AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಅಕ್ಷರ ಜೋಳಿಗೆ ದೇಣಿಗೆಯ ಹೈಸ್ಕೂಲ್ ಕಟ್ಟಡ ಟೆಂಡರ್​ಗಾಗಿ ಕಮಿಷನ್ ಲೆಕ್ಕಾಚಾರ; ಗ್ರಾಮದ ಜನರೇ ದುಡ್ಡು ಕೊಟ್ರು ನಿರ್ಮಾಣವಾಗ್ತಿಲ್ಲ ಶಾಲೆ

ಆ ಊರಿನ ಹೈಸ್ಕೂಲ್ ಮಕ್ಕಳಿಗೆ ಶಾಲಾ ಕಟ್ಟಡವೇ ಕಂಟಕವಾಗಿತ್ತು. ಯಮಸ್ವೂರೂಪಿಯಂತಿದ್ದ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರು. ಆದರೆ, ಕಾನೂನು ಅಡೆತಡೆಯಿಂದ ಪ್ರಯೋಜನ ಆಗಿರಲಿಲ್ಲ‌. ಹೀಗಾಗಿ ದಿಟ್ಟ ಹೆಜ್ಜೆ ಇಟ್ಟ ಇಡೀ ಗ್ರಾಮಸ್ಥರು, ಹೈಸ್ಕೂಲ್ ಕಟ್ಟಡಕ್ಕಾಗಿ ಅಕ್ಷರ ಜೋಳಿಗೆ ಮೂಲಕ ಕೋಟ್ಯಾಂತರ ರೂಪಾಯಿ ದೇಣಿಗೆ ಎತ್ತಿ, ಶಿಕ್ಷಣ ಇಲಾಖೆಗೆ ಜಮೀನು ನೀಡಿದ್ರು. ಆದ್ರೆ ದೇಣಿಗೆಯ ಶಾಲಾ ಕಟ್ಟಡ ವರ್ಕ್​ನಲ್ಲಿ ಇದೀಗ ಕಮಿಷನ್ ಆಟ, ರಾಜಕೀಯ ‌ಲೆಕ್ಕಾಚಾರ ಶುರುವಾಗಿದ್ದು,ಗ್ರಾಮದ ಜನರೇ ದುಡ್ಡು ಕೊಟ್ರು ನಿರ್ಮಾಣವಾಗ್ತಿಲ್ಲ.

ಕಲಬುರಗಿ: ಅಕ್ಷರ ಜೋಳಿಗೆ ದೇಣಿಗೆಯ ಹೈಸ್ಕೂಲ್ ಕಟ್ಟಡ ಟೆಂಡರ್​ಗಾಗಿ ಕಮಿಷನ್ ಲೆಕ್ಕಾಚಾರ; ಗ್ರಾಮದ ಜನರೇ ದುಡ್ಡು ಕೊಟ್ರು ನಿರ್ಮಾಣವಾಗ್ತಿಲ್ಲ ಶಾಲೆ
ಅಫಜಲಪುರ ಹೈಸ್ಕೂಲ್​ ನಿರ್ಮಾಣ ಕಾಮಗಾರಿ ಟೆಂಡರ್​ ಆರೋಪ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 07, 2024 | 2:06 PM

ಕಲಬುರಗಿ, ಜ.07: ಜಿಲ್ಲೆಯ ಅಫಜಲಪುರ(Afzalpur) ತಾಲ್ಲೂಕಿನ ಗ್ರಾಮದಲ್ಲಿ ನಿರ್ಮಾಣ ಆಗಬೇಕಿರುವ ನೂತನ ಹೈಸ್ಕೂಲ್ (high school)ಕಟ್ಟಡ ಕಾಮಗಾರಿ ಟೆಂಡರ್​ನಲ್ಲಿ ಕಮಿಷನ್ ಮತ್ತು ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಕೆಕೆಆರ್​ಡಿಬಿಯ ಎರಡು ಕೋಟಿ ಅನುದಾನದಲ್ಲಿ ನೂತನ 11 ಕೊಠಡಿಗಳ ಹೈಸ್ಕೂಲ್ ಕಟ್ಟಡ ಕಾಮಗಾರಿಗಾಗಿ ಕೆಲವು ತಿಂಗಳ ಹಿಂದೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಬಿಜೆಪಿ ಬೆಂಬಲಿತ ಕಾಂಟ್ರಾಕ್ಟರ್​​ಗೆ ನೀಡಲಾಗಿತ್ತಂತೆ. ಆದರೀಗ ತಾಂತ್ರಿಕ ದೋಷ ಹಾಗೂ ಸ್ಥಳದ ಕೊರತೆ ನೇಪ ತೋರಿ ಹಳೆ ಟೆಂಡರ್​ನ್ನು ರದ್ದುಪಡಿಸಿ, 9 ಕೋಠಡಿಗಳ ಪ್ಲ್ಯಾನ್ ರೂಪಿಸಿ ಮರು ಟೆಂಡರ್​ಗೆ ಅಫಜಲಪುರ ಶಾಸಕ ಎಂ ವೈ ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಶಾಸಕರು ರಾಜಕೀಯ ಮಾಡ್ತಿದ್ದಾರೆಂದು ಗ್ರಾಮಸ್ಥರ ಆರೋಪ

ತಮ್ಮ ಬೆಂಬಲಿಗರಿಗೆ ಶಾಲಾ ಕಟ್ಟಡ ಟೆಂಡರ್ ಕೊಡಿಸಲು ಕಮಿಷನ್ ಲೆಕ್ಕಾಚಾರ ಇಟ್ಟುಕೊಂಡು ಶಾಸಕರು ರಾಜಕೀಯ ಮಾಡ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿದ್ದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಸ್ಥಳದಲ್ಲಿ ಹೈಸ್ಕೂಲ್ ಇತ್ತು. ಸುಮಾರು 200 ಕ್ಕೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು‌. ಆದ್ರೆ, ಹಳೆಯದಾದ ಶಾಲಾ ಕಟ್ಟಡ ಸಂಪೂರ್ಣ ಶೀಥಿಲ ಆಗಿತ್ತು. ಈ ಹಿನ್ನಲೆ ಮರು ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದ್ರು ಕಾನೂನು ಅಡೆತಡೆ ಕಾರಣ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:ಪಿಎಸ್​ಐ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ; ರಾಜ್ಯ ಸರ್ಕಾರವೇ ಒಂದು ದೊಡ್ಡ ಹಗರಣ: ಪ್ರಿಯಾಂಕ್ ಖರ್ಗೆ

ಸೊನ್ನ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಅಕ್ಷರ ಜೋಳಿಗೆ

ಹೀಗಾಗಿ ನೂತನ ಹೈಸ್ಕೂಲ್ ಕಟ್ಟಡಕ್ಕಾಗಿ ಗ್ರಾಮಸ್ಥರು ದಿಟ್ಟ ನಿರ್ಧಾರ ಕೈಗೊಂಡು ಕಳೆದ 2022 ರ ನವೆಂಬರ್ ತಿಂಗಳಲ್ಲಿ ದೇಣಿಗೆ ಎತ್ತಿದ್ದರು. ಸೊನ್ನ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಅಕ್ಷರ ಜೋಳಿಗೆ ಮೂಲಕ ಗ್ರಾಮದ ಪ್ರತಿ ಮನೆಗೆ ತೆರಳಿ ಒಂದೂ ಕೋಟಿಗೂ ಅಧಿಕ ದೇಣಿಗೆ ಸಂಗ್ರಹಿಸಲಾಗಿತ್ತು. ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಗ್ರಾಮಸ್ಥರು ಉದಾರ ಮನಸ್ಸಿನಿಂದ ಭರಪೂರ ದೇಣಿಗೆ ನೀಡಿದರು. ದೇಣಿಗೆ ಹಣದಲ್ಲಿ ಗ್ರಾಮದಲ್ಲಿ 5 ಎಕರೆ ಜಮೀನು ಖರೀದಿಸಿ 2.5 ಎಕರೆ ಜಮೀನು ಹೈಸ್ಕೂಲ್ ಕಟ್ಟಡಕ್ಕಾಗಿ ಶಿಕ್ಷಣ ಇಲಾಖೆಗೆ ನೀಡಲಾಗಿದೆ.

ಇನ್ನುಳಿದ 2.5 ಎಕರೆ ಜಮೀನು ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಅನುಕೂಲಕ್ಕಾಗಿ ಮೀಸಲಿಡಲಾಗಿದೆ. ಆದರೆ, ಜಮೀನು ಶಿಕ್ಷಣ ಇಲಾಖೆಗೆ ನೀಡಿ ಒಂದೂ ವರ್ಷ ಕಳೆದರೂ ಟೆಂಡರ್​ನಲ್ಲಿ ಕಮಿಷನ್, ರಾಜಕೀಯ ಲೆಕ್ಕಾಚಾರದಿಂದ ಹೈಸ್ಕೂಲ್ ಕಟ್ಟಡ ಕಾಮಗಾರಿ ಆರಂಭವಾಗದೇ ನೆನೆಗುದಿಗೆ ಬಿದ್ದಿದೆ. ಇತ್ತ ಹಳೆ ಕಟ್ಟಡ ಶಿಥೀಲಗೊಂಡಿರುವುದರಿಂದ ಶಾಲಾ ಮಕ್ಕಳಿಗೆ ದೇವಸ್ಥಾನದ ವಸತಿ ಗೃಹದಲ್ಲಿ ಪಾಠ ಮಾಡಲಾಗುತ್ತಿದೆ‌. ಇದರಿಂದ ವಸತಿ ಗೃಹದಲ್ಲಿ ಭಕ್ತರ ವಾಸದಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಆದ್ರೆ, ಗ್ರಾಮಸ್ಥರ ಆರೋಪವನ್ನ ಶಾಸಕರು ಸಾರಸಗಟವಾಗಿ ತಳ್ಳಿ ಹಾಕಿದ್ದಾರೆ.

ಒಟ್ಟಿನಲ್ಲಿ ಕಾನೂನು ಅಡೆತಡೆಗಳಿಗೆ ಸೆಡ್ಡು ಹೊಡೆದು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಇಡೀ ಗ್ರಾಮಸ್ಥರು ಸೇರಿಕೊಂಡು ಸುಸಜ್ಜಿತ ಹೈಸ್ಕೂಲ್ ಕಟ್ಟಡಕ್ಕಾಗಿ ಅಕ್ಷರ ಜೋಳಿಗೆ ಮೂಲಕ ಕೋಟ್ಯಾಂತರ ರೂಪಾಯಿ ದೇಣಿಗೆ ಸಂಗ್ರಹ ಮಾಡಿದ್ದರು. ಕಮಿಷನ್ ಮತ್ತು ರಾಜಕೀಯ ಲೆಕ್ಕಾಚಾರ ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸ. ಅದೇನೇ ಲೆಕ್ಕಾಚಾರಗಳು ಇದ್ದರೂ ಸಹ ಮಕ್ಕಳ ಶಿಕ್ಷಣ ಭವಿಷ್ಯದ ದೃಷ್ಟಿಯಿಂದ ಹೈಸ್ಕೂಲ್ ಕಟ್ಟಡ ಶೀಘ್ರ ನಿರ್ಮಾಣ ಮಾಡುವ ಕೆಲಸಕ್ಕೆ ಸಂಬಂಧಪಟ್ಟವರು ಮುಂದಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Sun, 7 January 24