ಕೊಪ್ಪಳ: ಅಂತರ್ಜಾತಿ ವಿವಾಹ, ದಲಿತ ಯುವತಿಗೆ ವಿಷವುಣಿಸಿ ಹತ್ಯೆ

ಅಂತರ್ಜಾತಿ ವಿವಾಹವಾಗಿದ್ದ ಯುವತಿ ಸಾವನ್ನಪ್ಪಿರುವಂತಹ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಕಳೆದ ಆಗಸ್ಟ್ 29 ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹುಡುಗನ ಮನೆಯವರೇ ಮಗಳನ್ನ ಕೊಲೆ ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ.

ಕೊಪ್ಪಳ: ಅಂತರ್ಜಾತಿ ವಿವಾಹ, ದಲಿತ ಯುವತಿಗೆ ವಿಷವುಣಿಸಿ ಹತ್ಯೆ
ಕೊಪ್ಪಳ: ಅಂತರ್ಜಾತಿ ವಿವಾಹ, ದಲಿತ ಯುವತಿಗೆ ವಿಷವುಣಿಸಿ ಹತ್ಯೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 04, 2024 | 8:31 PM

ಕೊಪ್ಪಳ, ಸೆಪ್ಟೆಂಬರ್​ 04: ಅವರಿಬ್ಬರದು ಜಾತಿ ಬೇರೆ ಬೇರೆಯಾಗಿತ್ತು. ಆದರೆ ಇಬ್ಬರು ಜಾತಿಯ ಗೋಡೆಗಳನ್ನು ದಾಟಿ ಪ್ರೀತಿಸಿದ್ದರು. ಆರಂಭದಲ್ಲಿ ಎರಡು ಕುಟಂಬದವರು ವಿರೋಧ ವ್ಯಕ್ತಪಡಿಸಿದ್ದರು. ಇಬ್ಬರು ಪ್ರಾಪ್ತ ವಯಸ್ಸಿಗೆ ಬಂದಿದ್ದರಿಂದ ಓಪ್ಪಿ ಮದುವೆ ಮಾಡಿದ್ದರು. ಆದರೆ ಮದುವೆಯಾಗಿ ಒಂದೇ ವರ್ಷಕ್ಕೆ ಯುವತಿ ದಾರುಣ ಅಂತ್ಯಕಂಡಿದ್ದಾಳೆ. ಕೆಳ ಜಾತಿಯವಳು ಅಂತ ನಿಂದಿಸಿ, ದೈಹಿಕ ದೌರ್ಜನ್ಯ ನಡೆಸಿದಲ್ಲದೆ, ವಿಷ ಕುಡಿಸಿ ಕೊಲೆ (death) ಮಾಡಿದ್ದಾರೆ ಅಂತ ಯುವತಿ ಮನೆಯವರು ಆರೋಪಿಸುತ್ತಿದ್ದಾರೆ. ಸದ್ಯ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಅಂತು ಆ ಜೋಡಿ ಪ್ರೇಮಲೋಕದಲ್ಲಿ ವಿಹರಿಸಿತ್ತು. ಅಜ್ಜಿ ಮನೆಗೆ ಹೋಗ್ತಿದ್ದ ಯುವತಿ, ಯುವಕನ ಪ್ರೇಮ ಪಾಶದಲ್ಲಿ ಸಿಲುಕಿದ್ದಳು. ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ನಿವಾಸಿಯಾಗಿದ್ದ (21) ಮರಿಯಮ್ಮ ಅನ್ನೋ ಯುವತಿ, ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರ ಗ್ರಾಮದ ಹನಮಯ್ಯ ಅನ್ನೋ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಮರಿಯಮ್ಮ, ದಲಿತ ಸಮುದಾಯಕ್ಕೆ ಸೇರಿದ್ದರೆ, ಹನಮಯ್ಯ, ನಾಯಕ ಜಾತಿಗೆ ಸೇರಿದ್ದ. ಹೀಗಾಗಿ ಇಬ್ಬರ ಮನೆಯಲ್ಲಿ ಇವರ ಮದುವೆಗೆ ರೆಡ್ ಸಿಗ್ನಲ್ ಸಿಕ್ಕಿತ್ತು. ಇದೇ ಕಾರಣಕ್ಕೆ ಇಬ್ಬರು ಮನೆ ಬಿಟ್ಟು ಹೋಗಿದ್ದರು.

ಇದನ್ನೂ ಓದಿ: ಕೊಪ್ಪಳ: ಲಾರಿ ಡಿಕ್ಕಿ; ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಹೀಗಾಗಿ ಯುವತಿ ಮನೆಯವರು ಪೊಲೀಸರಿಗೆ ದೂರು ಕೊಡಲು ಹೋಗಿದ್ದರು. ಆದರೆ ಇಬ್ಬರು ಕೂಡಾ ಪ್ರಾಪ್ತವಯಸ್ಸನ್ನು ಹೊಂದಿದ್ದರಿಂದ, ಯುವತಿ ಹೆತ್ತವರು ಸುಮ್ಮನಾಗಿದ್ದರು. ನಂತರ ಮರಿಯಮ್ಮ ಮತ್ತು ಹನುಮಯ್ಯ, ಗಂಗಾವತಿ ಸಬ್ ರಿಜಸ್ಟರ್ ಕಚೇರಿಯಲ್ಲಿ ವಿವಾಹವಾಗಿದ್ದರು. ಇದಾದ ನಂತರ ಎರಡು ಕುಟುಂಬದವರು ದೇವಸ್ಥಾನದಲ್ಲಿ ಸರಳ ವಿವಾಹ ಮಾಡಿದ್ದರು. ನಂತರ ಮರಿಯಮ್ಮ, ಹನಮಯ್ಯನ ಸ್ವಗ್ರಾಮ ವಿಠಲಾಪುರಕ್ಕೆ ಹೋಗಿದ್ದಳಂತೆ.

ಇನ್ನು ಯುವತಿ ಹೆತ್ತವರಿಗೆ, ಯುವಕನ ಹೆತ್ತವರು, ತಮ್ಮ ಮನೆ ಕಡೆ ಬರಬೇಡಿ ಅಂತ ಹೇಳಿದ್ದರಂತೆ. ಹೀಗಾಗಿ ಯುವತಿ ಹೆತ್ತವರು, ಸುಮ್ಮನಾಗಿದ್ದರಂತೆ. ಆದರೆ ಪ್ರೀತಿಸಿ ಮದುವೆಯಾಗಿದ್ದ ಯುವತಿ, ಗಂಡನ ಮನೆಯಲ್ಲಿ ಸುಖ ಸಂಸಾರ ನಡೆಸಲಿಕ್ಕಾಗದೇ ಪರದಾಡಿದ್ದಾಳಂತೆ. ಇನ್ನು ಇದೇ ಆಗಸ್ಟ್ 27 ರಂದು ಹನಮಯ್ಯ ಮತ್ತು ಅವರ ಕುಟುಂಬದವರು ತಮ್ಮ ಮಗಳ ಮೇಲೆ ದೈಹಿಕ ದೌರ್ಜನ್ಯ ನಡೆಸಿದ್ದಲ್ಲದೇ, ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಅಂತ ಕುಟುಂಬದವರು ಆರೋಪಿಸಿದ್ದಾರೆ.

ಆಗಸ್ಟ್ 27 ರಂದು ಮರಿಯಮ್ಮಳ ಕುಟುಂಬದವರಿಗೆ ಕನಕಗಿರಿ ಪೊಲೀಸರು ಕರೆ ಮಾಡಿ, ನಿಮ್ಮ ಮಗಳು ವಿಷ ಕುಡಿದಿದ್ದಾಳೆ ಬನ್ನಿ ಅಂತ ಹೇಳಿದ್ದರಂತೆ. ಅಷ್ಟರಲ್ಲಿ ಮರಿಯಮ್ಮಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಯುವತಿ ಕುಟುಂಬದವರು, ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 29 ರಂದು ಮರಿಯಮ್ಮ, ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಬಾರದ ಲೋಕಕ್ಕೆ ಹೋಗಿದ್ದಾಳೆ.

ಇದನ್ನೂ ಓದಿ: ಕೊಪ್ಪಳ: ಶಾಲಾ ಮಕ್ಕಳಿದ್ದ ಟಾಟಾ ಏಸ್‌ ಪಲ್ಟಿ, ಮೂವತ್ತು ಮಕ್ಕಳಿಗೆ ಗಾಯ

ಇನ್ನು ಮರಿಯಮ್ಮಳದ್ದು ಆತ್ಮಹತ್ಯೆಯಲ್ಲಾ, ಬದಲಾಗಿ ಕೊಲೆ ಅನ್ನೋದು ಯುವತಿ ಕುಟುಂಬದವರ ಆರೋಪವಾಗಿದೆ. ತಮ್ಮ ಮಗಳಿಗೆ ನಿರಂತರವಾಗಿ ಕೆಳ ಜಾತಿಯವಳು ಅಂತ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಕೆಳ ಜಾತಿಯವಳಾಗಿರುವ ನೀನು ನಮ್ಮ ಮನೆಯಲ್ಲಿ ಬರಬೇಡಾ ಅಂತ ಹೇಳಿ ಸಣ್ಣ ಜೋಪಡಿಯಲ್ಲಿಟ್ಟಿದ್ದರಂತೆ. ಇದೇ ಕಾರಣಕ್ಕೆ ಕೆಲ ತಿಂಗಳ ಹಿಂದೆ ಮರಿಯಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳಂತೆ. ನಂತರ ಎರಡು ಕಡೆ ರಾಜಿ ಪಂಚಾಯತಿ ಮಾಡಲಾಗಿತ್ತು. ನಂತರ ಕೂಡಾ ಹನಮಯ್ಯನ ಕುಟುಂಬದವರು ಕಿರುಕುಳ ನೀಡಿದ್ದಲ್ಲದೆ, ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

ಸದ್ಯ ಮರಿಯಮ್ಮಳ ಸಾವಿನ ಬಗ್ಗೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಮರಣೋತ್ತರ ವರದಿ ಮತ್ತು ತನಿಖೆ ನಂತರವೇ ಮರಿಯಮ್ಮಳದ್ದು ಕೊಲೆಯಾ ಅಥವಾ ಆತ್ಮಹತ್ಯೆಯಾ ಅನ್ನೋದು ಗೊತ್ತಾಗಲಿದೆ. ಆದರೆ ಬಾಳಿ ಬದುಕಬೇಕಿದ್ದ ಯುವತಿ ಮದುವೆಯಾದ ಒಂದೇ ವರ್ಷಕ್ಕೆ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.