AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆ ಒದಗಿಸದಿದ್ದರೇ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗುತ್ತೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಎಚ್ಚರಿಕೆ ಕೊಟ್ಟ ಮುನಿರತ್ನ

ಆದಷ್ಟು ಬೇಗ ಈ ಪ್ರಕರಣ ಮುಗಿಸಲು ಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡುವೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ, ಇನ್ನೂ ಮುಂದೆ ಇದೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

ದಾಖಲೆ ಒದಗಿಸದಿದ್ದರೇ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗುತ್ತೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಎಚ್ಚರಿಕೆ ಕೊಟ್ಟ ಮುನಿರತ್ನ
ಸಚಿವ ಮುನಿರತ್ನ
TV9 Web
| Updated By: ವಿವೇಕ ಬಿರಾದಾರ|

Updated on: Dec 25, 2022 | 2:50 PM

Share

ಕೋಲಾರ: ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಆರೋಪ ಮಾಡಿದ ಮೇಲೆ ದಾಖಲೆ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗುತ್ತೆ. ದಾಖಲೆ ಕೊಡಲಿಲ್ಲವೆಂದರೆ ಎರಡು ವರ್ಷ ಶಿಕ್ಷೆ ಆಗುತ್ತದೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ (Munirathna) ಹೇಳಿದ್ದಾರೆ.

ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಆರೋಪ ಮಾಡಿ ಒಂದು ವರ್ಷ ಆಗಿದೆ, ಅದಕ್ಕೆ ದಾಖಲೆ ನೀಡಬೇಕು, ಆದರೆ ಒದಗಿಸಿಲ್ಲ. ಹೀಗಾಗಿ ನ್ಯಾಯಾಲಯದಿಂದ ಸಮನ್ಸ್ ಬಂತು, ಸಮನ್ಸ್ ಬಂದು ದಾಖಲೆ ಕೊಡದಿದ್ದರಿಂದ ವಾರೆಂಟ್ ಬಂತು. ಅದನ್ನು ಅರ್ಥ ಮಾಡಿಕೊಳ್ಳಬೇಕು. ಆರೋಪ ಮಾಡಿದ ಮೇಲೆ ಜೀರ್ಣ ಮಾಡಿಕೊಳ್ಳುವ ಶಕ್ತಿ ಇರಬೇಕು ಎಂದರು.

ಇದನ್ನೂ ಓದಿ: ಮುನಿರತ್ನ ವಿರುದ್ಧ ಕಮಿಷನ್ ಆರೋಪ ಪ್ರಕರಣ: ಅರೆಸ್ಟ್ ಆಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಜಾಮೀನು

ರಾಜರಾಜೇಶ್ವರಿ ಕ್ಷೇತ್ರದಲ್ಲಿ 10 ಸಾವಿರ ಕೋಟಿ ಖರ್ಚು, ಹಾಗೂ 40% ಕಮಿಷನ್ ಎಲ್ಲಿ ಆಗಿದೆ ತೋರಿಸಬೇಕು. ದಾಖಲೆ ತೋರಿಸುವವರೆಗೂ ನಾನು ಬಿಡುವುದಿಲ್ಲ. ಆದಷ್ಟು ಬೇಗ ಈ ಪ್ರಕರಣ ಮುಗಿಸಲು ಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡುವೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ, ಇನ್ನು ಮುಂದೆ ಇದೆ. ಖಂಡಿತವಾಗಲೂ ಹೇಳುತ್ತಿರುವೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಅವರು ಸಿದ್ದರಾಮಯ್ಯ ಅವರ ಮಾತು ಕೇಳುತ್ತಾರೆ. ಹಾಗಿದ್ದರೆ ಅಸೆಂಬ್ಲಿ ನಡೆಯುತ್ತಿದೆ ಸಿದ್ದರಾಮಯ್ಯ ಅವರಿಗೆ ದಾಖಲೆಗಳ ಕೊಟ್ಟು ಅಸೆಂಬ್ಲಿಯಲ್ಲಿ ಧ್ವನಿ ಎತ್ತಲಿ. ಕಾನೂನು ಚೌಕಟ್ಟಿನಲ್ಲಿ ಏನೂ ಕ್ರಮ ಕೈಗೊಳ್ಳಬೇಕು ಅದೆಲ್ಲ ಮಾಡುವೆ ಎಂದು ತಿಳಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನ ಬಂಧನ

ಬೆಂಗಳೂರು: ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಸಚಿವ ಮುನಿರತ್ನ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಡಿಸೆಂಬರ್ 24) ಬೆಂಗಳೂರಿನ ವೈಯಾಲಿಕಾವಲ್‌ ಪೊಲೀಸರು, ಡಿ.ಕೆಂಪಣ್ಣ ಜೊತೆಗೆ ವಿ.ಕೃಷ್ಣಾ ರೆಡ್ಡಿ, ನಟರಾಜು, ಗುರುಸಿದ್ದಪ್ಪ ಅವರನ್ನೂ ಸಹ ಅರೆಸ್ಟ್ ಮಾಡಿದ್ದರು.

ಇದನ್ನೂ ಓದಿ: ಬೆಳಗಾವಿ ರಾಜಕಾರಣ: ರಮೇಶ್ ಜಾರಕಿಹೊಳಿ vs ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಜಿದ್ದಾಜಿದ್ದಿ ಪೈಪೋಟಿ

ಕೆಂಪಣ್ಣ ಅವರು ಇತ್ತೀಚೆಗೆ ಬೊಮ್ಮಾಯಿ ಸರ್ಕಾರ ಮಾತ್ರವಲ್ಲದೇ ಸಚಿವರುಗಳ ವಿರುದ್ಧವೂ ಸಹ ಕಮಿಷನ್ ಆರೋಪ ಮಾಡಿದ್ದರು. ಅದರಲ್ಲೂ ಸಚಿವ ಮುನಿರತ್ನ ಅವರ ವಿರುದ್ಧ ಬಹಿರಂಗವಾಗಿಯೇ ಕಮಿಷನ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುನಿರತ್ನ ಅವರು ಕೆಂಪಣ್ಣ ಮಾನಹಾನಿ ಕೇಸ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪಣ್ಣ ಅವರು ಕೋರ್ಟ್​ಗೆ ಗೈರಾಗಿದ್ದಕ್ಕೆ ವಾರೆಂಟ್ ಜಾರಿಯಾಗಿತ್ತು.

ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷನ ಡಿ.ಕೆಂಪಣ್ಣ ವಿ.ಕೃಷ್ಣಾರೆಡ್ಡಿ, ಸೇರಿ 19 ಪ್ರತಿವಾದಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಆದರೂ ಯಾವುದೇ ಉತ್ತರ ನೀಡದಿದ್ದರಿಂದ ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.

ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ

ಮೊದಲಿಗೆ ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ,ಬಳಿಕ MLAಗಳಿಗೆ 10 ಪರ್ಸೆಂಟ್​ ಕಮಿಷನ್​ ಕೊಡಬೇಕು, ಮಂತ್ರಿ​​ಗಳಿಗೆ ಶೇಕಡಾ 5ರಷ್ಟು ಪರ್ಸೆಂಟೇಜ್​ ಕೊಡಬೇಕು ಎಂಬ ಸ್ಫೋಟಕ ಬಾಂಬ್ ಸಿಡಿಸಿದ್ದರು.

ಬಿಜೆಪಿ ಸರ್ಕಾರದಲ್ಲಿ 40%-50% ಕಮಿಷನ್​ ವಸೂಲಿ ಆಗುತ್ತಿದ್ದು, 2019ರ ನಂತರ ಸರ್ಕಾರದಲ್ಲಿ ಪರ್ಸೆಂಟೇಜ್​ ಹೆಚ್ಚಾಗಿದೆ. ಕಾಂಟ್ರಾಕ್ಟರ್​​​ಗಳಿಂದ ಹೆಜ್ಜೆ-ಹೆಜ್ಜೆಗೂ ಕಮಿಷನ್​ ವಸೂಲಿ ಆಗ್ತಿದೆ, ನಾನು ಈಗಾಗಲೇ ಪ್ರಧಾನಿ ಮೋದಿಯವರಿಗೂ ದೂರು ನೀಡಿದ್ದೇನೆ. ಕರ್ನಾಟಕದಲ್ಲಿ 1 ಲಕ್ಷ ಮಂದಿ ಕಾಂಟ್ರಾಕ್ಟರ್​​ಗಳು ಇದ್ದಾರೆ. KRIDL ಗುತ್ತಿಗೆಯಲ್ಲಿ ಕೆಲಸ ಮಾಡದೇ ಹಣ ಪಡೆಯುತ್ತಿದ್ದಾರೆ, ಏಪ್ರಿಲ್​​​ನಲ್ಲಿ 50 ಸಾವಿರ ಕಾಂಟ್ರಾಕ್ಟರ್​ಗಳು ಹೋರಾಟ ಮಾಡಿದ್ದೇವೆ. ರಸ್ತೆಗಳೂ ಕಳಪೆ ಕಾಮಗಾರಿಯಿಂದ ನಿರ್ಮಾಣ ಆಗ್ತಾ ಇವೆ, 20 ರಿಂದ 25 ಸಾವಿರ ಕೋಟಿ ರಾಜಕಾರಣಿಗಳ ಜೇಬು ಸೇರ್ತಿದೆ. ಭ್ರಷ್ಟಾಚಾರದ ಬಗ್ಗೆ ಯಾರೂ ಕ್ರಮ ಕೈಗೊಳ್ತಿಲ್ಲಎಂದು ಕೆಂಪಣ್ಣ ಕಿಡಿಕಾರಿದ್ದರು.

ಕೆಂಪಣ್ಣಗೆ ಪಿಎಂ ಕಾರ್ಯಾಲಯದಿಂದ ಕರೆ

ರಾಜ್ಯದಲ್ಲಿ 40 ಪಸೆಂಟ್ ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದ ಅಧಿಕಾರಿಗಳು ಕರೆ ಮಾಡಿ ಮಾತನಾಡಿದ್ದರು. ಆರೋಪದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಪಿಎಂ ಕಾರ್ಯಾಲಯವು ಕೆಂಪಣ್ಣ ಅವರಿಗೆ ಸೂಚನೆ ನೀಡಿತ್ತು.

ರಾಜ್ಯಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ