Ka Vem Srinivas Death: ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪಡೆದಿದ್ದ ಕಲಾಪೋಷಕ ಕಾವೆಂಶ್ರೀ ನಿಧನ
Kalamangi Venkatagiriyappa Srinivas:ಗದಗದ ಪ್ರಸಿದ್ಧ ಕಲಾಪೋಷಕ ಕಾವೆಂಶ್ರೀ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್) ಅವರು ಮಾರ್ಚ್ 10 ರಂದು ನಿಧನರಾಗಿದ್ದಾರೆ. ಅವರು 25 ವರ್ಷಗಳ ಕಾಲ ಕಲಾಚೇತನ ಸಂಸ್ಥೆಯ ಮೂಲಕ ಕಲಾ ಸೇವೆ ಸಲ್ಲಿಸಿದ್ದರು. 2023 ರಲ್ಲಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರ ಕೆಲಸವನ್ನು ಶ್ಲಾಘಿಸಿದ್ದರು. ಅವರ ಅಗಲಿಕೆಯಿಂದ ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಗದಗ, ಮಾರ್ಚ್ 10: ಪ್ರಧಾನಿ ನರೇಂದ್ರ ಮೋದಿಯವರಿಂದ (Narendra Modi) ಮೆಚ್ಚುಗೆ ಪಡೆದಿದ್ದ ಕಲಾಪೋಷಕ ಕಾಳಮಂಜಿ ವೆಂಕಟಗಿರುಯಪ್ಪ ಶ್ರೀನಿವಾಸ್ (ಕಾವೆಂಶ್ರೀ) ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಗದಗ (Gadag) ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ (ಮಾ.10) ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಕಾವೆಂಶ್ರೀ ನಿಧನರಾಗಿದ್ದಾರೆ. 2023 ರಲ್ಲಿ ನಡೆದಿದ್ದ 96 ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಕಾವೆಂಶ್ರೀ ಅವರ ಕಾರ್ಯವನ್ನು ಪ್ರಶಂಸಿದ್ದರು.
ಕಾವೆಂಶ್ರೀ ಅವರ 25 ವರ್ಷಗಳ ಕಲಾ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದರು. ಕಲೆ, ಸಂಸ್ಕೃತಿ ಉಳಿವಿಗಾಗಿ ಕಾವೆಂಶ್ರೀ ಅವರು 1996 ರಲ್ಲಿ ಕಲಾ ಚೇತನ ಸಂಸ್ಥೆ ಸ್ಥಾಪಿಸಿದರು. ಕಲಾ ಚೇತನ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜಿಸುತ್ತಿದ್ದರು. ನಿರಂತರ ಕಾರ್ಯಕ್ರಮ ಆಯೋಜನೆ ಬಗ್ಗೆ ಪ್ರಧಾನಿ ಮೋದಿಯವರು ಸಂತಸ ವ್ಯಕ್ತಪಡಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಕಾಳಮಂಜಿ ಮೂಲದ ಕಾವೆಂ ಶ್ರೀನಿವಾಸ್ ಅವರುಗದಗ ನಗರದಲ್ಲಿ ಕಳೆದ 34 ವರ್ಷದಿಂದ ವಾಸವಾಗಿದ್ದರು. ಕಲೆ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡಿದ್ದ ಶ್ರೀನಿವಾಸ್ ಅವರು ಅನೇಕ ಪತ್ರಿಕೆಗಳಲ್ಲಿ ಕಲೆ, ಸಾಹಿತ್ಯದ ಬಗ್ಗೆ ಲೇಖನ ಬರೆದಿದ್ದರು. ಕಾವೆಂಶ್ರೀ ಅವರು ಹೋಟೆಲ್ ಉದ್ಯಮದ ಜೊತೆಗೆ ಕಲಾ ಸೇವೆಯಲ್ಲೂ ಸಹ ತೊಡಗಿದ್ದರು.
ಎಲೆಮರೆಯ ಕಾಯಿಗೆ ಸಂದ ಗೌರವ
ಕಾವೆಂಶ್ರೀ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಕಲಾಸೇವೆ ನಡೆಸುತ್ತಾ ಬಂದಿದ್ದರು. ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ 25 ವರ್ಷಗಳನ್ನು ಪೂರೈಸಿದೆ. ಕಾವೆಂಶ್ರೀ ಅವರ ಕಲಾಸೇವೆಯನ್ನು ಗುರುತಿಸಿ, ಹಲವು ಸಂಘಟನೆಗಳು, ಕಲಾಪ್ರೇಮಿಗಳು, ಗದುಗಿನ ತೋಂಟದಾರ್ಯ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸೇರಿದಂತೆ ಹಲವರು ಸನ್ಮಾನಿಸಿದ್ದರು.
ಇದನ್ನೂ ಓದಿ: ಗದಗದಲ್ಲಿ ಅರಳಿದ ಕಲಾಚೇತನ; ಕಾವೆಂಶ್ರೀ ಎಂಬ ಹೋಟೆಲ್ ಉದ್ಯಮಿಯ ಕಲಾಸೇವೆಯ ಯಶೋಗಾಥೆಗೆ ನಮೋ
ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ
2023ರ ಡಿಸೆಂಬರ್ ತಿಂಗಳಲ್ಲಿ ಪ್ರಸಾರವಾದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾವೆಂಶ್ರೀ ಅವರ ಕಲಾ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಶ್ಲಾಘಿಸಿದ್ದರು. ‘ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್ ಅವರು 25 ವರ್ಷಗಳಿಂದ ಪಟ್ಟುಬಿಡದೆ ತಮ್ಮನ್ಮು ತಾವು ತೊಡಗಿಸಿಕೊಂಡಿದ್ದಾರೆ. ಅವರ ಕಲಾಪೋಷಣೆ ಒಂದು ತಪಸ್ಸಿನಂತೆ ಮುಂದುವರಿದಿದೆ’ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:06 pm, Mon, 10 March 25