ರಾಜ್ಯದಲ್ಲಿ ಕೆಂಪು ಸುಂದರಿಗೆ ಕಡಿಮೆಯಾದ ಡಿಮ್ಯಾಂಡ್: ಕೋಲಾರ ರೈತರಿಗೆ ಸಂಕಷ್ಟ
ಕೋಲಾರ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ರೋಗಬಾದೆಯಿಂದ ಸೊರಗಿ ಹೋಗಿದ್ದ ಟೊಮೆಟೊ ಬೆಳೆ ಸದ್ಯ ಚೇತರಿಸಿಕೊಂಡಿದೆ. ಆದರೆ ಮಾರುಕಟ್ಟೆಯಲ್ಲಿ ಟೊಮೆಟೊಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ಕಷ್ಟಪಟ್ಟು ಹತ್ತಾರು ಆಸೆಗಳನ್ನು ಹೊತ್ತು ಬೆಳೆದ ಟೊಮೆಟೊವನ್ನು ರೈತರು ಬೀದಿಗೆ ಸುರಿಯುವ ಪರಿಸ್ಥಿತಿ ಎದುರಾಗಿದೆ.

ಕೋಲಾರ, ಮೇ 11: ಕೋಲಾರ (Kolar) ಜಿಲ್ಲೆಯಲ್ಲಿ ಟೊಮೆಟೊ (Tomato) ಬೆಲೆ ದಿಢೀರನೆ ಕುಸಿತವಾಗಿದೆ. ಇದರಿಂದ ಕೋಲಾರ ಜಿಲ್ಲೆಯ ರೈತರು (Farmers) ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದ ಟೊಮೆಟೊ ಬೆಳೆಗೆ ವೈರಸ್ ರೋಗ ತಗುಲಿದ್ದರಿಂದ ಉತ್ಪಾದನೆ ಕುಂಟಿತವಾಗಿತ್ತು. ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದರು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಕೂಡ ಉತ್ತಮ ಬೆಳೆ ಬಾರದ ಪರಿಣಾಮ ರೈತರು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದರು. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಟೊಮೆಟೊ ಬೆಳೆ ರೋಗಕ್ಕೆ ತುತ್ತಾಗಿ ಹೋಗುತ್ತಿತ್ತು.
ಆದರೆ, ಈ ವರ್ಷ ಚಿತ್ರಣ ಬದಲಾಗಿದೆ. ಟೊಮೆಟೊ ಸುಗ್ಗಿ ಕಾಲ ಆರಂಭವಾಗಿದೆ. ದೇವರ ದಯೆಯಿಂದ ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಟೊಮೆಟೊ ಬೆಳೆ ಬಂದಿದೆ. ಆದರೆ, ರೈತರ ದುರಾದೃಷ್ಟವೋ ಏನೋ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೆಲೆ ಕುಸಿತಗೊಂಡಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಕೇವಲ 50, 80 ಮತ್ತು 100 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ, ಹಾಕಿದ ಬಂಡಾವಳ ಕೂಡ ಬಾರದ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ತೋಟದಲ್ಲೇ ಬಿಡುತ್ತಿದ್ದಾರೆ.
ಇನ್ನು, ಕೆಲವು ರೈತರು ಟೊಮೆಟೊ ಅನ್ನು ರಸ್ತೆ ಬದಿಯಲ್ಲಿ ಸುರಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಸರ್ಕಾರ ಟೊಮೆಟೊ ಬೆಳೆದ ರೈತರಿಗೆ ಕೆಜಿಗೆ ಕನಿಷ್ಠ ಹತ್ತು ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ ಮಾಡಿ ಆಗ್ರಹಿಸಿದೆ.
ಕಳೆದ ಐದು ವರ್ಷಗಳಿಂದ ಟೊಮೆಟೊಗೆ ಬಿಂಗಿ ರೋಗ, ಎಲೆಸುರುಳಿ ರೋಗ, ವೈರಸ್ ಸೇರಿದಂತೆ ಹಲವು ಕಾಯಿಲೆಗಳು ತಗುಲಿದ್ದರುಂದ ಬೆಳೆ ಸರಿಯಾಗಿ ಬಂದಿರಲಿಲ್ಲ. ಹಲವು ಬಗೆಯ ಔಷಧಿಗಳನ್ನು ಸಿಂಪಡಣೆ ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗಿರಲಿಲ್ಲ ಇದರಿಂದ ಜಿಲ್ಲೆಯ ಅದೆಷ್ಟೋ ರೈತರು ಟೊಮೆಟೊ ಬೆಳೆಯೋದನ್ನೇ ನಿಲ್ಲಿಸಿದ್ದರು.
ಇದರ ಲಾಭ ಪಡೆದ ಕೋಲಾರ ಅಕ್ಕಪಕ್ಕದ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ರೈತರು ಹೆಚ್ಚು ಟೊಮೆಟೊ ಬೆಳೆಯೋದಕ್ಕೆ ಆರಂಭ ಮಾಡಿದರು. ಉತ್ತಮ ಬೆಲೆ ಸಿಕ್ಕ ಹಿನ್ನೆಲೆಯಲ್ಲಿ ಈಗ ಎಲ್ಲೆಡೆಯಿಂದ ಅಧಿಕವಾಗಿ ಟೊಮೆಟೊ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದೆ. ಇದರ ಜೊತೆಗೆ ಈ ವರ್ಷ ಕೋಲಾರ ಜಿಲ್ಲೆ ರೈತರಿಗೂ ಒಳ್ಳೆಯ ಟೊಮೆಟೊ ಫಸಲು ಬಂದಿದೆ. ಹೀಗಾಗಿ ಬೇಡಿಕೆಗಿಂತ ಅತಿಹೆಚ್ಚು ಟೊಮೆಟೊ ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಕುಸಿದಿದೆ. ಹೀಗಾಗಿ ಸರ್ಕಾರ ಟೊಮೆಟೊ ಬೆಳೆಗಾರರ ನೆರವಿಗೆ ನಿಂತು ಕನಿಷ್ಠ ಕೆಜಿ ಟೊಮೆಟೊಗೆ 10 ರೂಪಾಯಿ ಬೆಂಬಲ ಬೆಲೆಯನ್ನು ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಕೋಲಾರದ ರೈತರು..!
ಒಟ್ಟಾರೆಯಾಗಿ ಕಳೆದ ಐದು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ರೋಗ ಬಾದೆ ಬಾದಿಸುತ್ತಿತ್ತು. ಆಗ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಸಿಗುತ್ತಿತ್ತು. ಈಗ ರೋಗದಿಂದ ಚೇತರಿಕೆ ಕಂಡು ಒಳ್ಳೆಯ ಬೆಳೆಯಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೆಲೆಯೇ ಇಲ್ಲದಂತಾಗಿದೆ. ಸರ್ಕಾರವಾದರೂ ರೈತರ ನೆರವಿಗೆ ನಿಲ್ಲಬೇಕು ಅನ್ನೋದು ಟೊಮೆಟೊ ಬೆಳೆಗಾರರ ಆಗ್ರಹವಾಗಿದೆ.