ಕರ್ನಾಟಕಕ್ಕೆ ನಿಫಾ ಭೀತಿ: 41 ಸಂಪರ್ಕಿತರ ಪೈಕಿ ಒಬ್ಬರಿಗೆ ನಿಫಾ ಗುಣಲಕ್ಷಣ ಪತ್ತೆ
ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ 23 ವರ್ಷದ ಯುವಕ ಕೇರಳದಲ್ಲೆ ನಿಫಾಗೆ ಇತ್ತೀಚೆಗೆ ಮೃತಪಟ್ಟಿದ್ದ. ಆತನ ಅಂತ್ಯಕ್ರಿಯೆಗೆ ತೆರಳಿದ್ದ 41 ಪ್ರಾಥಮಿಕ ಸಂಪರ್ಕಿತರಿಗೆ ಹೋಮ್ ಐಸೋಲೇಷನ್ ಮತ್ತು ಕಡ್ಡಾಯ ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲ ಸಂಪರ್ಕಿತರ ಮೇಲೆಯೂ ಆರೋಗ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 19: ಕರ್ನಾಟಕದಲ್ಲಿ ನಿಫಾ (Nipha) ಭೀತಿ ಶುರುವಾಗಿದೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಇತ್ತೀಚೆಗೆ ಕೇರಳದಲ್ಲಿ ನಿಫಾಗೆ ಸಾವನ್ನಪ್ಪಿದ್ದ. ಇದೀಗ ಆತನ ಅಂತ್ಯಸಂಸ್ಕಾರಕ್ಕೆ ತೆರಳಿದ್ದ 41 ಸಂಪರ್ಕಿತರು ಪತ್ತೆ ಆಗಿದ್ದು, 41 ಜನರಿಗೂ ಕಡ್ಡಾಯ ಕ್ವಾರಂಟೈನ್ ಹಾಗೂ ಐಸೋಲೇಷನ್ಗೆ ಆರೋಗ್ಯ ಇಲಾಖೆ ಒಳಪಡಿಸಿದೆ.
ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾ ವಹಿಸಿದ್ದು, 41 ಸಂಪರ್ಕಿತರ ಪೈಕಿ ಒಬ್ಬರಿಗೆ ನಿಫಾ ಗುಣಲಕ್ಷಣಗಳು ಕಂಡುಬಂದಿವೆ. ಗುಣಲಕ್ಷಣಗಳಿರುವ ವ್ಯಕ್ತಿಯ ರಕ್ತ ಮತ್ತು ಸೆರಂ ಮಾದರಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ಸದ್ಯ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ. ಸದ್ಯ ರಾಜ್ಯದಲ್ಲಿ ಯಾವ ನಿಫಾ ಕೇಸ್ ಕೂಡ ದಾಖಲಾಗಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಸಾವು: ಕರ್ನಾಟಕದಲ್ಲಿ ಹೈ ಟೆನ್ಷನ್
ಕೇರಳದಲ್ಲಿ ಅಬ್ಬರಿಸುತ್ತಿರುವ ನಿಫಾ, ಕರುನಾಡಿಗೂ ಗಂಡಾಂತರ ತಂದಿದೆ. ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ 23 ವರ್ಷದ ಯುವಕ, ಕೇರಳದಲ್ಲಿ ಶಂಕಿತ ನಿಫಾಗೆ ಬಲಿಯಾಗಿದ್ದ. ಕೇರಳದ ಮಲಪುರಂ ಮೂಲದ ವಿದ್ಯಾರ್ಥಿ ಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ ಆತ ಆಗಸ್ಟ್ 25 ರಂದು ತನ್ನೂರಿಗೆ ತೆರಳಿದ್ದ.
ಸೆಪ್ಟೆಂಬರ್ 5 ರಂದು ಯುವಕನಿಗೆ ಜ್ವರ ಕಾಣಿಸಿಕೊಂಡಿತ್ತು. ಹತ್ತಿರದ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದರೂ ಗುಣವಾಗಿರಲ್ಲ. ಸೆಪ್ಟೆಂಬರ್ 6 ರಂದು ಯುವಕನಿಗೆ ವಿಪರೀತ ವಾಂತಿ ಶುರುವಾಗಿತ್ತು. ಆರೋಗ್ಯ ಬಿಗಡಾಯಿಸಿದ ಕಾರಣ ಸಪ್ಟೆಂಬರ್ 7 ರಂದು ಆತನನ್ನು ಕೇರಳದ NES ಪ್ರೈವೇಟ್ ಮೆಡಿಕಲ್ ಕಾಲೇಜಿನ ಐಸಿಯುಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: Nipah Virus: ನಿಫಾ ವೈರಸ್ ಸೋಂಕಿತ 14 ವರ್ಷದ ಕೇರಳ ಬಾಲಕ ಹೃದಯಸ್ತಂಭನದಿಂದ ನಿಧನ
ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ ನಿಂದ ಬಳಲುತ್ತಿದ್ದ ಯುವಕ ಸಪ್ಟೆಂಬರ್ 8 ರಂದು ಕೊನೆಯುಸಿರೆಳೆದಿದ್ದ. ಮೃತ ಯುವಕನ ಬ್ಲಡ್ ಹಾಗೂ ಸಿರಂ ಸ್ಯಾಂಪಲ್ನಲ್ಲಿ ನಿಫಾ ಪಾಸಿಟಿವ್ ಬಂದಿತ್ತು. ಅತ್ತ ವಿದ್ಯಾರ್ಥಿ ಸಾವನ್ನಪ್ಪಿದ್ದಂತೆ ಇತ್ತ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಮಹತ್ವದ ಸಭೆ ಮಾಡಲಾಗಿತ್ತು. ಕರ್ನಾಟಕದಲ್ಲಿ ನಿಫಾ ಕುರಿತು ಕಟ್ಟೆಚ್ಚರ ವಹಿಸಲು ಸೂಚಿಸಿಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:22 pm, Thu, 19 September 24