ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ ಮತ್ತು ಕಾಫೀ ಡೇ ಮಾಲೀಕ ದಿ.ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಅವರ ನಿಶ್ಚಿತಾರ್ಥ ಸಮಾರಂಭ ಇಂದು ನೆರವೇರಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ತಾಜ್ ಹೋಟೆಲ್ನಲ್ಲಿ ನಿಶ್ಚಿತಾರ್ಥ ಸಮಾರಂಭವು ನೆರವೇರಿತು.
ಎರಡೂ ಕುಟುಂಬಗಳ ನಡುವೆ ಈ ಹಿಂದೆ ಮಾತುಕತೆ ಮುಗಿದಿದ್ದು ಇಂದು ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಿನ್ನೆ ರಾತ್ರಿಯೇ ತಾಜ್ ಹೋಟೆಲ್ಗೆ ಬಂದಿಳಿದ ಎಸ್.ಎಂ.ಕೃಷ್ಣ ಕುಟುಂಬದವರು ಇಂದು ಸಂಪ್ರದಾಯದಂತೆ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಿದರು.
ನಿಶ್ಚಿತಾರ್ಥ ಸಮಾರಂಭಕ್ಕೆ ಆಯ್ದ 250 ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕೊವಿಡ್ ಹಿನ್ನೆಲೆಯಲ್ಲಿ ಸೀಮಿತ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದ್ದು ಸಮಾರಂಭಕ್ಕೆ ಸಿಎಂ B.S. ಯಡಿಯೂರಪ್ಪ ಮತ್ತು ಸಚಿವರಾದ ಅಶೋಕ್, ಸೋಮಣ್ಣ ಹಾಗೂ ಸುಧಾಕರ್ ಆಗಮಿಸಿದ್ದರು. ವಿನಯ್ ಗುರೂಜಿ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದಲ್ಲದೆ, ಎರಡೂ ಕುಟುಂಬದ ನಿಕಟ ಸಂಬಂಧಿಕರು ಸಹ ಭಾಗಿಯಾಗಿದ್ದರು.