
ಕೋಲಾರ, ಜೂನ್ 27: ಟ್ರ್ಯಾಕ್ಟರ್ ಡಿಕ್ಕಿ (accident) ಹೊಡೆದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ದಂಪತಿ ಹಾಗೂ ಪುತ್ರಿ ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಿ.ಗುಟ್ಟಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಘಾತ ಉಂಟಾಗಿದೆ. ಎನ್.ಚಮಕಲಹಳ್ಳಿ ಗ್ರಾಮದ ನಿವಾಸಿ ಅಬೂಬಕರ್(38), ಪತ್ನಿ ಸಾಬೀರಾ(37), ಪುತ್ರಿ ಜೋಯಾ(16) ಮೃತರು. ಕಲ್ಲು ಕೆಲಸಕ್ಕೆ ಹೋಗಿ ವಾಪಸ್ಸಾಗುವ ವೇಳೆ ದುರ್ಘಟನೆ ಸಂಭವಿಸಿದೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಸಮೀಪದ ಶಿಡ್ಲೆ ಬಳಿ ನಡೆದಿದೆ. ಕೊಟ್ಟಿಗೆಹಾರ ನಿವಾಸಿ ಅಭಿಷೇಕ್ (26) ಮೃತ ದುರ್ದೈವಿ. ಗಂಭೀರ ಗಾಯಗೊಂಡಿದ್ದ ಸಂಕೇತ್ಗೆ ಶೃಂಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವಂತಹ ಘಟನೆ ಕೊಪ್ಪಳ ತಾಲೂಕಿನ ಶಿವಪುರ ಬಳಿ ನಡೆದಿದೆ. ಜಿಲ್ಲೆಯ ಯಲಬುರ್ಗಾ ಪಟ್ಟಣದ ನಿವಾಸಿ ಪ್ರಕಾಶ್ (28) ಮೃತ ವ್ಯಕ್ತಿ. ಶನಿವಾರ ಹಿನ್ನೆಲೆ ಹನುಮನ ದರ್ಶನಕ್ಕೆ ಅಂಜನಾದ್ರಿಗೆ ಪ್ರಕಾಶ್ ಹಾಗೂ ಸ್ನೇಹಿತ ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವಾಹನ ಡಿಕ್ಕೆ ಹೊಡೆದಿದ್ದಕ್ಕೆ ಸ್ಥಳದಲ್ಲೇ ಚಿರತೆ ಸಾವನ್ನಪ್ಪಿರುವಂತಹ ಘಟನೆ ಮೈಸೂರು–ಹುಣಸೂರು ಹೆದ್ದಾರಿಯ ಅರಬ್ಬಿತಿಟ್ಟು ವನ್ಯಧಾಮದ ಬಳಿ ನಡೆದಿದೆ. ಅರಬ್ಬಿತಿಟ್ಟು ಸಂರಕ್ಷಿತ ಅರಣ್ಯದಿಂದ ಎದುರಿನ ಅರಣ್ಯದತ್ತ ಆಹಾರ ಅರಸಿ ರಸ್ತೆ ದಾಟುತ್ತಿದ್ದ ವೇಳೆ ಚಿರತೆಗೆ ವಾಹನ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಚಿರತೆ ಮೃತಪಟ್ಟಿದೆ.
ಇದನ್ನೂ ಓದಿ: ಕೊಪ್ಪಳ: ಭಾನಾಪೂರ ಬಳಿ ಭೀಕರ ಅಪಘಾತ, ನಾಲ್ವರು ಸಾವು
ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಿಳಿಕೆರೆ ಠಾಣೆ ಪೊಲೀಸರಿಂದಲೂ ಪರಿಶೀಲನೆ ಮಾಡಲಾಗಿದ್ದು, ಅಪರಿಚಿತ ವಾಹನ ಪತ್ತೆಗೆ ಕಾರ್ಯಾಚರಣೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.