ಕೋಲಾರ: ವರ್ಕ್ ಫ್ರಂ ಹೋಂ, ಹಣ ಡಬಲ್ ಆಮಿಷ; ಕೋಟ್ಯಂತರ ರೂ ವಂಚನೆ: ನಾಲ್ವರ ಬಂಧನ

Kolar Work-From-Home Scam: ಮನೆಯಲ್ಲೇ ಕುಳಿತ ಕೆಲಸ ಮಾಡಿ ಸಾವಿರಾರು ರೂ ಹಣ ಸಂಪಾದನೆ ಮಾಡಬಹುದು ಎಂದು ಹೇಳಿ, ಜನರು ಹೂಡಿಕೆ ಮಾಡಿದ ಹಣಕ್ಕೆ ಡಬಲ್​ ಹಣ ಕೊಡುವುದಾಗಿ ನಂಬಿಸಿ ಕೋಟಿ ಕೋಟಿ ರೂ ವಂಚನೆ ಮಾಡಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಕೋಲಾರ: ವರ್ಕ್ ಫ್ರಂ ಹೋಂ, ಹಣ ಡಬಲ್ ಆಮಿಷ; ಕೋಟ್ಯಂತರ ರೂ ವಂಚನೆ: ನಾಲ್ವರ ಬಂಧನ
ಬಂಧಿತರು
Image Credit source: tv9 kannada
Edited By:

Updated on: Aug 15, 2026 | 7:38 PM

ಕೋಲಾರ, ಆಗಸ್ಟ್​​ 15: ಮನೆಯಲ್ಲೇ ಕುಳಿತು ಕೆಲಸ (Work-from-home fraud) ಮಾಡಿ ಸಾವಿರಾರು ರೂ ಗಳಿಸಬಹುದು ಹಾಗೂ ಹೂಡಿಕೆ ಮಾಡಿದ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಬರೋಬ್ಬರಿ 50 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ (Arrested). ‘ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಈ ವಂಚನಾ ಜಾಲ ನಡೆಸಲಾಗುತ್ತಿದ್ದು, ಸಂಸ್ಥೆಯ ಮಾಲೀಕರಾದ ಬೆಂಗಳೂರು ಚಿಕ್ಕಜಾಲ ಮೂಲದ ಭೂಮಿ ಕಿರಣ್ ಶೆಟ್ಟಿ (28), ಅವರ ಪತ್ನಿ ಆರತಿ (23), ಕೋಲಾರದ ಬ್ಯಾಲಹಳ್ಳಿ ನಿವಾಸಿ ರಮ್ಯಾ ಹಾಗೂ ಬಂಗಾರಪೇಟೆ-ಬೂದಿಕೋಟೆ ಶಾಖೆಯ ಮ್ಯಾನೇಜರ್ ವೆಂಕಟಾಚಲಪತಿ ಅಲಿಯಾಸ್ ಸ್ವಾಮಿ ಬಂಧಿತ ಆರೋಪಿಗಳು.

ನಡೆದಿದ್ದೇನು?

ಕಿರಣ್ ಮತ್ತು ಆರತಿ ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಸಂಸ್ಥೆ ನಡೆಸುತ್ತಿದ್ದರು. ಊದುಬತ್ತಿ, ಮೆಣದಬತ್ತಿ, ಪೇಪರ್ ಪ್ಲೇಟ್ ಸೇರಿದಂತೆ ವಿವಿಧ ವಸ್ತುಗಳ ಪ್ಯಾಕಿಂಗ್ ಕೆಲಸ ನೀಡುವುದಾಗಿ ಜನರನ್ನು ನಂಬಿಸಿ ಹಣ ಪಡೆಯುತ್ತಿದ್ದರು. ಪ್ಯಾಕಿಂಗ್ ಹೆಸರಿನಲ್ಲಿ ಗ್ರಾಹಕರಿಂದ ಲಕ್ಷಾಂತರ ರೂ ಡೆಪಾಸಿಟ್ ಪಡೆಯುತ್ತಿದ್ದ ಆರೋಪಿಗಳು, ಕ್ರಮೇಣ ಹಣ ಕೊಡುವುದನ್ನು ನಿಲ್ಲಿಸಿದ್ದಾರೆ. ಅನುಮಾನಗೊಂಡ ಗ್ರಾಹಕರು ಹಣ ಕೊಡುವಂತೆ ಒತ್ತಾಯಿಸಿದಾಗ ಪ್ರಕರಣ ಬಯಲಿಗೆ ಬಂದಿದ್ದು, ಸದ್ಯ ಕೋಲಾರದ ಗಲ್‌ಪೇಟೆ, ಬೂದಿಕೋಟೆ, ಬೆಂಗಳೂರಿನ ಚಿಕ್ಕಜಾಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಏಳೆಂಟು ಸಾವಿರ ಜನರು ಹಣ ಕಳೆದುಕೊಂಡಿದ್ದು, ಸರಾಸರಿ 50 ಕೋಟಿಗೂ ಅಧಿಕ ಹಣ ವಂಚನೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ!

ಇನ್ನು ಬಂಗಾರಪೇಟೆ ತಾಲೂಕಿನ ದೆಬ್ಬನಹಳ್ಳಿ, ಬೂದಿಕೋಟೆಯಲ್ಲೂ ಕಾಳಿಕಾದೇವಿ ಎಂಟರ್​ಪ್ರೈಸಸ್​ ಬ್ರಾಂಚ್ ಇದ್ದು, ಇಲ್ಲಿ ಕೋಲಾರ ಜಿಲ್ಲೆಯ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ಜನರಿಂದಲೂ ಠೇವಣಿ ರೂಪದಲ್ಲಿ ಹಣ ಸಂಗ್ರಹಿಸಿದ್ದರು. ಒಟ್ಟು 1121 ಜನರಿಂದ ಬರೋಬ್ಬರಿ 10.53 ಕೋಟಿಯಷ್ಟು ಹಣ ಸಂಗ್ರಹಿಸಿದ್ದ ಮ್ಯಾನೇಜರ್ ವೆಂಕಟಾಚಲಪತಿಯನ್ನ ಪೊಲೀಸರು ಬಂಧಿಸಿದ್ದಾರೆ.

ಹಣ ಡಬಲ್ ಮಾಡುವ ಆಮಿಷ ಪ್ರಕರಣಗಳು ಬೆಳಕಿಗೆ

ಕೋಲಾರ ಜಿಲ್ಲೆಯಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಹಾಗೂ ಎಂಟರ್‌ಪ್ರೈಸಸ್‌ಗಳು ಸಾರ್ವಜನಿಕರಿಗೆ ಹಣವನ್ನು ಬೇಗನೆ ಡಬಲ್ ಅಥವಾ ತ್ರಿಬಲ್​ ಮಾಡಿಕೊಡುವುದಾಗಿ ಆಮಿಷ ಒಡ್ಡಿ ವಂಚನೆ ಮಾಡಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಆರಂಭದಲ್ಲಿ ಕೆಲವರಿಗೆ ಹಣದ ರಿಟರ್ನ್ಸ್ ನೀಡಿದಂತೆ ತೋರಿಸಿ, ನಂತರ ಕಚೇರಿಗಳನ್ನು ಮುಚ್ಚಿ ಮಾಲೀಕರು ತಲೆಮರೆಸಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಇಂತಹ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 350ಕ್ಕೂ ಹೆಚ್ಚು ಜನರು ದೂರು ನೀಡಿದ್ದು, 6 ಕೋಟಿಗೂ ಅಧಿಕ ಮೊತ್ತದ ಹಣ ವಂಚನೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಆಮಿಷ: ಕೋಲಾರದಲ್ಲಿ ಊದುಬತ್ತಿ ಕಂಪನಿಯಿಂದ 10 ಕೋಟಿ ರೂ ವಂಚನೆ!

ಅಲ್ಲದೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ ಸೇರಿ ಹಲವೆಡೆ ಇದೇ ರೀತಿ ಕೋಟ್ಯಂತರ ರೂ ವಂಚನೆ ನಡೆದಿರುವುದು ತಿಳಿದು ಬಂದಿದ್ದು, ಸದ್ಯ ವಂಚನೆಗೊಳಗಾದ ಜನರು ತಾವು ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ನಿವೃತ್ತ ಸರ್ಕಾರಿ ಶಿಕ್ಷಕರು, ಜಮೀನು ಮಾರಾಟದ ಹಣ, ಒಡವೆ ಅಡವಿಟ್ಟು ತಂದ ಹಣ, ಮಕ್ಕಳ ಮದುವೆಗೆಂದು ಕೂಡಿಟ್ಟಿದ್ದ ಹಣ ಹೀಗೆ ಬಡ ಜನರು ಕಷ್ಟಪಟ್ಟು ಕೂಡಿಟ್ಟಿದ್ದ ಹಣವನ್ನು ಲಪಟಾಯಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ. ಇತ್ತ ನಮ್ಮ ಹಣ ನಮಗೆ ವಾಪಸ್ ಕೊಡಿ ಎನ್ನುವುದು ಹಣ ಕಳೆದುಕೊಂಡವರ ಅಳಲಾಗಿದೆ.

Work From Home Fraud: ‘ಮನೆಯಿಂದಲೇ ಕೆಲಸ’ ಟ್ಯಾಗ್‌ ಲೈನ್‌ನೊಂದಿಗೆ ಪ್ಲ್ಯಾನ್‌ ಮಾಡಿ ವಂಚನೆ! | #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:21 pm, Sat, 15 August 26

Loading...
Unable to load recommendations.
Follow Us