ಗದಗ: 33 ದಿನ ಅನ್ನ, ನೀರಿಲ್ಲದೇ ಸ್ವಾಮೀಜಿಯಿಂದ ಶಿವಯೋಗ ಸಮಾಧಿ; ಇಟ್ಟಿಗೆಯಿಂದ ಗರ್ಭಗುಡಿ ಬಂದ್​​

ಗದಗ ತಾಲೂಕಿನ ಸ್ವಾಮೀಜಿಗಳೊಬ್ಬರು ಲೋಕ ಕಲ್ಯಾಣಕ್ಕಾಗಿ 33 ದಿನಗಳ ಕಠಿಣ ಶಿವಯೋಗ ಸಮಾಧಿ ಅನುಷ್ಠಾನ ಕೈಗೊಂಡಿದ್ದಾರೆ. ಬೆಳಕು, ಗಾಳಿ, ನೀರು, ಆಹಾರವಿಲ್ಲದೆ ಗರ್ಭಗುಡಿ ತಪಸ್ಸು ಕುಳಿತಿದ್ದಾರೆ. ಇಂದಿನ ವಿಜ್ಞಾನದ ಯುಗದಲ್ಲಿ ಸ್ವಾಮೀಜಿ ಒಬ್ಬರ ಈ ಆಧ್ಯಾತ್ಮಿಕ ನಡೆ ಭಕ್ತರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಗದಗ: 33 ದಿನ ಅನ್ನ, ನೀರಿಲ್ಲದೇ ಸ್ವಾಮೀಜಿಯಿಂದ ಶಿವಯೋಗ ಸಮಾಧಿ; ಇಟ್ಟಿಗೆಯಿಂದ ಗರ್ಭಗುಡಿ ಬಂದ್​​
ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠ
Image Credit source: tv9 kannada
Edited By:

Updated on: Jun 05, 2026 | 4:14 PM

ರಾಮನಗರ, ಜೂನ್​​ 05: ಲೋಕ ಕಲ್ಯಾಣ, ವಿಶ್ವಶಾಂತಿ ಹಾಗೂ ಸಕಾಲದಲ್ಲಿ ಮಳೆ-ಬೆಳೆ ಉತ್ತಮವಾಗಿ ಬರಲಿ ಎಂಬ ಸಂಕಲ್ಪದೊಂದಿಗೆ ಗದಗ (gadag) ತಾಲೂಕಿನ ಅಂತೂರು ಬೆಂತೂರು ಗ್ರಾಮದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ‘ಶಿವಯೋಗ ಸಮಾಧಿ’ (Shiva Yoga Samadhi) ತಪಸ್ಸನ್ನು ಆರಂಭಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲೂ ಅಧ್ಯಾತ್ಮದ ಶಕ್ತಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ‌‌. ಶ್ರೀ ಮಠದ ಗರ್ಭಗುಡಿಯನ್ನು ಬಂದ್​​ ಮಾಡಿಕೊಂಡು ಸಮಾಧಿ ಯೋಗದಲ್ಲಿ ಮಗ್ನರಾಗಿದ್ದಾರೆ. ಸದ್ಯ ಮಠದಲ್ಲಿ ಭಕ್ತರಿಂದ 24 ಗಂಟೆ ಶಿವನಾಮಸ್ಮರಣೆ ನಡೆದಿದೆ.

ಮುಖ್ಯಾಂಶಗಳು

  • ಲೋಕ ಕಲ್ಯಾಣಕ್ಕಾಗಿ ಕಠಿಣ ಶಿವಯೋಗ ಸಮಾಧಿ ಅನುಷ್ಠಾನ
  • 775 ಗಂಟೆ ಅಂದರೆ 33 ದಿನಗಳ‌ ಕಾಲ ಶಿವಯೋಗ ಸಮಾಧಿ
  • ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದಲ್ಲಿ ಸಂಭ್ರಮದ ವಾತಾವರಣ

33 ದಿನಗಳ‌ ಕಾಲ ಶಿವಯೋಗ ಸಮಾಧಿ

ಶ್ರೀ ಬೂದೀಶ್ವರ ಮಠದ ಪೀಠಾಧಿಪತಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಠಿಣವಾದ ಶಿವಯೋಗ ಸಮಾಧಿ ಯೋಗವನ್ನು ಮಾಡುತ್ತಿದ್ದಾರೆ. ಒಂದು ತಿಂಗಳು ಮೌನಾನುಷ್ಠಾನ ಮಾಡಿದ್ದು, ಜೂನ್‌ 3ರಂದು ಮಧ್ಯರಾತ್ರಿ 3 ಗಂಟೆಗೆ, ಗರ್ಭಗುಡಿ ಪ್ರವೇಶ ಮಾಡಿದ್ದಾರೆ. ಶ್ರೀಗಳು ಗರ್ಭಗುಡಿ ಪ್ರವೇಶ ಮಾಡಿದ ನಂತರ ಬಾಗಿಲು ಬಂದ್​ ಮಾಡಿ ಇಟ್ಟಿಗೆ, ಸಿಮೆಂಟ್​ನಿಂದ ಕ್ಲೋಸ್ ಮಾಡಲಾಗಿದೆ. ಗರ್ಭಗುಡಿಯಲ್ಲಿ ಯಾವುದೇ ಬೆಳಕು, ಗಾಳಿ, ನೀರು ಇಲ್ಲದೆ 33 ದಿನಗಳು ಇರಲಿದ್ದಾರೆ. ರಾಚೋಟೇಶ್ವರ ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ ಈ ಹಿಂದೆ ಕೂಡ ಹಲವು ಶಿವಯೋಗ ಸಮಾಧಿ ವ್ರತ ಮಾಡಿದ್ದಾರೆ. ‌ಈ ಬಾರಿ ಕೂಡ ಮಾಡುತ್ತಿದ್ದಾರೆ. ಸದ್ಯ ಶ್ರೀಗಳು ಗರ್ಭಗುಡಿಯಲ್ಲಿನ ಶಿವಲಿಂಗದ ಮುಂದೆ ಕಠಿಣ ತಪಸ್ಸು ಮಾಡುತ್ತಿದ್ದಾರೆ.

ಇದನ್ನೂ ಓದಿ: ಗದಗದಲ್ಲಿ ಮುಂದುವರೆದ ಹಿಂದೂ ದೇವರ ಮೇಲಿನ ಅಟ್ಟಹಾಸ: 2 ಗ್ರಾಮಗಳಲ್ಲಿ ಮೂರ್ತಿಗಳು ಧ್ವಂಸ

ಅಂತೂರು ಬೆಂತೂರು ಗ್ರಾಮ ಸೇರಿದಂತೆ ಹಲವು ಗ್ರಾಮದ ಭಕ್ತರು ಶ್ರೀ ಮಠಕ್ಕೆ ಬಂದು ದರ್ಶನ ಪಡೆಯುತ್ತಿದ್ದಾರೆ. 775 ಗಂಟೆಗಳ ಕಾಲ, ಅಂದರೆ 33 ದಿನಗಳವರೆಗೆ ನಿರಂತರವಾಗಿ ಶಿವಯೋಗ ಸಮಾಧಿಯಲ್ಲಿ ತೊಡಗಿರುವ ಸ್ವಾಮೀಜಿಗಳು, ಮಠದ ಗರ್ಭಗುಡಿಯಲ್ಲಿ ಶಿವಲಿಂಗದ ಸನ್ನಿಧಿಯಲ್ಲಿ ತಪಸ್ಸು ಮಾಡುತ್ತಿದ್ದಾರೆ. ವಿಶ್ವಶಾಂತಿ, ಮಧ್ಯ ಪ್ರಾಚ್ಯ ಯುದ್ಧದ ವಾತಾವರಣ, ಮಳೆ-ಬೆಳೆ ಚೆನ್ನಾಗಿ ಬಂದು ಸಮೃದ್ಧಿ ಫಲಿಸಲಿ ಎಂದು ಶಿವಯೋಗ ಸಮಾಧಿ ಯೋಗ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಕಠಿಣ ವ್ರತಕೈಗೊಂಡ ನಂತರ ಗ್ರಾಮದಲ್ಲಿ ಮಳೆ ಆಗಿದ್ದು, ಭಕ್ತರು ಸಂತಸಗೊಂಡಿದ್ದಾರೆ.

ಇದನ್ನೂ ಓದಿ: ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಗ್ರಾಮಸ್ಥರು

ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಇಂತಹ ಅಪರೂಪದ ಯೋಗ ಸಾಧನೆ ಕುತೂಹಲಕ್ಕೆ ಕಾರಣವಾಗಿದೆ. ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಕೈಗೊಂಡಿರುವ ಈ 33 ದಿನಗಳ ಶಿವಯೋಗ ಸಮಾಧಿ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸಿದೆ. 33 ದಿನಗಳ ನಂತರ ಸ್ವಾಮೀಜಿ ಹೊರಗಡೆ ಬಂದು, ದರ್ಶನ ನೀಡಲಿದ್ದಾರೆ. ಸ್ವಾಮೀಜಿಗಳ ಈ ನಡೆ ಭಕ್ತರಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us