
ದಾವಣಗೆರೆ, (ಜುಲೈ 07): ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ (Cross Voting) ಮಾಡುವ ಮೂಲಕ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ಪಕ್ಷದಲ್ಲೇ ನಡೆಯಿತು. ಈ ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮತದಾರರಿಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಸ್ವತಃ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ. ಇದರೊಂದಿಗ ದಾವಣಗೆರೆಯಲ್ಲಿ ಇಂದು (ಜುಲೈ 07) ಆಯೋಜಿಸಿದ್ದ ವಿಧಾನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ ಪಕ್ಷದಲ್ಲಿನ ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
ಇದೇ ವೇಳೆ ವಿಜಯೇಂದ್ರ ಅವರು, ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನ ವಿಚಾರವನ್ನು ಪ್ರಸ್ತಾಪಿಸಿದ್ದು, ಸ್ವಪಕ್ಷೀಯರೇ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡಿದರು. ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಸ್ನೇಹಿತರು ಅಂತಾರೆ, ಬಿ.ವೈ.ವಿಜಯೇಂದ್ರ, ಡಿ.ಕೆ.ಶಿವಕುಮಾರ್ ಸ್ನೇಹಿತರು ಅಂತಾರೆ. ಹಳ್ಳಿ ಹಳ್ಳಿ ಸುತ್ತಿ ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪ ಬಗ್ಗೆ ಈ ರೀತಿ ಹೇಳುತ್ತಾರೆ. ಯಡಿಯೂರಪ್ಪನವರ ವಿರುದ್ಧ ನಮ್ಮ ಪಕ್ಷದವರೇ ಮಾತಾಡುತ್ತಾರೆ ಎಂದು ಎಂದು ಬೇಸರ ಹೊರಹಾಕಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಂಜುನಾಥ್ಗೆ ಬಿಜೆಪಿ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಡಿ.ಕೆ.ಸುರೇಶ್ ವಿರುದ್ಧ ಡಾ.ಮಂಜುನಾಥ್ಗೆ ಟಿಕೆಟ್ ಕೊಟ್ಟಿದ್ದಕ್ಕೆ ಸುದ್ದಿ. ನಾನು ಡಿ.ಕೆ.ಶಿವಕುಮಾರ್ ಸ್ನೇಹಿತ ಎಂದು ಸುದ್ದಿ ಮಾಡಿದ್ರು. ನಾನು ಇಲ್ಲದಿದ್ದರೆ ಪಕ್ಷವೇ ನಡೆಯಲ್ಲ ಎಂಬ ಭ್ರಮೆ ಇಟ್ಕೊಳ್ಳಬೇಡಿ. ನನ್ನಿಂದಲೇ ಬಿಜೆಪಿ ಹುಟ್ಟಿದೆ ಎಂಬ ಮನೋಭಾವವಿದ್ರೆ ಬಿಟ್ಟು ಬಿಡಿ. ಈಗ ವೇದಿಕೆ ಮೇಲಿರುವ ನಾಯಕರ ಹೆಸರು ಹೇಳಿದ್ರೆ ಚಪ್ಪಾಳೆ ತಟ್ಟಲ್ಲ. ಸಮಾರಂಭಕ್ಕೆ ಬರುವ ನಮ್ಮ ಕಾರ್ಯಕರ್ತರೇ ಚಪ್ಪಾಳೆ ತಟ್ಟುವುದಿಲ್ಲ. ಇದೇ ರೀತಿಯಾದ್ರೆ ಯಾರೂ ಮಾತನಾಡಿಸದಂತಹ ಸ್ಥಿತಿ ಬರಬಹುದು. ಬಿಜೆಪಿ ನಾಯಕರು ದಾರಿಯಲ್ಲಿ ಹೋಗುತ್ತಿದ್ರೆ ಮಾತನಾಡಿಸದ ಸ್ಥಿತಿ ಬರಬಹುದು ಎಂದರು.
ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿದೆ. ಈಗಲೂ ಗೆಲ್ಲಬೇಕು. ಪರಿಷತ್ನ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ 8 ಬಾರಿ ಗೆದ್ದಿದೆ. ಈ ಬಾರಿಯೂ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕಿದೆ ಎಂದು ಹೇಳಿದರು.
ಖುದ್ದು ವಿಜಯೇಂದ್ರ ಅವರೇ ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮತದಾರರಿಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಹೇಳಿದ್ದು, ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.