ಮುಡಾ, ಸಿಬಿಐ ಕೇಸ್: ಹೈಕೋರ್ಟ್ ನಲ್ಲಿ ಇಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಭವಿಷ್ಯ, ಎಲ್ಲರ ಚಿತ್ತ ಕೋರ್ಟ್​ನತ್ತ

| Updated By: ರಮೇಶ್ ಬಿ. ಜವಳಗೇರಾ

Updated on: Aug 29, 2024 | 5:00 AM

ಸಿಎಂ ಡಿಸಿಎಂ ಪಾಲಿಗೆ ಇವತ್ತು ಬಹಳ ಮಹತ್ವದ ದಿನ. ಒಂದು ಕಡೆ ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮತ್ತೊಂದೆಡೆ ಡಿಸಿಎಂ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಕೇಸ್ ನಲ್ಲಿ ಸಿಬಿಐ ತನಿಖೆ ನಡೆಸಬೇಕೇ ಬೇಡವೇ ಎನ್ನುವುದನ್ನು ಇಂದು (ಆಗಸ್ಟ್ 29) ಹೈಕೋರ್ಟ್ ತೀರ್ಮಾನಿಸಲಿದೆ. ಈ ಕೇಸ್ ಗಳ ಮಹತ್ವದ ಬಗ್ಗೆ ಡಿಟೈಲ್ಸ್ ಇಲ್ಲಿದೆ.

ಮುಡಾ, ಸಿಬಿಐ ಕೇಸ್: ಹೈಕೋರ್ಟ್ ನಲ್ಲಿ ಇಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಭವಿಷ್ಯ, ಎಲ್ಲರ ಚಿತ್ತ ಕೋರ್ಟ್​ನತ್ತ
ಸಿದ್ದರಾಮಯ್ಯ, ಡಿಕೆ ಶಿವಕುಮಾರ್
Follow us on

ಬೆಂಗಳೂರು, (ಆಗಸ್ಟ್ 28): ಮೈಸೂರಿನ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಲಾಭ ಪಡೆದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಕಾನೂನುಬಾಹಿರವೆಂದು ಸಿದ್ದರಾಮಯ್ಯ ವಾದಿಸಿದ್ದಾರೆ. ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ರೆ, ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಲಿದ್ದಾರೆ. ಕ್ಯಾಬಿನೆಟ್ ಸಲಹೆ ಧಿಕ್ಕರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಹಾಗೂ ತಮ್ಮ ಆದೇಶಕ್ಕೆ ವಿವರವಾದ ಕಾರಣಗಳನ್ನು ರಾಜ್ಯಪಾಲರು ಕೊಟ್ಟಿಲ್ಲವೆಂಬುದನ್ನು ಪ್ರಧಾನವಾಗಿ ಉಲ್ಲೇಖಿಸಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದಾರೆ.

ಅಲ್ಲದೇ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17ಎ ಅಡಿ ಪೊಲೀಸ್ ಅಧಿಕಾರಿಯೇ ತನಿಖೆಗೆ ಅನುಮತಿ ಕೇಳಬೇಕೇ ವಿನಹ ಖಾಸಗಿ ದೂರುದಾರರಲ್ಲ ಎಂಬುದನ್ನೂ ತಮ್ಮ ವಾದದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ರಾಜ್ಯಪಾಲರು ನೀಡಬಹುದಾದ ಕೌಂಟರ್ ಏನು ಎನ್ನುವುದು ಇಂದು ತಿಳಿಯಲಿದೆ. ಇಂತಹ ವಿಚಾರಗಳಲ್ಲಿ ಕ್ಯಾಬಿನೆಟ್ ತೀರ್ಮಾನವನ್ನು ರಾಜ್ಯಪಾಲರು ಪಾಲಿಸಬೇಕಿಲ್ಲವೆಂದು ಸಾಲಿಸಿಟರ್ ಜನರಲ್ ಈಗಾಗಲೇ ವಾದಿಸಿದ್ದಾರೆ.

ಹೈಕೋರ್ಟ್ ಇಂದೇ ವಿಚಾರಣೆ ಪೂರ್ಣಗೊಳಿಸಿದ್ರೆ ಆದೇಶವನ್ನು ಕಾಯ್ದಿರಿಸುವ ಸಾಧ್ಯತೆಗಳು ಹೆಚ್ಚಿವೆ. ಅಂತಹ ಸಂದರ್ಭದಲ್ಲಿ ಹೈಕೋರ್ಟ್ ನೀಡಬಹುದಾದ ಮಧ್ಯಂತರ ಆದೇಶ ಸಿಎಂಗೆ ಭವಿಷ್ಯವನ್ನು ನಿರ್ಧರಿಸಲಿದೆ. ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂ ರ ಖಾಸಗಿ ದೂರುಗಳ ಭವಿಷ್ಯವನ್ನೂ ಕೋರ್ಟ್ ತೀರ್ಮಾನಿಸಲಿದೆ. ಒಂದು ವೇಳೆ ವಿರುದ್ಧವಾದ ಆದೇಶ ಬಂದರೆ ಮೇಲ್ಮನವಿ ಸಲ್ಲಿಸಲು ವಾದಿ ಸಿದ್ದರಾಮಯ್ಯ ಪ್ರತಿವಾದಿಯಾದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಗಳೂ ಸಿದ್ಧತೆ ನಡೆಸಿದ್ದಾರೆ.

ಡಿಕೆಶಿ ವಿರುದ್ಧದ ಸಿಬಿಐ ತನಿಖೆಯ ಭವಿಷ್ಯ

ಇನ್ನು ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿಬಿಐ ತನಿಖೆಯ ಭೀತಿ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದು ತನಿಖೆಯ ಹೊಣೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಈ ನಿರ್ಧಾರವನ್ನು ಸಿಬಿಐ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಒಂದು ಬಾರಿ ತನಿಖೆಗೆ ಸಮ್ಮತಿ ನೀಡಿದ ಬಳಿಕ ಅದನ್ನು ಹಿಂಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲವೆಂದು ಸಿಬಿಐ ವಾದಿಸಿದ್ರೆ, ಡಿಕೆ ಶಿವಕುಮಾರ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿದ ಸರ್ಕಾರದ ಕ್ರಮವೇ ಕಾನೂನುಬಾಹಿರವೆಂದು ವಾದಿಸಿದ್ದಾರೆ.

ಇನ್ನು ರಾಜ್ಯ ಸರ್ಕಾರದ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ , ಸಿಬಿಐ ಒಕ್ಕೂಟ ವ್ಯವಸ್ಥೆಯನ್ನೇ ಧಿಕ್ಕರಿಸಿದೆ, ಸರ್ಕಾರ ಸಿಬಿಐ ತನಿಖೆಗೆ ಸಮ್ಮತಿ ಆದೇಶ ಹೊರಡಿಸುವಾಗ ವಿವೇಚನೆ ಬಳಸಿಲ್ಲ ಎಂದು ವಾದಿಸಿದ್ದರು. ಎರಡೂ ಕಡೆ ವಾದಮಂಡನೆ ಆಲಿಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ.ಅಡಿಗರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದು (ಆಗಸ್ಟ್​ 29) ಸಂಜೆ 4.30ಕ್ಕೆ ತೀರ್ಪು ಪ್ರಕಟಿಸಲಿದೆ. ಹೈಕೋರ್ಟ್ ಪ್ರಕಟಿಸುವ ತೀರ್ಪು ಡಿಕೆಶಿ ವಿರುದ್ಧದ ಸಿಬಿಐ ತನಿಖೆಯ ಭವಿಷ್ಯ ನಿರ್ಧರಿಸಲಿದೆ.

ಸಿಬಿಐ ತನಿಖೆ ಮುಂದುವರಿಸುವಂತೆ ಹೈಕೋರ್ಟ್ ಆದೇಶಿಸಿದರೆ ಡಿಕೆ ಶಿವಕುಮಾರ್ ಗೆ ಹಿನ್ನಡೆಯಾಗಲಿದೆ. ಒಂದು ವೇಳೆ ಸಿಬಿಐ ತನಿಖೆಗೆ ಸಮ್ಮತಿ ಹಿಂಪಡೆದು ಲೋಕಾಯುಕ್ತ ಪೊಲೀಸರಿಗೆ ತನಿಖೆ ವಹಿಸಿದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದರೆ ಡಿ ಕೆ ಶಿವಕುಮಾರ್ ಗೆ ಬಹುದೊಡ್ಡ ರಿಲೀಫ್ ಸಿಕ್ಕಂತಾಗಲಿದೆ. ಹೀಗಾಗಿ ಇವತ್ತಿನ ಹೈಕೋರ್ಟ್ ವಿಚಾರಣೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪಾಲಿಗೆ ಮಹತ್ವದ್ದಾಗಲಿದೆ.

ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಹಾಯುದ್ಧಕ್ಕೆ ಸಾಕ್ಷಿಯಾಗಿದೆ. ಸದ್ಯ ಕೇಸ್ ಹೈಕೋರ್ಟ್​ನಲ್ಲಿದ್ದು, ಇಂದು ಮತ್ತೆ ವಿಚಾರಣೆಗೆ ಬರಲಿದೆ. ಏನಾಗಲಿದೆ ಎಂಬ ಕುತೂಹಲ ಮೂಡಿದ್ದು, ಆಡಳಿತ ಪಕ್ಷ ಮತ್ತು ವಿಪಕ್ಷಗಳು ದೃಷ್ಟಿ ಕೋರ್ಟ್ ನತ್ತ ನೆಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.