ಮೋದಿ ದೇಶದ್ರೋಹಿ ಎಂದ ಕಾಂಗ್ರೆಸ್ ಶಾಸಕ: ಸಿಡಿದೆದ್ದ ಬಿಜೆಪಿ, ಸದನದಲ್ಲಿ ಕೋಲಾಹಲ

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿ ಪರಿಷತ್​​ಗೆ ತೆರಳಿದ್ದು, ಅಲ್ಲಿ ಉತ್ತರ ನೀಡಬೇಕಾದರೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದಿದೆ. ಈ ನಡುವೆ ವಿಧಾನಪರಿಷತ್ ಕಾಂಗ್ರೆಸ್ ಶಾಸಕ ನಜೀರ್ ಅಹ್ಮದ್​ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶದ್ರೋಹಿ ಎಂದು ಕರೆದು ವಿವಾದದ ಕಿಡಿಹೊತ್ತಿಸಿದ್ದಾರೆ.

ಮೋದಿ ದೇಶದ್ರೋಹಿ ಎಂದ ಕಾಂಗ್ರೆಸ್ ಶಾಸಕ: ಸಿಡಿದೆದ್ದ ಬಿಜೆಪಿ, ಸದನದಲ್ಲಿ ಕೋಲಾಹಲ
Karnataka Session

Updated on: Feb 02, 2026 | 10:01 PM

ಬೆಂಗಳೂರು, (ಫೆಬ್ರವರಿ 02): ವಿಧಾನಪರಿಷತ್ ಕಲಾಪದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ , ಪರಿಷತ್ ಸದಸ್ಯ ನಜೀರ್ ಅಹ್ಮದ್  (Congress MLC Naseer Ahmed ) ವಿವಾದ ಸೃಷ್ಟಿಸಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸುತ್ತಿದ್ದ ವೇಳೆ ಕಾಂಗ್ರೆಸ್ ಪರಿಷತ್ ಸದಸ್ಯ ನಜೀರ್ ಅಹ್ಮದ್​ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ದೇಶದ್ರೋಹಿ ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ. ನಜೀರ್ ಅಹ್ಮದ್ ಅವರ ಮಾತಿಗೆ ಕೆರಳಿದ ಬಿಜೆಪಿ ಸದಸ್ಯರು, ಬಾವಿಗಿಳಿದು ಧರಣಿ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೋಗಿ ಆಕ್ರೋಶ ಹೊರಹಾಕಿದರು.

ಅಲ್ಲದೇ ನಜೀರ್ ಅಹ್ಮದ್​​ ಕ್ಷಮೆ ಕೇಳಬೇಕು ಎಂದು ವಿಪಕ್ಷಗಳ ಸದಸ್ಯರು ಪಟ್ಟು ಹಿಡಿದಿದ್ದು, ಸದಸ್ಯರ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಕೂಡಲೇ ಎಚ್ಚೆತ್ತ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಕಲಾಪವನ್ನು ನಾಳೆ(ಫೆ.03) 11ಕ್ಕೆ ಮುಂದೂಡಿದರು. ಆದರೂ ಪಟ್ಟು ಸಡಿಸದ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದ್ದಾರೆ.

ಇದನ್ನೂ ನೋಡಿ: ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್

ನಜೀರ್ ಅಹ್ಮದ್ ಹೇಳಿದ್ದೇನು?

ಇನ್ನು ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಜೀರ್ ಅಹ್ಮದ್, ಸದನದಲ್ಲಿ ಅಂಥದ್ದೇನೂ ಮಾತಾಡಿಲ್ಲ. ಪರಿಷತ್​ನಲ್ಲಿ ಆಗಿದ್ದನ್ನೆಲ್ಲ ಹೊರಗೆ ಹೇಳೋಕೆ ಆಗುವುದಿಲ್ಲ ಎಂದಷ್ಟೇ ಹೇಳಿ ತೆರಳಿದರು. ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಹ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋದರು.

ಪ್ರಧಾನಿಗೆ ನಿಂದಿನೆ ಸಹಿಸುವುದಿಲ್ಲ

ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿಯನ್ನ ದೇಶ ದ್ರೋಹಿ ಅನ್ನೋ ರೀತಿ ನಿಂದಿಸಿದ್ದಾರೆ. ಸುಮಾರು 10 ಬಾರಿ ಹೇಳಿದ್ದಾರೆ. ಪ್ರಧಾನಿಯ ಕಾಲು ಧೂಳಿಗೂ ನಜೀರ್ ಅಹ್ಮದ್ ಸಮರಲ್ಲ. ಸಭಾಪತಿಗಳು ಅದನ್ನ ಕಡತದಿಂದ ತೆಗೆಯಿರಿ ಎಂದು ಹೇಳಿದ್ದಾರೆ. ಕ್ಷಮೆ ಕೇಳಿ ಅಂದ್ರೂ ಇನ್ನೂ 10 ಬಾರಿ ಘೋಷಣೆ ಕೂಗಿದ್ರು. ಅದೂ ಸಿಎಂ ಸಮ್ಮುಖದಲ್ಲೇ ಕೂಗಿದ್ದಾರೆ. ನಾಳೆ ಅವರನ್ನ ಸದನದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದೇವೆ. ಕ್ರಮ ಆಗಲೇಬೇಕು, ಇಲ್ಲವಾದ್ರೆ ಸದನ ನಡೆಯಲು ನಾವು ಬಿಡಲ್ಲ ಎಂದರು.

ನಮ್ಮನ್ನೂ ಬೇಕಿದ್ರೆ ಹೊರ ಹಾಕಲಿ. ಪ್ರಧಾನಿಗಳ ನಿಂದಿಸಿರುವುದನ್ನು ನಾವು ಸಹಿಸಲ್ಲ. ಏನು ಮಾತಾಡಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಲಿ ನೋಡೋಣ. ಭ್ರಷ್ಟಾಚಾರ ವಿಚಾರ ಬಂದಾಗ ನಾವೂ ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತೇವೆ. ಆದ್ರೆ ನಿಂದಿಸುವ ಕೆಲಸ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ಗದ್ದಲ ಸಾಧ್ಯತೆ

ನಜೀರ್ ಅಹ್ಮದ್ ಹೇಳಿಕೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಬಿಜೆಪಿ ನಾಯಕರು  ನಾಳೆ ವಿಧಾನಸಭೆ ಹಾಗೂ ವಿಧಾನಪರಿಷತ್​ನಲ್ಲೂ  ಪ್ರಸ್ತಾಪಿಸಿ  ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವ ಸಾಧ್ಯತೆಗಳಿವೆ. ನಜೀರ್ ಅಹ್ಮದ್ ಕ್ಷಮೆ ಕೇಳಬೇಕು. ಹಾಗೇ ಅವರನ್ನು ಸದನದಿಂದ ಅಮಾನತು ಮಾಡಬೇಕೆಂದು ಬೇಡಿಕೆ ಮುಂದಿಟ್ಟು ಧರಣಿ ನಡೆಸಲಿದೆ. ಹೀಗಾಗಿ ನಾಳಿನ ಕಲಾಪ ರಣಾಂಗಣವಾಗುವುದರಲ್ಲಿ ಸಾಧ್ಯತೆಗಳಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:47 pm, Mon, 2 February 26