ಕೊಡಗಿನಲ್ಲಿ ಹುಲಿ ಹಾವಳಿ: ಮನುಷ್ಯ-ವನ್ಯಜೀವಿ ಸಂಘರ್ಷದ ಹೆಚ್ಚಳದ ಹಿಂದಿನ ಕಾರಣಗಳೇನು?

ಕೊಡಗಿನಲ್ಲಿ ಹತ್ತು ವರ್ಷಗಳ ಹಿಂದೆ ಅಪರೂಪವಾಗಿದ್ದ ಹುಲಿಗಳು ಇದೀಗ ನಿತ್ಯದ ಸುದ್ದಿಯಾಗಿದೆ. ಹುಲಿ ಹಾವಳಿ ಆತಂಕಕ್ಕೆ ಕಾರಣವಾಗಿದೆ. ಹಸು ಮತ್ತು ಮನುಷ್ಯರ ಮೇಲೆ ದಾಳಿಗಳು ಹೆಚ್ಚಾಗಿವೆ. ಹಾಗಾದರೆ ಹುಲಿಗಳು ಕಾಡು ಬಿಟ್ಟು ನಾಡಿಗೆ ಬರಲು ಕಾರಣವೇನು, ಈ ಬಗ್ಗೆ ವನ್ಯಜೀವಿ ತಜ್ಞರು ಹೇಳುವುದು ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೊಡಗಿನಲ್ಲಿ ಹುಲಿ ಹಾವಳಿ: ಮನುಷ್ಯ-ವನ್ಯಜೀವಿ ಸಂಘರ್ಷದ ಹೆಚ್ಚಳದ ಹಿಂದಿನ ಕಾರಣಗಳೇನು?
ಹುಲಿ
Image Credit source: tv9 kannada
Edited By:

Updated on: Sep 18, 2026 | 10:10 PM

ಕೊಡಗು, ಸೆಪ್ಟೆಂಬರ್​ 18: ಸುಮಾರು 10-15 ವರ್ಷಗಳ ಹಿಂದೆ ಕೊಡಗಿನ ಅರಣ್ಯದಂಚಿನ ಗ್ರಾಮಗಳಲ್ಲಿ ವರ್ಷಕ್ಕೆ ಒಂದೋ ಎರಡೋ ಬಾರಿ ಮಾತ್ರ ಹುಲಿಗಳು ಕಾಣಿಸಿಕೊಳ್ಳುತ್ತಿದ್ದವು. ಪಶುಗಳು ಅಥವಾ ಮನುಷ್ಯರ ಮೇಲೆ ದಾಳಿ ನಡೆಸಿದ ನಿದರ್ಶನಗಳು ತೀರಾ ವಿರಳವಾಗಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಹುಲಿ ಹಾವಳಿ ಮಿತಿಮೀರಿದ್ದು, ವಾರಕ್ಕೊಮ್ಮೆ ಹುಲಿ ದರ್ಶನ, ವಾರಕ್ಕೆ ನಾಲ್ಕು ಹಸುಗಳ ಬಲಿ ಹಾಗೂ ವರ್ಷಕ್ಕೆ ಒಬ್ಬಿಬ್ಬರು ಕಾರ್ಮಿಕರು ಹುಲಿ ದಾಳಿಗೆ ಪ್ರಾಣ ಕಳೆದುಕೊಳ್ಳುವುದು ನಿತ್ಯದ ಸುದ್ದಿಯಾಗಿದೆ.

ಕಾಫಿ ತೋಟ, ರಸ್ತೆಗಳಲ್ಲಿ ಹುಲಿಗಳ ಸಂಚಾರ

ಕೊಡಗು ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದೀಚೆಗೆ ಹುಲಿ ಹಾವಳಿ ಅಷ್ಟಿಷ್ಟಲ್ಲ. ಮೊದಲೆಲ್ಲಾ ನಾಗರಹೊಳೆ, ಅಥವಾ ಮಾಲ್ದಾರೆ ಮೀಸಲು ಅರಣ್ಯದಂಚಿನ ಗ್ರಾಮಗಳಲ್ಲಿ ಮಾತ್ರ ಅಪರೂಪಕ್ಕೆ ಹುಲಿ ದರ್ಶನ ಆಗ್ತಾ ಇತ್ತು. ಆದರೆ ಈಗ ಹಾಗಿಲ್ಲ. ಅರಣ್ಯದಂಚಿನ ಗ್ರಾಮಗಳು ಮಾತ್ರವಲ್ಲ, ಅರಣ್ಯದಿಮದ 30, 40 ಕಿಮಿ ದೂರದಲ್ಲಿರುವ ಗ್ರಾಮಗಳಲ್ಲೂ ಹುಲಿಗಳು ದರ್ಶನ ಕೊಡುತ್ತಿವೆ. ಪೊನ್ನಂಪೇಟೆ, ವಿರಾಜಪೇಟೆ ತಾಲ್ಲೂಕಿನ ಟಿ ಶೆಟ್ಟಿಗೇರಿ, ಬಿಟಶೆಟ್ಟಿಗೇರಿ, ಹುದಿಕೇರಿ, ಕಾನೂರು, ಕುಂದಾ, ಮಾಲ್ದಾರೆ, ಕರಡಿಗೋಡು ಸೇರಿದಂತೆ ಹತ್ತಾರು ಗ್ರಾಮಗಳು ಅರಣ್ಯದಂಚಿನಲ್ಲೇ ಪ್ರತ್ಯೇಕ್ಷಗುತ್ತಿವೆ. ಈ ಗ್ರಾಮಗಳ ಕಾಫಿ ತೋಟಗಳಲ್ಲಿ ಹುಲಿಗಳು ನಿರಂತರವಾಗಿ ಅಡ್ಡಾಡುತ್ತಿದ್ದು, ವಾರಕ್ಕೊಂದು ಹಸುವನ್ನ ಕೊಂದು ಭಕ್ಷಿಸುತ್ತಿವೆ. ಹಾಗಾಗಿ ಈ ವ್ಯಾಪ್ತಿಯಲ್ಲಿ ಕಾರ್ಮಿಕರು ಹಾಗೂ ಎಸ್ಟೇಟ್ ಮಾಲಿಕರಿಗೆ ಇನ್ನಿಲ್ಲದ ಜೀವ ಭಯ ಕಾಡುತ್ತಿದೆ.

ಹುಲಿಗಳು ಕಾಡು ಬಿಟ್ಟು ನಾಡಿಗೆ ಬರಲು ಕಾರಣವೇನು?

ಅಷ್ಟಕ್ಕೂ ಹುಲಿಗಳು ಇದ್ದಕ್ಕಿದ್ದ ಹಾಗೆ ಇಷ್ಟೊಂದು ದಾಂದಲೆ ಮಾಡಲು ಕಾರಣವೇನು? ಹುಲಿಗಳು ಓಡಾಡೋ ಅರಣ್ಯವನ್ನ ಸ್ಥಳೀಯರು ಅತಿಕ್ರಮಿಸಿದ್ದಾರಾ ಅಂತ ನೀವು ಕೇಳಬಹುದು. ಆದರೆ ಅಂತಹ ಯಾವುದೇ ಉದಾಹರಣೆಗಳಿಲ್ಲ. ಹಾಗಾದರೆ ಹುಲಿಗಳು ಕಾಡು ಬಿಟ್ಟು ನಾಡಿಗೆ ಬರಲು ಕಾರಣವೇನು? ಸಾಮಾನ್ಯವಾಗಿ ವಯಸ್ಸಾದ ಹುಲಿಗಳು ಕಾಡಿನಲ್ಲಿ ಬೇಟೆಯಾಡುವ ಸಾಮರ್ಥ್ಯ ಇಲ್ಲದೆ, ಸುಲಭವಾಗಿ ಸಿಗುವ ಹಸುವನ್ನು ಬೇಟೆಯಾಡಲು ನಾಡಿನತ್ತ ಬರುತ್ತವೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಮತ್ತೊಂದು ಬಲಿ: ವಾಯು ವಿಹಾರಕ್ಕೆ ತೆರಳಿದ್ದ ಬೆಂಗಳೂರಿಗ ದುರಂತ ಸಾವು

ಅದಲ್ಲದೆ ಹುಲಿ ಜೊತೆ ಭೌಗೋಳಿಕ ಕಾದಾಟವಾಗಿ ಸೋತ ಹುಲಿ ಆ ಪ್ರದೇಶ ಬಿಟ್ಟು ಗಾಯಾಳುವಾಗಿ ಗ್ರಾಮಗಳತ್ತ ಬರುವುದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮಗಳ ಬಳಿ ಗೋಚರವಾಗುತ್ತಿರುವ ಹುಲಿಗಳು ವಯಸ್ಸಾದ ಹುಲಿಗಳಲ್ಲ, ಬದಲಿಗೆ ಸಣ್ಣ ಪ್ರಾಯದ ಹುಲಿಗಳು. ಬಹಳಷ್ಟು ಹುಲಿಗಳಿಗೆ ಐಡಿಯೇ ಇಲ್ಲ. ಅಂದರೆ ಅವುಗಳು ಇದಕ್ಕೂ ಮೊದಲು ಗೋಚರವಾಗಿರುವುದೂ ಇಲ್ಲ. ಅಂದರೆ ಇದರ ಅರ್ಥ ಏನು? ಯಾಕೆ ಹುಲಿಗಳು ಇಷ್ಟೊಂದು ಪ್ರಮಾಣದಲ್ಲಿ ಗೋಚರವಾಗುತ್ತಿವೆ.

ವನ್ಯಜೀವಿ ತಜ್ಞರು ಹೇಳುವುದು ಹೀಗೆ

ವನ್ಯಜೀವಿ ತಜ್ಞರ ಪ್ರಕಾರ ಹುಲಿಗಳು ವಿಪರೀತ ಗೋಚರವಾಗಲು ಕಾರಣ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದು. ಸದ್ಯ ಕಾಡಿನಲ್ಲಿ ಕಳ್ಳಬೇಟೆ ಬಹುತೇಕ ನಿಯಂತ್ರಣವಾಗಿದೆ. ಕಾಡಿನಲ್ಲಿ ಮನುಷ್ಯರ ಓಡಾಟ ಕಡಿಮೆಯಾಗಿದೆ. ಇದರಿಂದ ಹುಲಿಗಳ ಆಹಾರವಾದ ಜಿಂಕೆ, ಕಾಡು ಕುರಿ, ಕಾಡು ಕೋಣ, ಕಡವೆಯಂತಹ ಪ್ರಾಣಿಗಳು ಯಥೇಚ್ಛವಾಗಿವೆ. ಇದರಿಂದ ಹುಲಿಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಆದರೆ ಜಾಸ್ತಿಯಾದ ಹುಲಿಗಳಿಗೆ ಅನುಗುಣವಾಗಿ ಅರಣ್ಯವೂ ಬೇಕಲ್ಲ. ಅದೇ ಈಗ ಎದುರಾಗಿರುವ ಸಮಸ್ಯೆ. ಅಂದರೆ ಹುಲಿಗಳ ಸಂಖ್ಯೆಗೆ ಸೂಕ್ತವಾಗಿ ಅಷ್ಟೇ ವಿಸ್ತಾರವಾದ ಕಾಡುಗಳಿಲ್ಲ ಎಂಬ ವಾದವಿದೆ. ಇದರಿಂದಲೇ ಭೌಗೋಳಿಕ ಕದಾಟದಲ್ಲಿ ಹೊರಬೀಳುವ ಹುಲಿಗಳು ಬೇರೆ ದಾರಿ ಇಲ್ಲದೆ ನಾಡಿನತ್ತ ಬಂದು ಹಸು ಕರು ದನಗಳನ್ನ ತಿನ್ನುತ್ತಿವೆ. ಇದರಿಂದ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುವ ಕಾರ್ಮಿಕರ ಜೀವಕ್ಕೆ ಯಾವುದೇ ರಕ್ಷಣೆ ಇಲ್ಲ.

ಕಾಫಿ ತೋಟಕ್ಕೆ ತೆರಳಲು ಕಾರ್ಮಿಕರ ಹಿಂದೇಟು; ಮಾಲಿಕರಿಗೆ ತಲೆನೋವು

ಕಾಫಿಗಿಡಗಳ ಮರೆಯಲ್ಲಿ ಅಡಗಿ ಕುಳಿತುಕೊಳ್ಳುವ ವ್ಯಾಘ್ರಗಳು ಯಾವುದೇ ಕ್ಷಣದಲ್ಲಿ ದಾಳಿ ಮಾಡಬಹುದು. ಹಾಗಾಗಿ ಬಹುತೇಕ ಕಾರ್ಮಿಕರು ಕಾಫಿ ತೋಟದತ್ತ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳಾದರೆ ಪಟಾಕಿ ಶಬ್ಧಕ್ಕೆ ಬೆದರಿ ಓಡುತ್ತವೆ. ಆದರೆ ಹುಲಿ ಹಾಗಲ್ಲ. ಯಾವ ಕ್ಷಣ ಎಲ್ಲಿಂದ ಬರುತ್ತವೆ ಅನ್ನೋದೇ ಗೊತ್ತಾಗಲ್ಲ. ಅವುಗಳ ಇರುವಿಕೆಯನ್ನ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅನಿರೀಕ್ಷಿತವಾಗಿ ದಾಳಿ ನಡೆಯುತ್ತದೆ. ಈ ಕಾರಣದಿಂದಾಗಿ ಅರಣ್ಯದಂಚಿನ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಾರೆ. ಇದು ಆ ಭಾಗದ ಎಸ್ಟೇಟ್ ಮಾಲಿಕರಿಗೆ ಸಂಕಷ್ಟ ತಂದಿದೆ. ಅತ್ತ ಅರಣ್ಯ ಇಲಾಖೆಯೂ ಅಸಹಾಯಕವಾಗಿದೆ. ಗ್ರಾಮಸ್ಥರ ಸಿಟ್ಟು ಅರಣ್ಯ ಇಲಾಖೆಯನ್ನ ದೂರುವಂತೆ ಮಾಡಿದೆ.

ಇದನ್ನೂ ಓದಿ: 5 ತಿಂಗಳ ಬಳಿಕ ಪ್ರವಾಸಿಗರಿಗೆ ಓಪನ್ ಆಯ್ತು ಹಾರಂಗಿ, ಮತ್ತಿಗೋಡು ಆನೆ ಶಿಬಿರ: ಕಟ್ಟುನಿಟ್ಟಿನ ರೂಲ್ಸ್ ಜಾರಿ!

ಕಾರ್ಮಿಕರ ಜೀವ ರಕ್ಷಣೆಗಾಗಿ ಎಸ್ಟೇಟ್ ಮಾಲಿಕರು ಬಂದೂಕು ಹಿಡಿದು ದಿನವಿಡೀ ಕಾವಲು ಕಾಯುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಆದರೆ ವಿಪರ್ಯಾಸ ಅಂದರೆ ಹುಲಿ ಕಾರ್ಮಿಕರ ಮೇಲೆ ದಾಳಿ ಮಾಡಿದರೆ ಅದರ ಮೇಲೆ ಗುಂಡು ಹೊಡೆಯುವ ಅಧಿಕಾರವೂ ಜನರಿಗಿಲ್ಲ. ಹಾಗಾಗಿ ಎಸ್ಟೇಟ್ ಮಾಲಿಕರು ಮತ್ತು ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ. ಒಂದು ವೇಳೆ ವನ್ಯಜೀವಿ ತಜ್ಞರು ಹೇಳುವಂತೆ ಹುಲಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಕಾಡು ಕಡಿಮೆಯಾಗಿದ್ದರೆ ಇದು ಗಂಭೀರ ವಿಚಾರ. ಇದರ ಬಗ್ಗೆ ಅರಣ್ಯ ಇಲಾಖೆ ಗಂಭೀರವಾಗಿಯೇ ಚಿಂತಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us