ಲಕ್ಕುಂಡಿಯನ್ನು ಜಗತ್ ಪ್ರಸಿದ್ಧ ಮಾಡಬೇಕು ಎಂಬ ಆಸೆ ಇದೆ: ಸಿಎಂ ಬಸವರಾಜ ಬೊಮ್ಮಾಯಿ
ಗದಗ ಜಿಲ್ಲೆಯ ಜೀವನಾಡಿಗಳು ತುಂಗಭದ್ರಾ, ಮಲಪ್ರಭಾ ನದಿ, ಸಿಂಗಟಾಲೂರು ನೀರಾವರಿ ಯೋಜನೆ ಕುಂಟುತ್ತಾ ಸಾಗಿತ್ತು. ನಾನು ನೀರಾವರಿ ಸಚಿವನಾದಾಗ ಹೆಚ್ಚಿನ ಅನುದಾನ ನೀಡಿದ್ದೆ ಎಂದು ಲಕ್ಕುಂಡಿ ಉತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ: ಲಕ್ಕುಂಡಿಯನ್ನು ಜಗತ್ ಪ್ರಸಿದ್ಧ ಮಾಡಬೇಕು ಎಂಬ ಆಸೆ ಇದೆ. ಈ ನಿಟ್ಟಿನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಮಾಸ್ಟರ್ಪ್ಲ್ಯಾನ್ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೇಳಿದರು. ಗದಗ ತಾಲೂಕಿನ ಲಕ್ಕುಂಡಿ ಉತ್ಸವಕ್ಕೆ (Lakkundi Festival) ಚಾಲನೆ ನೀಡಿ ಮಾತನಾಡಿದ ಅವರು, ರನ್ನ, ಪಂಪರು ಆದಿ ಕವಿಗಳು. ಕನ್ನಡ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಇವರ ಪಾತ್ರ ಇದೆ. ಅದೇ ರೀತಿ ಕನ್ನಡಕ್ಕೆ ಸಾಹಿತ್ಯ ರಚನೆ ಮಾಡಿದ್ದ ಅತ್ತಿಮಬ್ಬೆ ಕಾರ್ಯ ಮರೆಯುವಂತಿಲ್ಲ ಎಂದರು.
ಗದಗ ಜಿಲ್ಲೆಯ ಜೀವನಾಡಿಗಳು ತುಂಗಭದ್ರಾ, ಮಲಪ್ರಭಾ ನದಿ, ಸಿಂಗಟಾಲೂರು ನೀರಾವರಿ ಯೋಜನೆ ಕುಂಟುತ್ತಾ ಸಾಗಿತ್ತು. ನಾನು ನೀರಾವರಿ ಸಚಿವನಾದಾಗ ಹೆಚ್ಚಿನ ಅನುದಾನ ನೀಡಿದ್ದೆ. ಕಲ್ಯಾಣ ಚಾಲುಕ್ಯರ ಆಳಿದ ಲಕ್ಕುಂಡಿ ಐತಿಹಾಸಿಕ ಪ್ರದೇಶವಾಗಿದೆ ಎಂದು ಹೇಳುತ್ತಾ ಈಗಿನ ಆಡಳಿತದ ಬಗ್ಗೆಯೂ ಪ್ರಸ್ತಾಪಿಸಿ ಇತ್ತೀಚಿನ ದಿನಗಳಲ್ಲಿ ಆಳುವವರು ಆಡಳಿತ ಮಾಡುತ್ತಿದ್ದಾರೆ, ಆಡಳಿತ ಮಾಡುವವರು ಆಳುತ್ತಿದ್ದಾರೆ ಎಂದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವ ರಾಮುಲು ರಾಜಕೀಯ ಭಾಷಣ
ಲಕ್ಕುಂಡಿ ಉತ್ಸವವು ಸರ್ಕಾರಿ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರು ರಾಜಕೀಯ ಭಾಷಣ ಮಾಡಿದರು. ನನ್ನ ಜನ್ಮ ಭೂಮಿ ಬಳ್ಳಾರಿ ಆದ್ರೆ ನನ್ನ ಕರ್ಮ ಭೂಮಿ ಗದಗವಾಗಿದೆ. ಬಿಜೆಪಿ 150 ಸ್ಥಾನ ಗೆಲ್ಲಬೇಕು ಅಂದರೆ ಜಿಲ್ಲೆಯ 4 ಸ್ಥಾನ ಗೆಲ್ಲಬೇಕು. ಗದಗ ಜಿಲ್ಲೆಯ 4 ಸ್ಥಾನಗಳನ್ನೂ ಬಿಜೆಪಿ ಗೆಲ್ಲಬೇಕಿದೆ. ಸಚಿವರಾದ ಸಿ.ಸಿ.ಪಾಟೀಲ್ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.
ಇದನ್ನೂ ಓದಿ: ಯಾರ ಸಂಸ್ಕೃತಿ ಯಾವುದು ಅನ್ನೋದು ಜನರಿಗೆ ಗೊತ್ತು: ನಮ್ಮದು ಮೋದಿ ಸಂಸ್ಕೃತಿ ಎಂದ ಸಿಎಂ ಬೊಮ್ಮಾಯಿ
ಕಲೆ ಸಂಸ್ಕೃತಿ ಉಳಿಸುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬೊಮ್ಮಾಯಿ ಮಾಡುತ್ತಿದ್ದಾರೆ. ಕಿತ್ತೂರು ಉತ್ಸವ, ಹಂಪಿ ಉತ್ಸವ ಮಾಡುವ ಮೂಲಕ ಸಂಸ್ಕೃತಿ ಉಳಿಸುವ ಕೆಲಸ ಮಾಡಿದ್ದಾರೆ. ಕಳಸಾ ಬಂಡೂರಿ ಯೋಜನೆಗೆ ಕೇಂದ್ರದಿಂದ ಸಿಎಂ ಬಸವರಾಜ್ ಬೊಮ್ಮಾಯಿ ಅನುಮತಿ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಅನೇಕ ರಾಜಕೀಯ ಪಕ್ಷಗಳು ಬಂದವು. ಅಂಬೇಡ್ಕರ್ ಹೆಸರು ಹೇಳಿಕೊಂಡು ರಾಜಕೀಯ ಮಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಿದ್ದು ನಮ್ಮ ಮುಖ್ಯಮಂತ್ರಿ ಎಂದರು.
ಲಕ್ಕುಂಡಿ ಇತಿಹಾಸವನ್ನು ತಿಳಿದುಕೊಂಡು ನಾನು ಪುಳಕಿತನಾಗಿದ್ದೇನೆ
ಉತ್ಸವದಲ್ಲಿ ಮಾತನಾಡಿದ ಸಚಿವ ಭೈರತಿ ಬಸವರಾಜ್, ಲಕ್ಕುಂಡಿ ಇತಿಹಾಸವನ್ನು ತಿಳಿದುಕೊಂಡು ನಾನು ಪುಳಕಿತನಾಗಿದ್ದೇನೆ. ಕೊವಿಡ್ನಿಂದ ಎರಡು ವರ್ಷ ಉತ್ಸವ ಆಯೋಜನೆ ಮಾಡಲಾಗಿಲ್ಲ. ಪ್ರಧಾನಿ ಮೋದಿಯಿಂದಾಗಿ ನಾವೆಲ್ಲ ಮಹಾಮಾರಿ ಕೊವಿಡ್ನಿಂದ ಪಾರಾಗಿದ್ದೇವೆ. ಕೊವಿಡ್ ಲಸಿಕೆ ನೀಡಿದ್ದರಿಂದ ನಾವೆಲ್ಲರೂ ಇವತ್ತು ಬದುಕುಳಿದಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 pm, Fri, 10 February 23