
ಬೆಂಗಳೂರು, (ಜನವರಿ 14): ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ (Karnataka Valmiki Corporation scam) ಮಾಜಿ ಸಚಿವ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರಗೆ (B Nagendra) ಬಿಗ್ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಸಿಬಿಐ ನೋಟಿಸ್ ಹಿನ್ನೆಲೆಯಲ್ಲಿ ಜಾಮೀನಿಗೆ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜೋರ್ಟ್, ಕೆಲ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ನೀಡಿದೆ. 2 ಲಕ್ಷ ಮೊತ್ತದ ಬಾಂಡ್, ಇಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಿದೆ. ಅಲ್ಲದೇ ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ನಾಗೇಂದ್ರಗೆ ಕೋರ್ಟ್ ಷರತ್ತು ಹಾಕಿದೆ.
ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಬಿಐ (CBI) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಬಳಿಕ ಬಂಧನ ಭೀತಿಯಲ್ಲಿದ್ದ ನಾಗೇಂದ್ರ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ (ಜನವರಿ 13) ವಿಚಾರಣೆ ನಡೆಸಿದ್ದ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಬುಧವಾರಕ್ಕೆ (ಜ.14) ಆದೇಶ ಕಾಯ್ದಿರಿಸಿತ್ತು. ಅದರಂತೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಸಿಬಿಐ ಕುಣಿಕೆಯಿಂದ ಬಚಾವ್ ಆಗಿದ್ದಾರೆ.
ಮಂಗಳವಾರ(ಜನವರಿ 13) ವಿಚಾರಣೆ ವೇಳೆ ಪ್ರಕರಣದ ತನಿಖಾಧಿಕಾರಿಯೇ ಕೋರ್ಟ್ನಲ್ಲಿ ವಾದಮಂಡನೆ ಮಾಡಿದ್ದರು. ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರನ್ನು ಸಿಐಡಿ, ಇಡಿ ತನಿಖೆ ಮಾಡಿದೆ. ಅದಕ್ಕಿಂತ ಮುಂದುವರೆದು ಇದರಿಂದ ಫಲಾನುಭವಿಗಳು ಯಾರು ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ಇಲ್ಲಿಯವರೆಗೂ ನಡೆದ ತನಿಖೆಯ ಕೆಲ ಮಾಹಿತಿಗಳನ್ನ ತೆರೆದ ನ್ಯಾಯಾಲಯದಲ್ಲಿ ಹೇಳಲು ಸಾಧ್ಯವಿಲ್ಲ. ಮುಂಬೈನಲ್ಲಿ ಕೂಡ ದಾಳಿ ಮಾಡಿ ಮಾಹಿತಿ ಕಲೆಹಾಕಲಾಗಿದೆ. ಹಗರಣದ ಹಣ ಚಿನ್ನ, ಬುಲಿಯನ್ ಆಗಿ ಕನ್ವರ್ಟ್ ಆಗಿದೆ. ಇದರ ಹಿಂದೆ ನಾಗೇಂದ್ರ, ಅವರ ಸಹಚರರು ಭಾಗಿಯಾಗಿದ್ದಾರೆ. ಇದರ ಹಿಂದೆ ಕೆಲ ಬೋಗಸ್ ಕಂಪನಿಗಳು ಭಾಗಿಯಾಗಿವೆ. ಈ ಪ್ರಕರಣದ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನ ಕಲೆ ಹಾಕಲಾಗಿದೆ ಎಂದು ಹೇಳಿ ಕೋರ್ಟ್ಗೆ ತಂದಿದ್ದ ಎರಡು ಸೂಟ್ಕೇಸ್ ದಾಖಲೆಗಳನ್ನ ತನಿಖಾಧಿಕಾರಿ ತೋರಿಸಿದ್ದರು.
ಇದಕ್ಕೆ ಪ್ರತಿಯಾಗಿ ನಾಗೇಂದ್ರ ಪರ ವಕೀಲರು ಪ್ರತಿವಾದ ಮಂಡಿಸಿದ್ದು, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ವ್ಯವಹಾರ ಅವರ ವೈಯಕ್ತಿಕವಾಗಿದೆ. ಸಿಬಿಐ ಹೇಳುತ್ತಿರುವ ಟೆಂಡರ್ಗೂ ಈ ವ್ಯವಹಾರಗಳಿಗೂ ಯಾವುದೇ ಸಂಬಂಧವಿಲ್ಲ ಅಂತಾ ವಾದಿಸಿದ್ದರು. ಈ ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಅಂತಿಮವಾಗಿ ನಾಗೇಂದ್ರಗೆ ಜಮೀನು ಮಂಜೂರು ಮಾಡಿದೆ.
ಇದೇ ವಾಲ್ಮೀಕಿ ಅಭಿೃದ್ಧಿ ನಿಗಮ ಹಗರಣದಲ್ಲಿ ಈ ಹಿಂದೆ ಜೈಲು ಪಾಲಾಗಿದ್ದ ಬಿ ನಾಗೇಂದ್ರ ನಂತರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಇನ್ನು ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸೇರಿದ 8.07 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ನಂತರ ಈ ಹಣವನ್ನು ಶೆಲ್ ಕಂಪನಿಗಳ ಮೂಲಕ ಲೂಟಿ ಮಾಡಲಾಗಿತ್ತು ಎಂಬ ಆರೋಪದ ಮೇಲೆ ಕರ್ನಾಟಕ ಪೊಲೀಸರು ಮತ್ತು ಸಿಬಿಐ ಎಫ್ಐಆರ್ ದಾಖಲಿಸಿದ್ದವು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಈ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಿ. ನಾಗೇಂದ್ರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು.