ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ: ಆರ್​ಎಸ್ಎಸ್, ಭೀಮ ಆರ್ಮಿ ಬಳಿಕ ಮತ್ತೊಂದು ಸಂಘಟನೆ ಎಂಟ್ರಿ

ಕಲಬುರಗಿಯ ಚಿತ್ತಾಪುರದಲ್ಲಿ ನವೆಂಬರ್ 2 ರಂದು ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಭೀಮ ಆರ್ಮಿ ಮತ್ತು ಕುರುಬ ಎಸ್‌ಟಿ ಹೋರಾಟ ಸಮಿತಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿವೆ. ಕುರುಬ ಸಮುದಾಯ ಎಸ್‌ಟಿ ಮೀಸಲಾತಿಗಾಗಿ ಬೃಹತ್ ಪ್ರತಿಭಟನೆಗೆ ಅನುಮತಿ ಕೋರಿದ್ದು, ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡದಂತೆ ಒತ್ತಾಯಿಸಿದೆ. ಸದ್ಯ ಜಿಲ್ಲಾಡಳಿತದ ನಿರ್ಧಾರ ಮತ್ತು ನ್ಯಾಯಾಲಯದ ಆದೇಶ ಕುತೂಹಲ ಮೂಡಿಸಿದೆ.

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ: ಆರ್​ಎಸ್ಎಸ್, ಭೀಮ ಆರ್ಮಿ ಬಳಿಕ ಮತ್ತೊಂದು ಸಂಘಟನೆ ಎಂಟ್ರಿ
ಕುರುಬ ಸಮುದಾಯದಿಂದ ಅರ್ಜಿ
Edited By:

Updated on: Oct 22, 2025 | 8:58 PM

ಕಲಬುರಗಿ, ಅಕ್ಟೋಬರ್​ 22: ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲಿ ಆರ್​ಎಸ್​ಎಸ್ (RSS) ಪಥಸಂಚಲನಕ್ಕೆ ಹೆಜ್ಜೆ ಹೆಜ್ಕೆಗೂ ಕಂಟಕ ಶುರುವಾಗುತ್ತಿದೆ. ಇಷ್ಟು ದಿನ ಆರ್​ಎಸ್​​ಎಸ್​ ವರ್ಸಸ್ ಭೀಮ ಆರ್ಮಿ ಮಧ್ಯೆ ಫೈಟ್ ನಡೆದಿತ್ತು. ಇದೆಲ್ಲದರ ಮಧ್ಯೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆರ್​ಎಸ್ ಎಸ್​ಗೆ ಕುರುಬ ಸಮಾಜ (kuruba community) ಕಂಟಕ ತಂದೊಡ್ಡಿದೆ. ನವೆಂಬರ್ 2 ರಂದು ನಾವೂ ಎಸ್​​​ಟಿ ಮೀಸಲಾತಿಗಾಗಿ ಬೃಹತ್ ಹೋರಾಟ ಮಾಡುವುದಾಗಿ ಕುರುಬ ಸಮುದಾಯದಿಂದ ಅರ್ಜಿ ಸಲ್ಲಿಸಲಾಗಿದೆ. ಇದರ ಜೊತೆಗೆ ಭೀಮ​​ ಆರ್ಮಿ ಮತ್ತು ಸೌಹಾರ್ದ ಕರ್ನಾಟಕ ಕಲಬುರಗಿ ಎರಡೂ ಸಂಘಟನೆಗಳು ಅನುಮತಿ ನೀಡದಂತೆ ಆಗ್ರಹಿಸಿದ್ದಾರೆ.

ಆರ್​ಎಸ್​ಎಸ್​​ ಪಥಸಂಚಲನಕ್ಕೆ ಕಂಟಕ

ಚಿತ್ತಾಪುರದಲ್ಲಿ ಆರ್​​ಎಸ್​​ಎಸ್ ಪಥಸಂಚಲನಕ್ಕೆ ಕಂಟಕ ಶುರುವಾಗಿದೆ‌‌. ಭೀಮ ಆರ್ಮಿ ಬೆನ್ನಲ್ಲೇ ಗೊಂಡ ಕುರುಬ ಎಸ್​​ಟಿ ಹೋರಾಟ ಸಮಿತಿ ಎಂಟ್ರಿ ಕೊಟ್ಟಿದೆ. ನವೆಂಬರ್​ 2ರಂದು ಚಿತ್ತಾಪುರದಲ್ಲಿ ಗೊಂಡ ಕುರುಬ ಎಸ್​​​ಟಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಅನುಮತಿ ನೀಡುವಂತೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ಎಲ್ಲರ ಚಿತ್ತ ಚಿತ್ತಾಪುರದತ್ತ: RSS​ ಪಥಸಂಚಲನಕ್ಕೆ ಎದುರಾಯ್ತು ಮತ್ತೊಂದು ಕಂಟಕ

ಗೊಂಡ ಕುರುಬ ಸಮಾಜ ಎಸ್​​ಟಿ ಗೆ ಸೇರ್ಪಡೆ ಆಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲು ಸಜ್ಜಾಗಿದೆ. ಐದು ಸಾವಿರಕ್ಕೂ ಹೆಚ್ಚಿನ ಜನ ಈ ಪ್ರತಿಭಟನೆಯಲ್ಲಿ ಭಾಗಿಯಾಗೋದಾಗಿ ಕೂಡ ಉಲ್ಲೇಖ ಮಾಡಿದೆ. ಹಾಗಾಗಿ ನವೆಂಬರ್ 2ರಂದು ಆರ್​ಎಸ್​​ಎಸ್​ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಬೇಕು ಅಂದುಕೊಂಡ ಬೆನ್ನಲ್ಲೇ ಇದೀಗ ಒಂದರ ಹಿಂದೆ ಒಂದರಂತೆ ವಿಘ್ನಗಳು ಎದುರಾಗುತ್ತಿದೆ.

ಸದ್ಯ ಆರ್​ಎಸ್​ಎಸ್​ ಪಥಸಂಚಲನ ಸೇರಿ ಉಳಿದ ಸಂಘಟನೆಗಳ ಪಥಸಂಚಲನ ಮತ್ತು ಹೋರಾಟಕ್ಕೆ ಜಿಲ್ಲಾಡಳಿತ ಯಾವ ರೀತಿಯಲ್ಲಿ ಅವಕಾಶ ಕೊಡುತ್ತೆ ಅನ್ನೋದು ಸಾಕಷ್ಟು ಕೂತುಹಲ ಮೂಡಿದೆ. ಇಲ್ಲಾ ಜಿಲ್ಲಾಡಳಿತ ಈ ಎಲ್ಲಾ ಬೆಳವಣಿಗೆಗಳು ನ್ಯಾಯಾಲಯದ ಗಮನಕ್ಕೆ ತಂದು ಅಂತಿಮ ನಿರ್ಧಾರ ನ್ಯಾಯಲಕ್ಕೆ ಬಿಟ್ಟು ಕೊಡುತ್ತಾ ಎನ್ನುವ ಕೂತುಹಲ ಕೂಡ ಸೃಷ್ಟಿಯಾಗಿದೆ. ಹಾಗಾಗಿ ಇದೀಗ ಗೊಂಡ ಕುರುಬ ಎಸ್​​ಟಿ ಹೋರಾಟ ಸಮಿತಿ ಕೂಡ ಆರ್​ಎಸ್​ಎಸ್​​ ನಡುವಿನ ಪೈಟ್​ಗೆ ಎಂಟ್ರಿ ಕೊಟ್ಟ ಹಿನ್ನಲೆ ಇದೀಗ ಪಥಸಂಚಲನ ವಿಚಾರ ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.

ಇನ್ನು ಆರ್​ಎಸ್​​ಎಸ್​ ಮತ್ತು ದಲಿತ ಸಂಘಟನೆ ನಡುವಿನ ಪಥಸಂಚಲನ ಮತ್ತೊಂದು ಹಂತಕ್ಕೆ ತಲುಪಿದೆ. ನ್ಯಾಯಲಯದ ಆದೇಶಕ್ಕೂ ಮೊದಲೇ ಭೀಮ ಆರ್ಮಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ನೀಡದಂತೆ ಹೊಸ ಬೇಡಿಕೆಯೊಂದು ಇಟ್ಟಿದೆ. ಲಾಠಿ. ಖಡ್ಗ ಇನ್ನಿತರ ವಸ್ತು ಪ್ರದರ್ಶಿಸಿ ಪಥಸಂಚಲನ ಮಾಡುವ ಉದ್ದೇಶ ಧರ್ಮ ರಕ್ಷಣೆಯಾಗಿದ್ದು, ಇದು ಉಗ್ರವಾದಕ್ಕೆ ಬೆಳವಣಿಗೆ ನೀಡುತ್ತದೆ. ಹೀಗಾಗಿ ಕೂಡಲೇ ಇದನ್ನ ನಿಲ್ಲಿಸಬೇಕಾಗಿ ಎಚ್ಚರಿಕೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಭೀಮ ಆರ್ಮಿ ಪೋಸ್ಟ್ ಮಾಡಿದೆ.

ಭೀಮ ಆರ್ಮಿಯ ಜೊತೆಗೆ ಧ್ವನಿಗೂಡಿಸಿದ ಸೌಹಾರ್ದ ಕರ್ನಾಟಕ ಹೋರಾಟ ಸಮಿತಿ ಕೂಡ ಆರ್​ಎಸ್​​ಎಸ್​ ಪಥಸಂಚಲನಕ್ಕೆ ಅನುಮತಿ ನೀಡದಂತೆ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ ಮಾಡಿ ಆಗ್ರಹಿಸಿದೆ. ಆ ಮೂಲಕ ಆರ್​ಎಸ್​ಎಸ್​ ವರ್ಸಸ್ ದಲಿತ ಸಂಘಟನೆಗಳ ನಡುವಿನ ಫೈಟ್ ಮತ್ತೊಂದು ಹಂತಕ್ಕೆ  ತಲುಪಿದೆ.

ಒಟ್ಟಿನಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ವಿಚಾರ ಕೋರ್ಟ್​​ನಲ್ಲಿರುವಾಗಲೇ ಇದೀಗ ಹಲವು ಸಂಘಟನೆಗಳು ಕೂಡ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ಹೋರಾಟಕ್ಕೆ ಅನುಮತಿ ನೀಡುವಂತೆ ಜೊತೆಗೆ ಆರ್​ಎಸ್​​ಎಸ್ ಪಥಸಂಚಲನಕ್ಕೆ ಅನುಮತಿ ನಿತಾಕರಿಸುವಂತೆ ಸಾಕಷ್ಟು ಅರ್ಜಿಗಳು ಜಿಲ್ಲಾಧಿಕಾರಿ ಕಚೇರಿಗೆ ತಲುಪುತ್ತಿವೆ. ಎಲ್ಲಾ ಅರ್ಜಿಗಳನ್ನ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತ ಪೊಲೀಸ್ ಇಲಾಖೆ ಅಂಗಳಕ್ಕೆ ಅರ್ಜಿಗಳನ್ನು ಹಸ್ತಾಂತರ ಮಾಡಿದೆ.

ಇದನ್ನೂ ಓದಿ: ಚಿತ್ತಾಪುರದಲ್ಲಿ ಆರ್​​ಎಸ್​​ಎಸ್​​ ಪಥಸಂಚಲನ ಜಟಾಪಟಿ: ಮಹತ್ವದ ಸೂಚನೆ ನೀಡಿದ ಹೈಕೋರ್ಟ್

ಪೊಲೀಸ್ ಇಲಾಖೆ ಏನು ವರದಿ ಕೊಡುತ್ತದೆ ಎನ್ನುವುದು ಕೂಡ ಸದ್ಯ ಸಾಕಷ್ಟು ಕೂತುಹಲ ಮೂಡಿಸಿದೆ‌‌. ಇದೆಲ್ಲದರ ಬಳಿಕ ಆರ್​ಎಸ್​ಎಸ್​ ಪಥಸಂಚಲನಕ್ಕೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದು ಸಾಕಷ್ಟು ಕೂತುಹಲ ಮೂಡಿಸಿದೆ‌‌‌‌. ಸರ್ಕಾರ ಪಥಸಂಚಲನಕ್ಕೆ ಅನುವು ಮಾಡಿ ಕೊಡದೆ  ಹೋದರೆ ನ್ಯಾಯಲಯವೇ ಪಥಸಂಚಲನ ವಿಚಾರದಲ್ಲಿ ಅಂತಿಮ ನಿರ್ಣಯ ಘೋಷಣೆ ಮಾಡಲಿದೆ. ಹಾಗಾಗಿ ಅಕ್ಟೋಬರ್ 24ರ ನ್ಯಾಯಾಲಯದ ವಿಚಾರಣೆಯ ಮೇಲೆ ಇದೀಗ ಎಲ್ಲರ ಚಿತ್ತ ಕೂಡ ನೆಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.