AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಹೆಚ್​ಡಿ ರೇವಣ್ಣ ಮುಂದಿರುವ ಹಾದಿಗಳೇನು?

ಕೋರ್ಟ್​ನಲ್ಲಿ ರೇವಣ್ಣ ಪರ ವಕೀಲರು ಹಾಗೂ ಎಸ್​ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕರ ನಡುವೆ ವಾದ ಪ್ರತಿವಾದ ನಡೆಯಿತು. ಅಂತಿಮವಾಗಿ ರೇವಣ್ಣಗೆ ಜಾಮೀನು ನಿರಾಕರಿಸಿದ ಕೋರ್ಟ್, ಅರ್ಜಿ ವಿಚಾರಣೆಯನ್ನ ಮೇ 6ಕ್ಕೆ ಮುಂದೂಡಿತ್ತು. ಆದರೆ ರೇವಣ್ಣ ಈಗ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬೇಕಿದೆ. ಹಾಗಿದ್ದರೆ ಈಗ ಹೆಚ್.ಡಿ.ರೇವಣ್ಣ ಮುಂದಿರುವ ಹಾದಿಗಳೇನು?

ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಹೆಚ್​ಡಿ ರೇವಣ್ಣ ಮುಂದಿರುವ ಹಾದಿಗಳೇನು?
ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಹೆಚ್​ಡಿ ರೇವಣ್ಣ ಮುಂದಿರುವ ಹಾದಿಗಳೇನು?
Ramesha M
| Edited By: |

Updated on: May 05, 2024 | 9:44 AM

Share

ಬೆಂಗಳೂರು, ಮೇ 05: ಹೆಚ್​ಡಿ ರೇವಣ್ಣ (HD Revanna) ವಿರುದ್ಧ ಕೇಳಿ ಬಂದ ಕಿಡ್ನ್ಯಾಪ್​ ಆರೋಪ ಮಾಜಿ ಸಚಿವರಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಮಹಿಳೆಯ ಕಿಡ್ನ್ಯಾಪ್ ಸುಳಿಯಲ್ಲಿ ಸಿಲುಕಿದ್ದ ರೇವಣ್ಣರನ್ನು ನಿನ್ನೆ ಎಸ್​ಐಟಿ (SIT) ಬಲೆಗೆ ಬಿದ್ದಿದ್ದಾರೆ. ಎಸ್​​ಐಟಿ ಅಧಿಕಾರಿಗಳು ಸದ್ಯ ಹೆಚ್​ಡಿ ರೇವಣ್ಣರನ್ನ ಬಂಧಿಸಿರೋದ್ರಿಂದ ನಿರೀಕ್ಷಣಾ ಜಾಮೀನಿ ಅರ್ಜಿ ವಜಾ ಆಗಿದೆ. ಹೀಗಾಗಿ ರೇವಣ್ಣ ಈಗ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬೇಕಿದೆ. ಹಾಗಿದ್ದರೆ ಈಗ ಹೆಚ್.ಡಿ.ರೇವಣ್ಣ ಮುಂದಿರುವ ಹಾದಿಗಳೇನು? ಆ ಕುರಿತಾಗಿ ಕಂಪ್ಲೀಟ್ ಡಿಟೇಲ್ಸ್​ ಇಲ್ಲಿದೆ ಮುಂದೆ ಓದಿ.

ಕಿಡ್ನಾಪ್ ಕೇಸ್ ಬಗ್ಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತು. ಎಸ್​ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕರು ಹಾಗೂ ರೇವಣ್ಣ ಪರ ವಕೀಲರ ನಡುವೆ ವಾದ-ಪ್ರತಿವಾದ ನಡೆಯಿತು. ಎರಡು ಕಡೆಯವರು ನ್ಯಾಯಧೀಶರ ಮುಂದೆ ವಾದ ಮಂಡಿಸಿದ್ದರು.

ಮೂರ್ತಿ ಡಿ. ನಾಯ್ಕ್, ರೇವಣ್ಣ ಪರ ಹಿರಿಯ ವಕೀಲ: ಪ್ರಕರಣವನ್ನು ಅನಗತ್ಯವಾಗಿ ಎಸ್‌ಐಟಿ ವಿಜೃಂಭಿಸುತ್ತಿದೆ. ಸೆಕ್ಷನ್ 363, ಸೆಕ್ಷನ್ 365 ಕಿಡ್ನಾಪ್ ಗೆ ಸಂಬಂಧಪಟ್ಟ ಕೇಸ್ ಆದರೆ ಎರಡೂ 7 ವರ್ಷದೊಳಗೆ ಶಿಕ್ಷೆ ನೀಡಬಹುದಾದ ಜಾಮೀನು ನೀಡಬಹುದಾದ ಅಪರಾಧಗಳು. ಆದರೆ ಸೆಕ್ಷನ್ 364A ಅಡಿ ಜೀವಾವಧಿ ಶಿಕ್ಷೆ, ಮರಣದಂಡನೆಗೂ ಅವಕಾಶವಿದೆ. ಜಾಮೀನು ಸಿಗಬಾರದೆಂದೇ ಪ್ರಕರಣಕ್ಕೆ ಅನ್ವಯವಾಗದ 364A ಸೆಕ್ಷನ್ ಹಾಕಿದ್ದಾರೆ. ‘ರೇವಣ್ಣ ಸಾಹೇಬರು ಕರೆದುಕೊಂಡು ಬಾ ಅಂದಿದ್ದಾರೆ’ ಅನ್ನೋ ಪದ ಬಿಟ್ಟರೆ ಹೆಚ್.ಡಿ.ರೇವಣ್ಣ ವಿರುದ್ಧ ಯಾವುದೇ ಆರೋಪವಿಲ್ಲ. ಈ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆರೋಪಿಯಲ್ಲ. ಎರಡನೇ ಆರೋಪಿಗೂ ಹೆಚ್.ಡಿ. ರೇವಣ್ಣಗೂ ಸಂಬಂಧವಿಲ್ಲ. ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ ನಂತರ ಈ ಕೇಸ್ ಹಾಕಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಎಸ್‌ಐಟಿ ಪ್ರಶ್ನೆಗಳಿಗೆ ರೇವಣ್ಣ ಕೊಟ್ಟ ಉತ್ತರವೇನು?

ಕೇಸ್​ಗೆ ಸಂಬಂಧವಿಲ್ಲದ ಅಂಶಗಳನ್ನೆಲ್ಲಾ ಎಸ್ಐಟಿ ಉಲ್ಲೇಖಿಸಿದೆ. ರೇವಣ್ಣರ ಮೇಲಿನ ಆರೋಪಕ್ಕೂ, ಎಸ್ಐಟಿ ಆಕ್ಷೇಪಣೆಗೂ ಸಂಬಂಧವಿಲ್ಲ. ರಾಜಕೀಯ ದ್ವೇಷದಿಂದ ತನಿಖೆ ನಡೆಯುತ್ತಿದೆ. ಕೆಲವೊಮ್ಮೆ ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸದಿರುವುದು ದುರದೃಷ್ಟಕರ.

ಆರೋಪಿ ಮುಗ್ಧ ಎಂದು ಸಾಬೀತುಮಾಡಲು ಅವಕಾಶ ನೀಡಬೇಕು. ಈ ಕಾರಣಕ್ಕಾಗಿಯೇ ನಿರೀಕ್ಷಣಾ ಜಾಮೀನು ನೀಡಬೇಕು. ನ್ಯಾಯಾಧೀಶರೂ ಪೂರ್ವಾಗ್ರಹವಿಲ್ಲದೇ ನಿರೀಕ್ಷಣಾ ಜಾಮೀನು ಪರಿಗಣಿಸಬೇಕು. SPPಗೆ ನೋಟಿಸ್ ನೀಡದೆಯೂ ಮಧ್ಯಂತರ ಜಾಮೀನು ನೀಡಬಹುದೆಂದು ಸುಪ್ರೀಂಕೋರ್ಟ್ ಹೇಳಿದೆ. ರೇವಣ್ಣ ಇಂದು ಎಸ್ಐಟಿ ವಿಚಾರಣೆಗೆ ಹಾಜರಾಗಲು ಸಿದ್ಧರಾಗಿದ್ದಾರೆ. ಆದರೆ ಎಸ್ಐಟಿ ರೇವಣ್ಣ ವಿರುದ್ಧ ಜಾಮೀನು ರಹಿತ ಕೇಸ್ ಹಾಕಿದೆ. ಕೋರ್ಟ್ ಬಂಧನದಿಂದ ರಕ್ಷಣೆ ನೀಡಿದರೆ ಇಂದೇ ತನಿಖೆಗೆ ಹಾಜರಾಗಲು ಸಿದ್ಧ. ತನಿಖೆಯ ಉದ್ದೇಶವೇ ಸತ್ಯಾಂಶ ಸಂಗ್ರಹಿಸುವುದು.

SPP ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಪ್ರಜ್ವಲ್ ಮೇಲಿನ ಆರೋಪಗಳನ್ನು ಉಲ್ಲೇಖಿಸಿದೆ. ಪ್ರಜ್ವಲ್ ರೇವಣ್ಣ ಮೇಲಿನ ಆರೋಪಗಳಿಗೆ ರೇವಣ್ಣ ಹೊಣೆಯೇ? ಹೀಗಾಗಿ ಯಾವುದೇ ಷರತ್ತು ವಿಧಿಸಿ ಮಧ್ಯಂತರ ಜಾಮೀನು ನೀಡಿ. ಸರಿಯಾಗಿ ಸಂಜೆ 5 ಗಂಟೆಗೆ ರೇವಣ್ಣ ಎಸ್ಐಟಿ ಮುಂದಿರುತ್ತಾರೆ. ರೇವಣ್ಣ ಪರ ವಕೀಲರ ವಾದಕ್ಕೆ ಸರ್ಕಾರದ ವಿಶೇಷ ಅಭಿಯೋಜನ ಬಿಎನ್ ಜಗದೀಶ್ ಆಕ್ಷೇಪ ಎತ್ತಿದ್ದಾರೆ.

ಬಿ.ಎನ್. ಜಗದೀಶ್, ಎಸ್​ಐಟಿ ಎಸ್​ಪಿಪಿ: ಮೊದಲ ಎಫ್ಐಆರ್​ನಲ್ಲಿ ಮಾತ್ರ ಜಾಮೀನು ರಹಿತ ಅಪರಾಧಗಳಿಲ್ಲ ಎಂದು ಎಸ್‌ಐಟಿ ಪರವಾಗಿ ಹೇಳಿದ್ದೆ. ಆದರೆ ಜಾಮೀನು ರಹಿತ ಕೇಸ್ ದಾಖಲಿಸುವುದಿಲ್ಲ ಎಂದು ಎಸ್‌ಐಟಿ ಭರವಸೆ ನೀಡಿಲ್ಲ. ತನಿಖಾಧಿಕಾರಿಯ ಮೊದಲ ಕರ್ತವ್ಯ ಮಹಿಳೆಯ ಜೀವ ಉಳಿಸುವುದಾಗಿದೆ. ಆಕೆಯ ಜೀವ ಉಳಿಸಿ ಸ್ವತಂತ್ರಗೊಳಿಸಲು ಎಸ್ಐಟಿ ಯತ್ನಿಸುತ್ತಿದೆ. ಬಡ ಮಹಿಳೆಯನ್ನು ಹುಡುಕಲು ಎಸ್ಐಟಿ ಎಲ್ಲ ಪ್ರಯತ್ನ ಮಾಡುತ್ತಿದೆ. ಆಕೆಯ ಪುತ್ರ ನೀಡಿರುವ ದೂರು ನಿಘಂಟು ಎಂದು ಭಾವಿಸಬಾರದು. ದೂರು ನೀಡಬೇಕಾದ ಮಹಿಳೆಯನ್ನು ದೂರು ನೀಡಿದರೆ ಎಚ್ಚರ ಎಂಬ ಸಂದೇಶ ರವಾನಿಸಲು ಬಯಸಿ ಅಪಹರಿಸಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡದಂತೆ ತಡೆಯಲು ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಆದ ಸಂತ್ರಸ್ತೆಯ ಆಕ್ಷೇಪಾರ್ಹ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಕಾರಣಕ್ಕಾಗಿಯೇ ಇನ್ ಕ್ಯಾಮರಾ ವಿಚಾರಣೆಗೆ ಕೋರಿದ್ದೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಕೇಸ್​: ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ಆಗಮನ ಸಾಧ್ಯತೆ

ಈ ಮಹಿಳೆಯನ್ನು ಕಿಡ್ನಾಪ್ ಮಾಡಿದ್ದು ಯಾರು.? ಹೆಚ್.ಡಿ.ರೇವಣ್ಣ ರಾಜಕೀಯವಾಗಿ, ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ. ಹೀಗಾಗಿ ಆಕೆಯನ್ನು ಅಪಹರಣ‌ ಮಾಡಿರಬಹುದು. ಬಿಹಾರ ರಾಜ್ಯದಲ್ಲಿ ನಡೆಯುತ್ತಿದ್ದ ಘಟನೆ ಇಲ್ಲಿ ನಡೆದಿದೆ. ಇನ್ನೂ ಯಾವುದಾದರೂ ಮಹಿಳೆಗೆ ಹೀಗೆ ನಡೆದಿದೆಯೋ ತಿಳಿಯಬೇಕಿದೆ. ಮಹಿಳೆಯನ್ನು ಕರೆತಂದು ಆಕೆಯ ಹೇಳಿಕೆ ಪಡೆಯಬೇಕಿದೆ. ರೇವಣ್ಣ ವಿಚಾರಣೆಗೊಳಪಡಿಸದೇ ಆಕೆಯನ್ನು ಹುಡುಕಿ ಹೇಳಿಕೆ ಪಡೆಯಲಾಗುವುದಿಲ್ಲ.

ಹೀಗೆ ಕೋರ್ಟ್​ನಲ್ಲಿ ರೇವಣ್ಣ ಪರ ವಕೀಲರು ಹಾಗೂ ಎಸ್​ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕರ ನಡುವೆ ವಾದ ಪ್ರತಿವಾದ ನಡೆಯಿತು. ಅಂತಿಮವಾಗಿ ರೇವಣ್ಣಗೆ ಜಾಮೀನು ನಿರಾಕರಿಸಿದ ಕೋರ್ಟ್, ಅರ್ಜಿ ವಿಚಾರಣೆಯನ್ನ ಮೇ 6ಕ್ಕೆ ಮುಂದೂಡಿತ್ತು. ಆದರೆ ಎಸ್​​ಐಟಿ ಅಧಿಕಾರಿಗಳು ಸದ್ಯ ರೇವಣ್ಣರನ್ನ ಬಂಧಿಸಿರೋದ್ರಿಂದ ನಿರೀಕ್ಷಣಾ ಜಾಮೀನಿ ಅರ್ಜಿ ನಿಷ್ಪಲವಾಗಿದೆ. ಎಸ್​ಐಟಿ ಕಸ್ಟಡಿಗೆ ಕೋರಿ ರಿಮಾಂಡ್ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಮ್ಯಾಜಿಸ್ಟ್ರೇಟ್ ಎಸ್ಐಟಿ ಕಸ್ಟಡಿಗೆ ನೀಡಿದರೆ ತನಿಖೆ ಮುಂದುವರಿಯಲಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೆ ರೇವಣ್ಣರನ್ನ ಪರಪ್ಪನ ಅಗ್ರಹಾರ ಜೈಲಿಗೆ ರವಾನೆ ಮಾಡಲಾಗುತ್ತದೆ. ಹೀಗಾಗಿ ರೇವಣ್ಣ ಈಗ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬೇಕಿದೆ. ಬಳಿಕ ರೇವಣ್ಣ ಭವಿಷ್ಯ ಕೋರ್ಟ್​ನಲ್ಲಿ ನಿರ್ಧಾರವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us