
ಗದಗ, ಆಗಸ್ಟ್ 14: ಅದು ಮೂರು ಜಿಲ್ಲೆಯ ಏತ ನೀರಾವರಿ ಯೋಜನೆ. ಈ ಏತ ನೀರಾವರಿ ಯೋಜನೆ ಜಾರಿಯಾದರೆ ನಮ್ಮ ಬದುಕು ಬಂಗಾರವಾಗುತ್ತೆ ಅಂತ ರೈತರು (Farmers) ಯೋಜನೆ ಭೂಮಿ ನೀಡಿದ್ದರು. ಆದರೆ ಭೂಮಿ ಹೋಯ್ತು ಎರಡು ದಶಕಗಳು ಕಳೆದರೂ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಹೀಗಾಗಿ ರೈತರು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಈಗ ಜಿಲ್ಲಾಧಿಕಾರಿಗಳ ಕಾರು ಸೀಜ್ (Car Seized) ಮಾಡಲು ಆದೇಶ ಮಾಡಿದ್ದು, ಇಂದು ರೈತರು ಡಿಸಿ ಕಾರು ಜಪ್ತಿ ಮಾಡಿದ್ದಾರೆ. ಆದರೆ ಅಧಿಕಾರಿಗಳು, ಸರ್ಕಾರದ ಧೋರಣೆ ವಿರುದ್ಧ ರೈತರು ಕಣ್ಣೀರು ಹಾಕಿ ಆಕ್ರೋಶ ಹೊರಹಾಕಿದರು.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಾಳ, ಮೇವುಂಡಿ, ಕೊರ್ಲಹಳ್ಳಿ, ಯಕ್ಲಾಪೂರ ಸೇರಿ ಹಲವು ಗ್ರಾಮಗಳ ರೈತರು ತುಂಗಭದ್ರಾ ನದಿಯಿಂದ ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ ಹಳ್ಳಿಗೆ ನೀರಾವರಿ ಯೋಜನೆ ಜಾರಿಗಾಗಿ ಸರ್ಕಾರ ಸಿಂಗಟಾಲೂರ ಏತ ನೀರಾವರಿ ಯೋಜನೆ ಮಾಡಿದೆ. ಆರಂಭದಲ್ಲಿ ಯೋಜನೆ ಜಾರಿಯಾದರೆ ನಮ್ಮ ಜಮೀನುಗಳು ಹಸಿರಾಗುತ್ತವೆ, ಬದುಕು ಬಂಗಾರವಾಗುತ್ತೆ ಅಂತ ಕನಸು ಕಂಡಿದ್ದರು.
ಇದೆ ಖುಷಿಯಲ್ಲಿ ಯೋಜನೆಗೆ ಗದಗ ಜಿಲ್ಲೆಯ ನೂರಾರು ಕ್ಕೂ ಹೆಚ್ಚು 350ಕ್ಕೂ ಹೆಚ್ಚು ಎಕರೆ ಭೂಮಿ ಯೋಜನೆ ನೀಡಿದ್ದರು. ಆದರೆ ಎರಡು ದಶಕಗಳು ಕಳೆದರೂ ಸರ್ಕಾರ ಪರಿಹಾರ ನೀಡಿಲ್ಲ. ಹೀಗಾಗಿ ರೈತರು ಕೊರ್ಟ್ ಮೊರೆ ಹೋಗಿದ್ದರು. ಇಂದು ಗದಗ ಜಿಲ್ಲಾ ನ್ಯಾಯಾಲಯ ಗದಗ ಡಿಸಿ ಸಿ ಎನ್ ಶ್ರೀಧರ್ ಅವರ ಕಾರನ್ನೇ ಜಪ್ತಿ ಮಾಡುವ ಆದೇಶ ನೀಡಿದೆ. ಹೀಗಾಗಿ ವಕೀಲರ ಸಮೇತ ಡಿಸಿ ಕಚೇರಿಗೆ ಎಂಟ್ರಿ ಕೊಟ್ಟ ರೈತರ ದಂಡು ಡಿಸಿ ಕಾರು ಸೀಜ್ ಮಾಡಿ ತೆಗೆದುಕೊಂಡು ಹೋದರು.
ಇದನ್ನೂ ಓದಿ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ಲಕ್ಷಾಂತರ ರೂ. ಮೌಲ್ಯದ ಕಂಪ್ಯೂಟರ್, AC ಮಾಯ: ಅಧಿಕಾರಿಗಳೇ ಲೂಟಿ ಮಾಡಿದ್ರಾ?
ಸರ್ಕಾರ, ನೀರಾವರಿ ನಿಗಮ ಹಾಗೂ ಜಿಲ್ಲಾಡಳಿತ ವಿರದ್ಧ ರೈತರು ಕಿಡಿಕಾರಿದ್ದಾರೆ. ಎರಡು ದಶಕಗಳು ಕಳೆದ್ರೂ ಪರಿಹಾರ ನೀಡಿದ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಇಂದು ಜಿಲ್ಲಾಡಳಿತ ವಿರುದ್ಧ ಗೆದ್ದು ಬೀಗಿದ್ದಾರೆ. ಒಂದು ಎಕರೆಗೆ 40 ಲಕ್ಷ ರೂ ನೀಡುವಂತೆ ಕೋರ್ಟ್ ಆದೇಶ ಮಾಡಿದೆ ಅಂತ ವಕೀಲರು ಹೇಳಿದ್ದಾರೆ. ಪರಿಹಾರ ನೀಡದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಪೀಠೋಪಕರಣ ಹಾಗೂ ಕಾರು ವಶಕ್ಕೆ ಪಡೆಯಲಾಗಿದೆ.
ಇನ್ನೂ ಸರ್ಕಾರದ ವಿಳಂಬಕ್ಕೆ ರೈತ ಮಹಿಳೆ ಕಣ್ಣೀರು ಹಾಕಿದರು. ‘ಹತ್ತು ವರ್ಷವಾದ್ರೂ ಸರ್ಕಾರ ಪರಿಹಾರ ಕೊಟ್ಟಿಲ್ಲ ಅಂತ ಕಣ್ಣೀರು ಹಾಕಿದ್ರು. ಗಂಡ ತೀರಿ ಹೋಗಿದ್ದಾನೆ. ಮಕ್ಕಳ್ಳಿಲ್ಲ ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡಿ ಸಾಕಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಡಿಸಿ, ಅಧಿಕಾರಿಗಳಿಗೆ ಸರ್ಕಾರ ಸಂಬಳ ಕೊಡುತ್ತೆ. ಎಸಿ ರೂಂನಲ್ಲಿ ಹಾಯಾಗಿರ್ತಾರೆ. ನಮ್ಮ ಕಷ್ಟ ಯಾರ ಕೇಳ್ತಾರೆ ಅಂತ ರೈತ ಗದಿಗೆಪ್ಪ ಕಿಡಿ ಕಾರಿದ್ರು. ನಾವು ಗುಡಿಸಲಲ್ಲಿ ವಾಸ ಮಾಡ್ತೀವಿ. ನಮ್ಮ ನೋವು ಯಾವ ಸರ್ಕಾರ ಕೇಳುತ್ತೆ’ ಅಂತ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Gadag Government Hostel Raid: ನೂರಾರು ಬಡ ವಿದ್ಯಾರ್ಥಿಗಳ ಆಸರೆ ಆಗ್ಬೇಕಿದ್ದ ವಸತಿ ನಿಲಯದಲ್ಲಿ ಅವ್ಯವಸ್ಥೆ
ಮುಂಡರಗಿ ಭಾಗದ ರೈತರ ಬದುಕು ದೀಪದ ಕೆಳಗೆ ಕತ್ತಲು ಎಂಬಂತಾಗಿದೆ. ಪಕ್ಕದಲ್ಲೇ ತುಂಗಭದ್ರ ನದಿ ಹರಿದರೂ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಯುತ್ತಿಲ್ಲ. ಈಗ ಜಮೀನು ಇಲ್ಲ, ಪರಿಹಾರದ ಹಣವೂ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಗದಗ ಜಿಲ್ಲೆಯ ಸಚಿವರು, ಶಾಸಕರು ರೈತರ ಸಂಕಷ್ಟಗಳ ಬಗ್ಗೆ ತಲೆ ಕೆಡಿಸಿಕೊಳ್ತಾಯಿಲ್ಲ. ಇನ್ನಾದ್ರೂ ಸರ್ಕಾರ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.