ಜನಮನ ಸೆಳೆದ ಬಾನುಮುಷ್ತಾಕ್ರ ಎದೆಯ ಹಣತೆ ನಾಟಕ: ಪ್ರತಿ ಮಹಿಳೆಯರಲ್ಲೂ ಹೋರಾಟಗಾರ್ತಿ ಇರುತ್ತಾಳೆ, ಡಿಸಿ
ಹಾಸನದ ಕಲಾಕ್ಷೇತ್ರದಲ್ಲಿ ಜನಮನದಾಟ ತಂಡವು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ಟಾಕ್ ಅವರ "ಎದೆಯ ಹಣತೆ" ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿತು. ಬಾನು ಮುಷ್ಟಾಕ್ ಅವರ ಸಮ್ಮುಖದಲ್ಲಿಯೇ ನಡೆದ ಈ ಪ್ರದರ್ಶನ ವಿಶೇಷವಾಗಿತ್ತು. ನಾಟಕದ ನಿಷ್ಪಾಪ ಅಭಿನಯಕ್ಕೆ ಬಾನು ಮುಷ್ಟಾಕ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹಿಳೆಯರ ಹೋರಾಟ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಾಟಕ ಪ್ರತಿಬಿಂಬಿಸುತ್ತದೆ.

ಹಾಸನ, ಜುಲೈ 12: ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ (Booker Award) ಪಡೆದಿರುವ ಬಾನು ಮುಷ್ತಾಕ್ (Banu Mushtaq) ಅವರ ಎದೆಯ ಹಣತೆ ನಾಟಕವನ್ನು ಹಾಸನದ ಕಲಾಕ್ಷೇತ್ರದಲ್ಲಿ ಜನಮನದಾಟ ತಂಡದವರು ಅಚ್ಚುಕಟ್ಟಾಗಿ ಅಭಿನಯಿಸಿದ್ದು, ಜನಮನ ಸೆಳೆಯಿತು. ಇದೇ ಮೊದಲ ಬಾರಿಗೆ ಕತೆಗಾರ್ತಿ ಮತ್ತು ಸಾಹಿತಿ ಬಾನುಮುಷ್ತಾಕ್ ಸಮ್ಮುಖದಲ್ಲಿಯೇ ಈ ನಾಟಕ ಅಭಿನಯಗೊಂಡಿದ್ದು ವಿಶೇಷ. ನಾಟಕವನ್ನು ಪೂರ್ಣ ವೀಕ್ಷಿಸಿದ ಬಾನುಮುಷ್ತಾಕ್ ಅವರು, ತಮ್ಮ ಮೂಲ ಕಥೆಗೆ ಎಲ್ಲಿಯೂ ಚ್ಯುತಿ ಬಾರದ ರೀತಿಯಲ್ಲಿ ನಾಟಕವನ್ನು ಪರಿಣಾಮಕಾರಿಯಾಗಿ ಅಭಿನಯಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ರಂಗಸಿರಿ ಆಶ್ರಯದಲ್ಲಿ ಆಯೋಜಿಸಿದ್ದ ಮಾಯಾಮೃಗ, ಎದೆಯ ಹಣತೆ ನಾಟಕಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮತ್ತು ಬಾನುಮುಷ್ತಾಕ್ ಅವರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು, ಪ್ರತಿಯೊಬ್ಬ ಮಹಿಳೆಯಲ್ಲೂ ಹೋರಾಟಗಾರ್ತಿ ಇರುತ್ತಾಳೆ ಎಂದರು.
ಬಾನುಮುಷ್ತಾಕ್ ಅವರ ಹೋರಾಟದ ಬದುಕು, ಅವರ ಕಥೆ, ಪಾತ್ರವನ್ನ ನೋಡುತ್ತಾ ಹೋದರೆ ಅವುಗಳ ವೇದನೆ, ಹೋರಾಟಗಳು ತಿಳಿಯುತ್ತ ಹೋಗುತ್ತವೆ ಎಂದು ಹೇಳಿದರು.
ಬಾನು ಅವರ ಬರಹ ನಮಗೆ ಕಥೆ ಅನಿಸುವುದಿಲ್ಲ. ಜೀವಂತ ವ್ಯಕ್ತಿತ್ವ ಅನಿಸಿ ಬಿಡುತ್ತದೆ. ಓದುತ್ತಾ ಹೋದರೆ ಅದರಲ್ಲಿ ನಮ್ಮದೂ ಒಂದು ಪಾತ್ರ ಇದೆ ಅನಿಸುತ್ತದೆ. ಒಬ್ಬ ಬರಹಗಾರ್ತಿಯಾಗಿ, ಪತ್ರಕರ್ತೆಯಾಗಿ ಹಾಗೂ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಾವು ಮಹಿಳೆಯರಾಗಿ ಚೆನ್ನಾಗಿ ಓದಿದ್ದೇವೆ, ಆರ್ಥಿಕವಾಗಿ ಸಬಲರಾಗಿದ್ದೇವೆ, ಎಲ್ಲಾ ಪಡೆದು ಬಿಟ್ಟಿದ್ದೇವೆ ಎನ್ನುವುದು ಎಂತಹುದೂ ಇಲ್ಲ. ಈಗಲೂ ಹೇಳುತ್ತೇವೆ, ಮಹಿಳೆಗೆ ಸಿಗಬೇಕಾದ ಗೌರವದಲ್ಲಿ ಇನ್ನು ಸಂಪೂರ್ಣವಾಗಿ ಸಿಕ್ಕಿಲ್ಲ, ಸಮಾನತೆ ಎಂಬುದು ದೂರದ ಮಾತಾಗಿದೆ ಅವಕಾಶ ಕೇಳಲೇಬೇಡಿ ಎಂದು ಬೇಸರ ವ್ಯಕ್ತಪಡಿಸಿದರು.
ಈ ಎಲ್ಲಾ ಕೊರತೆಗಳ ನಡುವೆಯೂ ಸಹ ಹೆಣ್ಣನ್ನು, ಹೆಣ್ಣಿನ ವ್ಯಕ್ತಿತ್ವವನ್ನು ಪ್ರತಿಪಾದಿಸುವ ಒಂದು ಉತ್ತಮ ವ್ಯಕ್ತಿತ್ವ ನಮ್ಮ ಜತೆ ಇದ್ದಾರೆ ಎನ್ನುವುದೇ ಒಂದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು. ಸಮಾಜದಲ್ಲಿ ಈಗಲೂ ಮಹಿಳೆಗೆ ಸಿಗಬೇಕಾದ ಗೌರವ ಇನ್ನು ಸಂಪೂರ್ಣವಾಗಿ ಸಿಕ್ಕಿಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದವರ ಜತೆ ನಾವು ಕುಳಿತಿದ್ದೇವೆ ಎಂದರೆ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ರಂಗಸಿರಿ ಕಲಾ ತಂಡದ ಸದಸ್ಯರು ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇಂತಹ ಕಾರ್ಯಕ್ರಮವನ್ನು ಹೆಚ್ಚಿನ ರೀತಿ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧಕ್ಷ ಟಿ.ವಿ.ಶಿವಾನಂದ ತಗಡೂರು ಮಾತನಾಡಿ, ಹಾಸನ ಹಲವು ವಿಭಿನ್ನ ಬಗೆಯ ಸಂಸ್ಕೃತಿಯನ್ನು ಮತ್ತು ಪ್ರತಿಭೆಯನ್ನು ಹೊಂದಿರುವ ಜಿಲ್ಲೆ. ಈ ಮಣ್ಣಿನಲ್ಲಿ ಅರಳಿದ ಬಾನುಮುಷ್ತಕ್ ಅವರ ಪ್ರತಿಭೆ, ನಾಡಿಗೆ ಅಷ್ಟೇ ಅಲ್ಲ, ಜಗದಲ್ಲಿ ಬಾನೆತ್ತರಕ್ಕೆ ತಮ್ಮ ಪ್ರತಿಭೆಯನ್ನು ಬೆಳೆಗಿರುವುದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿ ಎಂದರು ಹೇಳಿದರು.
ಇದನ್ನೂ ಓದಿ: ಕನ್ನಡ ನಾಡಿನ ಮೊಟ್ಟಮೊದಲ ಕೃತಿಗೆ ಬೂಕರ್ ಪ್ರಶಸ್ತಿ ಗರಿ: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಹಿತಿ ಬಾನು ಮುಷ್ತಾಕ್
ಎದೆಯ ಹಣತೆ ನಾಟಕ ನಿರ್ದೇಶನ ಮಾಡಿದ ನೀನಾಸಮ್ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲ ಡಾ.ಎಂ.ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮಾಯಾಮೃಗ ನಾಟಕವನ್ನು ಇದೇ ತಂಡ ಅಭಿನಯಿಸಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಅಮೋಘ್ ಸಂಸ್ಥೆಯ ಮುಖ್ಯಸ್ಥ ಕೆ.ಪಿ.ಎಸ್.ಪ್ರಮೋದ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು, ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಹೆಮ್ಮಿಗೆ ಮೋಹನ್, ವಿಜಯ ಸ್ಕೂಲ್ನ ತಾರಾ ಸುಬ್ಬಸ್ವಾಮಿ, ಟೈಮ್ಸ್ ಸಂಸ್ಥೆಯ ಮುಖ್ಯಸ್ಥ ಗಂಗಾಧರ್, ಸಾಕ್ಷರತೆಯ ಎಸ್.ಎಸ್.ಪಾಷ, ರಂಗಸಿರಿ ಅಧ್ಯಕ್ಷ ಕೆ.ರಂಗಸ್ವಾಮಿ, ಪಿ.ಶಾಡ್ರಾಕ್ ಮತ್ತಿತರರು ಹಾಜರಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




