆ, ಕೇಡು ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ ಅದು ಯಾವ ಗ್ರಾಮ? ಯಾಕೆ ಮಹಡಿ ಮನೆ ನಿರ್ಮಾಣ ಮಾಡುವುದಿಲ್ಲ? ಇಲ್ಲಿದೆ ವಿವರ.
Updated on: May 07, 2025 | 9:04 PM

ಗದಗ ತಾಲೂಕಿನ ಹಾತಲಗೇರಿ ಈ ಗ್ರಾಮದಲ್ಲಿ ಸುಮಾರು 4 ಸಾವಿರ ಜನರು ವಾಸಿಸುತ್ತಿದ್ದಾರೆ. ನೂರಾರು ಮನೆಗಳಿವೆ. ಆದರೆ, ಗ್ರಾಮದಲ್ಲಿ ಒಂದೇ ಒಂದು ಮಹಡಿ ಮನೆ ಇಲ್ಲ. ಈ ಗ್ರಾಮದ ಆರಾಧ್ಯ ದೇವತೆ ಶ್ರೀ ಬೇವಿನ ಮರದ ಸತ್ಯಮ್ಮ ದೇವಿ. ಈ ಸತ್ಯಮ್ಮ ದೇವಿಯ ದೇವಸ್ಥಾನಕ್ಕಿಂತ, ಎತ್ತರಕ್ಕೆ ಮನೆ ನಿರ್ಮಾಣ ಮಾಡುವುದಿಲ್ಲ. ಮಾಡಿದರೆ, ಮನೆ ನಿರ್ಮಾಣ ಮಾಡಿದ ಕುಟುಂಬಕ್ಕೆ ಕೇಡು ಆಗುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರಲ್ಲಿದೆ.

ಈ ಹಿಂದೆ ಗ್ರಾಮದ ಒಬ್ಬರು ದೇವಸ್ಥಾನಕ್ಕಿಂತ ಎತ್ತರಕ್ಕೆ ಅಂದ್ರೆ, ಮಹಡಿ ಮನೆ ನಿರ್ಮಾಣ ಮಾಡಿದ್ದರಂತೆ. ಅವರ ಕುಟುಂಬ ಆರ್ಥಿಕ ಸಾಕಷ್ಟು ದುರ್ಬಲವಾಗಿದೆ. ಹೀಗಾಗಿ ಅವರು ಕೂಡ ಮಹಡಿ ಮನೆಯನ್ನು ತೆರವು ಮಾಡಿದ್ದಾರೆ. ನೂರಾರು ವರ್ಷಗಳಿಂದ ಗ್ರಾಮದಲ್ಲಿ ಮಹಡಿ ಮನೆ ನಿರ್ಮಾಣ ಮಾಡುವುದಿಲ್ಲ. ಎಷ್ಟೇ ಶ್ರೀಮಂತರಿದ್ದರೂ, ಒಂದು ಅಂತಸ್ತಿನ ಮನೆ ಮಾತ್ರ ನಿರ್ಮಾಣ ಮಾಡುತ್ತಾರೆ.

ಹೀಗಾಗಿ, ಈ ಗ್ರಾಮದಲ್ಲಿ ಒಂದೇ ಒಂದು ಮಹಡಿ ಮನೆ ನೋಡಲು ಸಿಗುವುದಿಲ್ಲ. ಹಿಂದಿನ ಕಾಲದಿಂದಲೂ ಬಂದ ಸಂಪ್ರದಾಯವನ್ನು ನಾವು ಕೂಡ ಮುಂಡುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದರು.

ಗ್ರಾಮದ ಪ್ರತಿಯೊಂದು ಮನೆಯಲ್ಲಿ ಸತ್ಯಪ್ಪ, ಸಣ್ಣ ಸತ್ಯಪ್ಪ, ದೊಡ್ಡ ಸತ್ಯಪ್ಪ, ಸತ್ಯಮ್ಮ, ಸತ್ಯವ್ವ, ಎನ್ನುವ ಹೆಸರನ್ನು ನಾಮಕರಣ ಮಾಡುತ್ತಾರೆ. ಇತ್ತಿಚೆಗೆ ಜನಿಸಿದ ಮಕ್ಕಳಿಗೆ ಸತೀಶ್, ಸೇರಿದಂತೆ ಸತ್ಯಮ್ಮ ದೇವಿಯ ಹೆಸರು ಬರುವ ಹಾಗೇ ನಾಮಕರಣ ಮಾಡುತ್ತಾರೆ. ಗ್ರಾಮಸ್ಥರು ಯಾವ ಕಾರಣಕ್ಕೂ ಬೇವಿನ ಮರವನ್ನು ಕಡಿಯುವುದಿಲ್ಲ. ಏಕೆಂದರೆ ಸತ್ಯಮ್ಮ ದೇವಿಯು ಬೇವಿನ ಮರದಲ್ಲಿ ನೆಲೆಯಾಗಿದ್ದಾಳೆ ಎಂಬ ನಂಬಿಕೆ ಇದೆ.

ಬೇವಿನ ಮರಕ್ಕೆ ಪ್ರತಿನಿತ್ಯ ಪೂಜೆ ಪುರಸ್ಕಾರ ಮಾಡಲಾಗುತ್ತದೆ. ಬೇವಿನ ಮರವನ್ನು ಉರುವಲು ಆಗಿ ಬಳಸುವುದಿಲ್ಲ. ಬೇವಿನ ಮರವನ್ನು ದೇವರ ಸಮಾನಾವಾಗಿ ನೋಡುತ್ತಾರೆ. ಈ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಂತಹ ಸಂಪ್ರದಾಯವನ್ನು ಇಂದಿಗೂ ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ ಎಂದು ದೇವಸ್ಥಾನದ ಪೂಜಾರಿ ಹೇಳಿದರು.

ಆಧುನಿಕ ಕಾಲದ ಭರಾಟೆಗೆ ಸಿಲುಕಿ ಅನೇಕರು ಹಳೇ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಆದರೆ, ಈ ಗ್ರಾಮ ದೇವತೆಯಾದ ಸತ್ಯಮ್ಮ ದೇವಿಯ ಪವಾಡ ಇನ್ನೂ ನಡೆಯುತ್ತಿದೆ. ಹೀಗಾಗಿ ಈ ಗ್ರಾಮದಲ್ಲಿ ಮಹಡಿ ಮನೆ ನಿರ್ಮಾಣ ಮಾಡುವುದಿಲ್ಲ. ಬೇವಿನ ಮರವನ್ನು ದೇವರು ಎಂದು ಆರಾಧನೆ ಮಾಡಲಾಗುತ್ತಿದೆ.



















