ಫೈನಾನ್ಸ್ ಕಚೇರಿಗೆ ನುಗ್ಗಿ ಮಾಜಿ ಸಚಿವರ ಸಂಬಂಧಿಯ ಹತ್ಯೆ: ಬೆಚ್ಚಿಬಿದ್ದ ಕಲಬುರಗಿ

ಆತ ಕಾಂಗ್ರೆಸ್‌ನ ಮಾಜಿ ಸಚಿವರೊಬ್ಬರ ಅಳಿಯ. ಫೈನಾನ್ಸ್ ವ್ಯವಹಾರ ಮಾಡಿಕೊಂಡು ಪ್ರತಿಯೊಬ್ಬರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ. ಹೀಗಿದ್ದರೂ ಸಹ ಕಳೆದ ರಾತ್ರಿ ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಇಡೀ ಕಲಬುರಗಿ ಬಚ್ಚಿಬಿದ್ದಿದ್ದು, ಹಂತಕರ ಬಂಧನಕ್ಕೆ ಪೊಲೀಸರು ತಂಡ ರಚನೆ ಮಾಡಿದ್ದಾರೆ.

ಫೈನಾನ್ಸ್ ಕಚೇರಿಗೆ ನುಗ್ಗಿ ಮಾಜಿ ಸಚಿವರ ಸಂಬಂಧಿಯ ಹತ್ಯೆ: ಬೆಚ್ಚಿಬಿದ್ದ ಕಲಬುರಗಿ
ಅನೀಲ್ ರಾಠೋಡ್
Edited By:

Updated on: Apr 03, 2026 | 9:18 PM

ಕಲಬುರಗಿ, (ಏಪ್ರಿಲ್ 03): ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಕರ್ನಾಟಕದ ಮಾಜಿ ಸಚಿವರೊಬ್ಬರ ಸಂಬಂಧಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ನಗರದ ಪಿ ಅಂಡ್ ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ಅನೀಲ್ ರಾಠೋಡ್ (45)ಕೊಲೆಯಾದ ವ್ಯಕ್ತಿ. ಈ ಅನಿಲ್ ರಾಠೋಡ್, ಕಲಬುರಗಿಯ ಸಿದ್ದೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಪಿ ಆ್ಯಂಡ್​ ಟಿ ಕಾಲೋನಿಯ ವೆಂಕಟೇಶ್ವರ್​ ಕಾಂಪ್ಲೆಕ್ಸ್​ನಲ್ಲಿ ಫೈನಾನ್ಸ್​ ಇಟ್ಟುಕೊಂಡಿದ್ದ. ಮೇಲಾಗಿ ಮಾಜಿ ಸಚಿವ ರೇವು ನಾಯಕ್ ಬೆಳಮಗಿಯ ಸಂಬಂಧಿ. ಆದ್ರೆ, ನಿನ್ನೆ (ಏಪ್ರಿಲ್ 02) ರಾತ್ರಿ ತನ್ನ ಫೈನಾನ್ಸ್​ನಲ್ಲಿ ಕುಳಿತಿದ್ದಾಗ, ಆಟೋದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಬಳಿಕ ಮೂವರೂ ಸೇರಿಕೊಂಡು ಮಾರಕಾಸ್ತ್ರಗಳಿಂದ ಅಟ್ಯಾಕ್​ ಮಾಡಿ ಅನಿಲ್​​ನನ್ನ ಬರ್ಬರವಾಗಿ ಕೊಚ್ಚಿ ಕೊಂದು ಎಸ್ಕೇಪ್ ಆಗಿದ್ದಾರೆ. ಕೊಟ್ಟ ಹಣ ವಾಪಸ್​ ಕೇಳಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ.

ಕಲಬುರಗಿಯ ಸಿದ್ದೇಶ್ವರ ಬಡವಾಣೆ ನಿವಾಸಿಯಾಗಿರೋ ಅನಿಲ್ ರಾಠೋಡ್, ಫೈನಾನ್ಸ್ ವ್ಯವಹಾರ ನಡೆದುಕೊಂಡು ಹೋಗುತ್ತಿದ್ದರು. ನಗರದ ಪಿ ಅಂಡ್ ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ಫೈನಾನ್ಸ್ ಕಚೇರಿಗೆ ಕಳೆದ ರಾತ್ರಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು, ಕಚೇರಿಯಲ್ಲಿ ಕುಂತಿದ್ದ ಅನಿಲ್ ರಾಠೋಡ್ ಜೊತೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿದ್ದು, ಈ ವೇಳೆ ಮೂವರು ಸೇರಿಕೊಂಡು ಮಾರಕಾಸ್ತ್ರಗಳಿಂದ ಅನಿಲ್ ರಾಠೋಡ್‌ರನ್ನ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನ ಹತ್ಯೆಗೈದ ಪತಿ: ಬಳಿಕ ಕಾರು ಹಾಯಿಸಿ ವಿಕೃತಿ

ಸಾಲ ಪಡೆದವರೇ ಕೊಂದ್ರಾ?

ಇನ್ನೂ ಹಣಕಾಸಿನ ವಿಚಾರಕ್ಕೆ ನಮ್ಮ ಮಗನನ್ನ ಕೊಲೆ ಮಾಡಿರುವ ಅನುಮಾನ ಇದೆ. ಸಾಲ ಪಡೆದವರೇ ಕೊಲೆ ಮಾಡಿದ್ದಾರೆ ಎಂದು ಮೃತನ ಪೋಷಕರು ಹೇಳಿದ್ದಾರೆ. ಇನ್ನೂ ಅನಿಲ್‌ಗೆ ಜೀವ ಬೆದರಿಕೆ ಇತ್ತು. ಈ ಬಗ್ಗೆ ನಮ್ಮ ಬಳಿಯು ಸಹ ಆತ ಹೇಳಿಕೊಂಡಿದ್ದ. ಆದರೆ ಈ ರೀತಿಯಾಗಿ ಕೊಲೆ ಮಾಡುತ್ತಾರೆ ಎಂದು ನಾವು ಊಹಿಸಿರಲಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಇನ್ನೂ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡುತ್ತಿದ್ದಂತೆಯೇ ಅನಿಲ್ ರಾಠೋಡ್ ಓಡಿಹೋಗಲು ಯತ್ನಿಸಿದ್ದು, ಈ ವೇಳೆ ಫೈನಾನ್ಸ್ ಕಚೇರಿ ಬಾಗಿಲು ಮುಂದೆಯೇ ಕೊಚ್ಚಿ ಹಾಕಿದ್ದಾರೆ. ಇನ್ನೂ ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ನಗರ ಪೊಲೀಸ್ ಆಯುಕ್ತರು ಮೂರು ವಿಶೇಷ ತಂಡಗಳನ್ನ ರಚಿಸಿದ್ದಾರೆ.

ರೇವುನಾಯಕ್ ಬೆಳಮಗಿ ಹೇಳಿದ್ದೇನು?

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಕೆಲ ವರ್ಷಗಳ ಹಿಂದೆ ನಮ್ಮ ಸಂಬಂಧಿಯನ್ನ ಕಟ್ಟಡ ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿತ್ತು. ಇದೀಗ ದುಷ್ಕರ್ಮಿಗಳು ಫೈನಾನ್ಸ್‌ಗೆ ನುಗ್ಗಿ ನಮ್ಮ ಅಳಿಯನನ್ನೇ ಹತ್ಯೆ ಮಾಡಿದ್ದು, ಕೂಡಲೇ ಪೊಲೀಸರು ಹಂತಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕವಷ್ಟೇ ಮಾಜಿ ಸಚಿವರ ಅಳಿಯನ ಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.

ಒಟ್ಟಿನಲ್ಲಿ ಕಲಬುರಗಿಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಕೊಲೆಗಳಿಂದ ಸಾರ್ವಜನಿಕರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us