ಕೋಲಾರ, ಅಕ್ಟೋಬರ್ 20: ಸರ್ಕಾರ ವಿರುದ್ಧದ ಪರ್ಸೆಂಟೇಜ್ ಆರೋಪಕ್ಕೆ ಸಾಕ್ಷಿಯಾದ ಕೋಚಿಮುಲ್ (Kochimul) (ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್) ನಿರ್ದೇಶಕರಿಗೆ ಈಗ ವಿದೇಶ ಪ್ರವಾಸ (Foreign Tour) ಭಾಗ್ಯ ದೊರೆತಿದೆ. ಮತ್ತೊಂದೆಡೆ, ಬರದ ಮಧ್ಯೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿದೇಶ ಪ್ರವಾಸ ಆಯೋಜಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ವಿರೋಧವೂ ವ್ಯಕ್ತವಾಗಿದೆ. ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ 11 ಮಂದಿ ನಿರ್ದೇಶಕರು ಹಾಗೂ ಅವರ ಕುಟುಂಬಸ್ಥರು, ಇಬ್ಬರು ಅಧಿಕಾರಿಗಳು ಯೂರೋಪ್ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಕೋಚಿಮುಲ್ ಅಧ್ಯಕ್ಷ ಕೆವೈ ನಂಜೇಗೌಡ ನೇತೃತ್ವದಲ್ಲಿ ಪ್ರವಾಸ ಆಯೋಜಿಸಲಾಗಿದ್ದು, ಶುಕ್ರವಾರ ರಾತ್ರಿ ಕೆವೈ ನಂಜೇಗೌಡ ಕುಟುಂಬ ಸಮೇತ ಪ್ರವಾಸ ಬೆಳೆಸಿದ್ದಾರೆ. ಉಳಿದ ನಿರ್ದೇಶಕರು ಹಾಗೂ ಅಧಿಕಾರಿಗಳು ಭಾನುವಾರ ಪ್ರವಾಸ ಹೊರಡಲಿದ್ದಾರೆ.
ನಿರ್ದೇಶಕರು ಹಾಗೂ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದ್ದು, ರೈತರ ಶ್ರಮದಿಂದ ನಡೆಯುತ್ತಿರುವ ಕೋಚಿಮುಲ್ ಒಕ್ಕೂಟದಲ್ಲಿ ಇದೆಂತಹಾ ಸಂಪ್ರದಾಯ ಎಂಬ ಪ್ರಶ್ನೆ ವ್ಯಕ್ತವಾಗಿದೆ. ಬರದ ಮಧ್ಯೆ ಪ್ರವಾಸಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಯೂರೋಪ್ ಪ್ರವಾಸಕ್ಕೆ ತಗಲುವ ಲಕ್ಷಾಂತರ ರೂಪಾಯಿ ಹಣ ಎಲ್ಲಿಯದು, ಯಾರದ್ದು ಎಂಬ ಪ್ರಶ್ನೆ ಕೂಡ ಸೃಷ್ಟಿಯಾಗಿದೆ. ಪ್ರವಾಸಕ್ಕೆ ಒಕ್ಕೂಟದ ಗುತ್ತಿದಾರರೊಬ್ಬರಿಂದ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ: ನನ್ ಮುಟ್ಟಿದ್ರೆ ಕೇಸ್, ಪೊಲೀಸರಿಗೆ ಬಿಜೆಪಿ MP ವಾರ್ನಿಂಗ್; ಇಲ್ಲಿದೆ ವಿಡಿಯೋ
ಬಂಗಾರಪೇಟೆ ಜಯಸಿಂಹ ಕೃಷ್ಣಪ್ಪ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ನಿರ್ದೇಶಕ ಹನುಮೇಶ್ ಹೊರತುಪಡಿಸಿ, 11 ಜನ ನಿರ್ದೇಶಕರು ಹಾಗೂ ಎಂಡಿ ಗೋಪಾಲ್, ಹಾಗೂ ವ್ಯವಸ್ಥಾಪಕ ನಾಗೇಶ್ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದಾರೆ. ಟೂರ್ ಭಾಗ್ಯಕ್ಕೆ ಒಕ್ಕೂಟದಲ್ಲಿ ಗುತ್ತಿಗೆದಾರನೊಬ್ಬನಿಂದ ಹಣ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದ್ದು, ನಿರ್ದೇಶಕರ ಯೂರೋಪ್ ಪ್ರವಾಸ ಅವಳಿ ಜಿಲ್ಲೆಯ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ