ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದೆ. ಕಲಬುರಗಿ, ರಾಯಚೂರು, ಯಾದಗಿರಿ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಮುಂದಿನ ಐದು ದಿನಗಳವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗಲಿದೆ. ಗಾಳಿಯ ವೇಗ ಗಂಟೆಗೆ 30-60 ಕಿಮೀ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬೆಂಗಳೂರು, ಏಪ್ರಿಲ್ 27: ಉತ್ತರ ಕರ್ನಾಟಕದ (North Karnataka) ಕೆಲವು ಜಿಲ್ಲೆಗಳಲ್ಲಿ ಮಳೆರಾಯನ (Rain) ಆರ್ಭಟ ಜೋರಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಭಾನುವಾರ (ಏ.27) ಮುಂದಿನ 3 ಗಂಟೆಗಳಲ್ಲಿ ಕಲಬುರಗಿ, ರಾಯಚೂರು, ಯಾದಗಿರಿ, ಹಾವೇರಿ, ಕೊಪ್ಪಳ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Meteorological Department) ತಿಳಿಸಿದೆ. ರಾಜ್ಯದಾದ್ಯಂತ ಮುಂದಿನ ಐದು ದಿನಗಳವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗಲಿದೆ. ಗಾಳಿಯ ವೇಗ ಗಂಟೆಗೆ 30-60 ಕಿಮೀ ಬೀಸುವ ಸಂಭವ ಇದೆ ಎಂದು ಹಾವಾಮಾನ ಇಲಾಖೆ ಭವಿಷ್ಯ ನುಡಿದಿದೆ.
ಮಳೆಯಿಂದ ಅಪಾರ ಹಾನಿ
ಗದಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ರೋಣ ತಾಲೂಕಿನ ಯರೆಬೇಲೇರಿ ಗ್ರಾಮದಲ್ಲಿ ತಗಡಿನ ಶೀಟ್ಗಳು ಗಾಳಿಗೆ ಹಾರಿ ಹೋಗಿವೆ. ಗ್ರಾಮದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೆ ದರೋಜಿ ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆ ಮತ್ತು ಗಾಳಿ ಬೀಸಿದ್ದು, ಭತ್ತದ ಬೆಳೆ ನೆಲಕಚ್ಚಿದೆ. ಗುರುಮೂರ್ತಿಸ್ವಾಮಿ ಎಂಬ ರೈತರಿಗೆ ಸೇರಿದ ಭತ್ತದ ಬೆಳೆ ಇನ್ನೇನು ಒಂದು ವಾರದಲ್ಲಿ ಕಟಾವು ಮಾಡಲಾಗುತ್ತಿದೆ. ಭತ್ತದ ಬೆಳೆ ನಾಶ ನೋಡಿ ರೈತ ಗುರುಮೂರ್ತಿ ಕಣ್ಣೀರು ಹಾಕಿದ್ದಾರೆ. ತಾಲೂಕಿನಾದ್ಯಂತ 150ಕ್ಕೂ ಹೆಚ್ಚು ಎಕರೆಯಷ್ಟು ಬೆಳೆ ಮಳೆಗೆ ಹಾನಿಯಾಗಿದೆ.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕೆ.ಗುಡದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ಸಾಯಣ್ಣ ಎಂಬುವರು ಮೃತಪಟ್ಟಿದ್ದಾರೆ. ಸಾಯಣ್ಣ ಅವರ ಪತ್ನಿಗೆ ಗಾಯವಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಇಂದಿನಿಂದ ಒಂದು ವಾರ ಕರ್ನಾಟಕದಾದ್ಯಂತ ಸುರಿಯಲಿದೆ ಭಾರಿ ಮಳೆ
ವಿಜಯಪುರ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಹಿತ ಮಳೆಯಾಗುತ್ತಿದೆ. ಬಬಲೇಶ್ವರ ಪಟ್ಟಣದಲ್ಲಿ ಆಲಿಕಲ್ಲು ಮಳೆಯಾಗಿದೆ. ಅಪಾರ ಪ್ರಮಾಣದಲ್ಲಿ ಆಲಿಕಲ್ಲುಗಳನ್ನು ಕಂಡ ಜನರು ಆಶ್ಚರ್ಯಪಟ್ಟರು. ಕಾದು ಕೆಂಪಾದ ಧರೆಯನ್ನು ಆಲಿಕಲ್ಲು ಮಳೆ ತಂಪು ಮಾಡಿದೆ.