ಹಾಸನದಲ್ಲಿ ಮಳೆ ಆರ್ಭಟ: ಶಿರಾಡಿ ಘಾಟ್ನಲ್ಲಿ ಸಂಚಾರಕ್ಕೆ ಸಂಕಷ್ಟ, ಕೊಂಚ ಎಡವಟ್ಟಾದ್ರೆ ಪ್ರಾಣಕ್ಕೆ ಕುತ್ತು ಭೀತಿ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದ ಶಿರಾಡಿ ಘಾಟ್ನಲ್ಲಿ ರಸ್ತೆ ಸಂಚಾರಕ್ಕೆ ತೀವ್ರ ಸಂಕಷ್ಟ ಉಂಟಾಗಿದೆ. ಭಾರೀ ಗಾಳಿ ಮತ್ತು ಮಳೆಯಿಂದ ಬೃಹತ್ ಮರಗಳು ರಸ್ತೆಗೆ ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಅಡಚಣೆಯಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ. ಒಂದು ಪಥದ ಸಂಚಾರ ಸ್ಥಗಿತಗೊಳಿಸಲಾಗಿದೆ.

ಹಾಸನ, ಜೂನ್ 16: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ (rain) ಆರ್ಭಟ ಜೋರಾಗಿದೆ. ಎರಡು ವಾರಗಳ ಬಿಡುವಿನ ಬಳಿಕ ಮತ್ತೆ ಶುರುವಾಗಿರುವ ಧಾರಾಕಾರ ಮಳೆ, ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನ (Shiradi Ghat) ಸಕಲೇಶಪುರದಿಂದ ಮಾರನಹಳ್ಳಿವರೆಗೆ ಆತಂಕ ಹೆಚ್ಚಿದೆ. ಭಾರೀ ಗಾಳಿ, ಮಳೆಗೆ ಬೃಹದಾಕಾರದ ಮರಗಳು ರಸ್ತೆಗೆ ಉರುಳುತ್ತಿದ್ದು, ಕೊಂಚ ಎಡವಟ್ಟಾದರೂ ಪ್ರಾಣಕ್ಕೆ ಕುತ್ತು ಬರುವ ಭೀತಿ ಎದುರಾಗಿದೆ. ಸದ್ಯ ಒಂದು ಪಥದ ಸಂಚಾರ ಸ್ಥಗಿತಗೊಳಿಸಲಾಗಿದೆ.
ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಶಿರಾಡಿ ಘಾಟ್ನಲ್ಲಿ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಗಾಳಿ, ಮಳೆಯಿಂದಾಗಿ ನೂರಾರು ಮರಗಳು ರಸ್ತೆ ಮೇಲೆ ಕುಸಿಯುವ ಭೀತಿ ಶುರುವಾಗಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಗುಡ ಕೊರೆದಿರುವ ಹಿನ್ನೆಲೆಯಲ್ಲಿ ಆತಂಕ ಶುರುವಾಗಿದ್ದು, ಕಾಫಿ ತೋಟದ ಮರಗಳು ರಸ್ತೆಗೆ ಉರುಳುತ್ತಿವೆ. ಭಾನುವಾರ ಕೂಡ ಶಿರಾಡಿ ಘಾಟ್ನ ದೋಣಿಗಲ್ ಬಳಿ ಬೃಹತ್ ಮರವೊಂದು ಬಿದ್ದಿತ್ತು.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಆತಂಕ: ತಜ್ಞರ ತಂಡ ಹೇಳಿದ್ದೇನು? ಯಾವ ಪ್ರದೇಶಗಳ ಜನ ಎಚ್ಚರ ವಹಿಸಬೇಕು? ಇಲ್ಲಿದೆ ವಿವರ
ಹಾಸನದಿಂದ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿವರೆಗೆ ಒಟ್ಟು 45 ಕಿ,ಮೀ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹಾಸನದಿಂದ ಸಕಲೇಶಪುರದವರೆಗಿನ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ಸಕಲೇಶಪುರದಿಂದ ಮಾರನಹಳ್ಳಿ ವರೆಗಿನ 12 ಕಿ.ಮೀ ರಸ್ತೆ ಕಾಮಗಾರಿ ಬರೋಬ್ಬರಿ 8 ವರ್ಷಗಳಿಂದ ನಡೆಯುತ್ತಲೇ ಇದೆ. ಇನ್ನೂ ಶೇಕಡ 40 ರಿಂದ 50 ರಷ್ಟು ಕೆಲಸ ಬಾಕಿ ಇದೆ.
ಇದನ್ನೂ ಓದಿ: ಶಿರಾಡಿ, ಚಾರ್ಮಾಡಿ, ಶಿರೂರಿನಲ್ಲಿ ಭೂಕುಸಿತ: ಉತ್ತರ ಕನ್ನಡದಲ್ಲಿ ಹೆದ್ದಾರಿಯ 19 ಕಡೆ ವಾಹನ ನಿಲುಗಡೆ ಬಂದ್
ಈ ಮಾರ್ಗದ ಹಲವು ಕಡೆ ಭೂ ಕುಸಿತದ ಭೀತಿ ಇದೆ. ಅಧಿಕಾರಿಗಳು ಭೂ ಕುಸಿತದ ಸ್ಥಳವೆನ್ನುವ ಎಚ್ಚರಿಕೆ ಫಲಕ ಹಾಕಿದ್ದರೂ ಮಳೆಯಿಂದ ಯಾವಾಗ ಏನಾಗುತ್ತೋ ಎನ್ನೋ ಆತಂಕ ಎಲ್ಲರನ್ನು ಕಾಡುತ್ತಿದೆ. ಕಳೆದ ಮೇ ತಿಂಗಳು ಕೇವಲ ಒಂದೇ ಒಂದು ಮಳೆಗೆ ದೊಡ್ಡ ಅನಾಹುಗಳ ಸರಣಿಯೇ ಸೃಷ್ಟಿಯಾಗಿ ಸಂಸದರು, ಲೋಕೋಪಯೋಗಿ ಸಚಿವರು, ವಿಪಕ್ಷ ನಾಯಕರು ಬಂದು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದರು. ಇದಾದ ಬಳಿಕ ಎರಡು ವಾರ ಮಳೆ ಬ್ರೇಕ್ ನೀಡಿತ್ತು. ಹಾಗಾಗಿ ಸಮಸ್ಯೆಯೂ ತಗ್ಗಿತ್ತು. ಆದರೆ ಇದೀಗ ಮತ್ತೆ ಮಳೆ ಆರಂಭವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.