ಕಲಬುರಗಿ: ರಸ್ತೆ ಮೇಲೆ ಪಾಕ್ ಧ್ವಜ ಅಂಟಿಸಿ ಪ್ರತಿಭಟನೆ, 6 ಜನ ವಶಕ್ಕೆ
Pahalgam Terrorist Attack: ಕಲಬುರಗಿಯ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದ್ದು, ಜನ ಸಾಮಾನ್ಯರಲ್ಲಿ ಅಚ್ಚರಿ ಮೂಡಿಸಿದ್ದು, ಪೊಲೀಸರ ನಿದ್ದೆಗೆಡಿಸಿತ್ತು. ಪಾಕಿಸ್ತಾನದ ಮೇಲಿನ ದ್ವೇಷಕ್ಕೆ ರಸ್ತೆಗಳ ಮೇಲೆ ಧ್ವಜದ ಸ್ಟೀಕರ್ ಅಂಟಿಸಿರುವದಾಗಿ ಬಜರಂಗದಳದ ಕಾರ್ಯಕರ್ತರು ಒಪ್ಪಿಕೊಂಡ ಬಳಿಕ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ ಅನುಮತಿ ಪಡೆಯದೆ ಪಾಕಿಸ್ತಾನದ ಧ್ವಜದ ಸ್ಟೀಕರ್ ಅಂಟಿಸಿ ಜನರ ಗೊಂದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ, ಏಪ್ರಿಲ್ 26: ಜಮ್ಮು-ಕಾಶ್ಮೀರದ (Jammu-Kashmir) ಪಹಲ್ಗಾಮ್ನಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಗುಂಡಿನ ದಾಳಿಗೆ (Pahalgam Terrorist Attack) ಸಂಬಂಧಿಸಿದಂತೆ ಪಾಕಿಸ್ತಾನ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಮಯದಲ್ಲಿ ಕಲಬುರಗಿಯ ಜಗತ್ ವೃತ ಹಾಗೂ ನ್ಯಾಷನಲ್ ಚೌಕ್ನ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ಗಳನ್ನು ಸಾಲಾಗಿ ಅಂಟಿಸಲಾಗಿತ್ತು. ಇದು ಸಹಜವಾಗಿಯೇ ಜನಸಮಾನ್ಯರ ಅಚ್ಚರಿಗೆ ಕಾರಣವಾಗಿತ್ತು. ಇನ್ನು, ಈ ರೀತಿ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಕಂಡು ಪೊಲೀಸರು ಸಹ ಅಲರ್ಟ್ ಆಗಿ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದವರು ಯಾರು? ಎಂಬುದನ್ನು ಪತ್ತೆ ಮಾಡಲು ಮುಂದಾದರು. ಈ ಸಮಯದಲ್ಲಿ ಬಜರಂಗದಳದ ಕೆಲ ಕಾರ್ಯಕರ್ತರು ಸ್ಥಳಕ್ಕೆ ಬಂದು ಪಾಕಿಸ್ತಾನದ ಮೇಲಿನ ದ್ವೇಷಕ್ಕಾಗಿ ರಸ್ತೆಗಳ ಮೇಲೆ ಸ್ಟೀಕರ್ ಅಂಟಿಸಿರುವುದಾಗಿ ಪೊಲೀಸರ ಮುಂದೆ ಹೇಳಿದರು. ಇದಾದ ಬಳಿಕ ಪೊಲೀಸರು ಕೊಂಚ ನಿರಾಳರಾಗಿ ನಿಟ್ಟುಸಿರು ಬಿಟ್ಟರು.
ಕಲಬುರಗಿ ನಗರದ ನ್ಯಾಷನಲ್ ಚೌಕ್ ರಸ್ತೆಗಳ ಮೇಲೆ ಪಾಕಿಸ್ತಾನ ಸ್ಟಿಕರ್ ಅಂಟಿಸಿರುವುದು ಕೆಲ ಕಾಲ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಸ್ಥಳೀಯ ಕೆಲ ಮುಸ್ಲಿಂ ಮಹಿಳೆಯರು ರಸ್ತೆಗಳ ಮೇಲಿನ ಪಾಕಿಸ್ತಾನ ಧ್ವಜದ ಸ್ಟೀಕರ್ಗಳನ್ನು ತೆರವು ಮಾಡಿ, “ಇಲ್ಲಿ ಯಾರು ಪಾಕಿಸ್ತಾನ ಪ್ರೇಮಿಗಳಿಲ್ಲ, ನಮ್ಮ ದೇಶದಲ್ಲಿನ ಕೋಮುಸೌಹಾರ್ದ ಹಾಳು ಮಾಡಲು ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ಬಳಿಕ ಕಲಬುರಗಿ ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನುಮತಿ ಪಡೆಯದೆ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದಕ್ಕಾಗಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಇನ್ಮುಂದೆ ಯಾವುದೆ ರೀತಿಯಾದ ಹೋರಾಟ ಮಾಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ ಪ್ರತಿಭಟನೆ ಮಾಡುವಂತೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು
ಪಾಕಿಸ್ತಾನ ಧ್ವಜಕ್ಕೆ ಮುಸ್ಲಿಂ ಮಹಿಳೆಯರು ಗೌರವ ನೀಡಿದ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ರಸ್ತೆಯಲ್ಲಿ ಪಾಕಿಸ್ತಾನ ಧ್ವಜ ಕಂಡು ಮಹಿಳೆಯರು ಗೌರವ ನೀಡಿದ್ದಾರೆ. ದೇಶದೊಳಗೆ ಇರುವ ದ್ರೋಹಿಗಳನ್ನು ಮಟ್ಟ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Sat, 26 April 25







