AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆ ದೇಗುಲ ಕ್ಲೋಸ್: 18 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ, ಕೋಟ್ಯಾಂತರ ರೂ. ಆದಾಯ

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲನ್ನು ಇಂದು ಶಾಸ್ತ್ರೋಸ್ತವಾಗಿ ಮುಚ್ಚಲಾಗಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್​ ರಾಜಣ್ಣ ಅವರ ಅನುಮಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಗಿದ್ದು, ಮುಂದಿನ ವರ್ಷ ಅಕ್ಟೋಬರ್ 9 ಕ್ಕೆ ಬಾಗಿಲು ತೆರೆಯಲಾಗುತ್ತದೆ. ಹಾಗಾದ್ರೆ, ಈ ವರ್ಷ ಎಷ್ಟು ಜನ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ದೇವಸ್ಥಾನಕ್ಕೆ ಎಷ್ಟು ಆದಾಯ ಹರಿದುಬಂದಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಹಾಸನಾಂಬೆ ದೇಗುಲ ಕ್ಲೋಸ್: 18 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ, ಕೋಟ್ಯಾಂತರ ರೂ. ಆದಾಯ
ಹಾಸನಾಂಬೆ
ಮಂಜುನಾಥ ಕೆಬಿ
| Edited By: |

Updated on: Nov 03, 2024 | 12:52 PM

Share

ಹಾಸನ, (ನವೆಂಬರ್ 03):ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ಇಂದು(ನವೆಂಬರ್ 03) ಮುಚ್ಚಲಾಗಿದೆ. ಕಳೆದ 11 ದಿನಗಳಿಂದ ನಡೆಯುತ್ತಿದ್ದ ಹಾಸನಾಂಬೆ ಉತ್ಸವಕ್ಕೆ ತೆರೆಬಿದ್ದಿದ್ದು, ಇಂದು ಮಧ್ಯಾಹ್ನ 12.33 ನಿಮಿಷಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಯಿತು. ದೇಗುಲ ಒಳಭಾಗದಲ್ಲಿ ಸ್ವಚ್ಚತೆ, ಸಿಂಗಾರ, ಪೂಜಾ ಕೈಂಕರ್ಯಗಳನ್ನು ಮುಗಿಸಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಲಾಯ್ತು. ಈ ಮೂಲಕ ಈ ವರ್ಷದ ದರ್ಶನೋತ್ಸವಕ್ಕೆ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಇನ್ನು ಮುಂದಿನ ವರ್ಷ ಅಕ್ಟೋಬರ್​ನಲ್ಲೇ ಮತ್ತೆ ಹಾಸನಾಂಬೆಯ ದರ್ಶನ ಸಿಗಲಿದೆ.

ಅಕ್ಟೋಬರ್ 24 ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್ 25 ರಿಂದ ನವೆಂಬರ್ 3 ರ ನಸುಕಿನ ಜಾವ 6 ಗಂಟೆಯವರೆಗೂ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಇಂದು ಗರ್ಭಗುಡಿಯ ಬಾಗಿಲು ಮುಚ್ಚಲಾಗಿದ್ದು, ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಜನರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದು, ಕೋಟ್ಯಾಂತರ ರೂಪಾಯಿ ಆದಾಯ ಹರಿದುಬಂದಿದೆ.

ಲಕ್ಷಾಂತರ ಭಕ್ತರಿಂದ ದರ್ಶನ

ಇನ್ನು ಈ ಬಾರಿ ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದು ಪುನೀತರಾಗಿದ್ದಾರೆ. ಕಳೆದ ವರ್ಷ 14 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದರು. ಆದ್ರೆ, ಈ ಬಾರಿ 18 ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನ ದರ್ಶನ ಪಡೆದುಕೊಂಡಿದ್ದಾರೆ. ಈ ವರ್ಷ ಹೆಚ್ಚು ಭಕ್ತರು ಹರಿದುಬಂದಿದ್ದರಿಂದ ಅಸ್ತವ್ಯಸ್ಥ ಉಂಟಾಗಿದೆ. ಅಧಿಕ ಪ್ರಮಾನದ ವಿವಿಐಪಿ ಪಾಸ್ ಕೊಟ್ಟಿದ್ದರಿಂದ ಸಾರ್ವಜನಿಕರ ದರ್ಶನಕ್ಕೆ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೊನೆಗೆ ಪಾಸ್​ ದರ್ಶನ ರದ್ದು ಮಾಡಲಾಯ್ತು. ದೂರದಿಂದ ಬಂದಿದ್ದ ಭಕ್ತರು ದರ್ಶನಕ್ಕೆ ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ಪರದಾಡಿದ್ದಾರೆ. ಅಲ್ಲದೇ ಕ್ಯೂನಲ್ಲಿ ನಿಂತ ಭಕ್ತರಿಗೆ ನೀರಿನ ವ್ಯವಸ್ಥೆ ಸಹ ಮಾಡಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ. ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗಿದ್ದರಿಂದ ಕೆಲ ಸಮಸ್ಯೆಗಳಾಗಿವೆ ಎಂದು ಸಚಿವರು, ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

ಹಾಸನಾಂಬೆ ದೇಗುಲಕ್ಕೆ ದಾಖಲೆಯ ಆದಾಯ

ಇನ್ನು ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದರೆ, ಕೋಟ್ಯಾಂತರ ರೂಪಾಯಿ ಆದಾಯ ಸಹ ಹರಿದುಬಂದಿದೆ. 9 ದಿನ ಸಾರ್ವಜನಿಕ ದರ್ಶನದಲ್ಲಿ ಬರೋಬ್ಬರಿ 9.3 ಕೋಟಿ ರೂ. ಹಣ ಸಂಗ್ರಹವಾಗಿದೆ. ಅದು ಕೇವಲ 1000 ರೂ, 300 ರೂ ಟಿಕೇಟ್ ಮಾರಾಟ ಹಾಗು ಲಡ್ಡು ಪ್ರಸಾದ ಮಾರಾಟ ದಿಂದ 9.3 ಕೋಟಿ ಆದಾಯ ಬಂದಿದೆ. ಇನ್ನೂ ಹುಂಡಿ ಕಾಣಿಕೆ ಎಣಿಕೆ ಮಾಡಿಲ್ಲ. ಹುಂಡಿ ಎಣಿಕೆ ನಂತರ ಒಟ್ಟು ಎಷ್ಟು ಆದಾಯ ಬಂದಿದೆ ಎನ್ನುವುದು ಗೊತ್ತಾಗಲಿದೆ. ಕೇವಲ ಟಿಕೆಟ್, ಪ್ರಸಾದಿಂದಲೇ 9 ಕೋಟಿ ರೂ. ಬಂದಿದೆ ಅಂದರೆ ಹುಂಡಿಯಲ್ಲಿ ಎಷ್ಟು ಜಮಾ ಆಗಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಮತ್ತೆ ಮುಂದಿನ ವರ್ಷಕ್ಕೆ ದರ್ಶನ

ವರವ ನೀಡುವ ಮಹಾತಾಯಿ ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಶಕ್ತಿದೇವತೆ. 9 ದಿನಗಳ ಕಾಲ ದರುಶನ ನೀಡಿದ ಹಾಸನಾಂಬೆಗೆ ಲಕ್ಷಾಂತರ ಭಕ್ತರಿಂದ ಉಘೇ ಉಘೇ.. ಬೇಡಿದ ವರವ ಕುರುಣಿಸುವ ದೇವಿಯನ್ನ ಭಕ್ತಗಣ ಕಣ್ಣು ತುಂಬಿಕೊಂಡಿದೆ.  ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಪವಾಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವರ್ಷದ ಹಿಂದೆ ಹಚ್ಚಿಟ್ಟ ದೀಪ ಉರಿಯುತ್ತಲೇ ಇರುತ್ತದೆ. ವರ್ಷದ ಹಿಂದೆ ಹಾಕಿದ್ದ ಹೂವು ಬಾಡದೇ ಹಾಗೆಯೇ ಇರುತ್ತೆ.  ಅಕ್ಟೋಬರ್​ 24ರಂದು ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿತ್ತು. ಮತ್ತೆ ಮುಂದಿನ ವರ್ಷ ಅಕ್ಟೋಬರ್​​ನಲ್ಲಿ ಹಾಸನಾಂಬೆ ದರ್ಶನ ನೀಡಲಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us