ಕೊಪ್ಪಳ: ಕಲ್ಯಾಣಿ ಸ್ಟೀಲ್ ಕಾರ್ಖಾನೆ ಸೀಜ್ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ
ಕೊಪ್ಪಳದ ಕಲ್ಯಾಣಿ ಸ್ಟೀಲ್ಸ್ ಕಾರ್ಖಾನೆಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಮೇರೆಗೆ ಸೀಜ್ ಮಾಡಲಾಗಿದೆ. ನಿರಂತರ ಪರಿಸರ ನಿಯಮ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ವಿದ್ಯುತ್ ಕಡಿತಕ್ಕೆ ಸೂಚಿಸಿದ್ದಾರೆ. ಇದು ಕೊಪ್ಪಳ ಜಿಲ್ಲೆಯಲ್ಲಿ ಮಾಲಿನ್ಯ ನಿಯಂತ್ರಣ ಕಾರ್ಯಾಚರಣೆಯ ಭಾಗವಾಗಿ ಸೀಜ್ ಆದ ನಾಲ್ಕನೇ ಕಾರ್ಖಾನೆಯಾಗಿದೆ. ಜಿಲ್ಲಾಡಳಿತ ಪರಿಸರ ಸಂರಕ್ಷಣೆಗೆ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದೆ.

ಕೊಪ್ಪಳ, ಜು.14: ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿದ್ದ ಕೈಗಾರಿಕೆಗಳಿಗೆ ಜಿಲ್ಲಾಡಳಿತ ಮತ್ತು ಪರಿಸರ ಸಂರಕ್ಷಣಾ ಇಲಾಖೆ ಶಾಕ್ ನೀಡಿದೆ. ಕೊಪ್ಪಳ ತಾಲೂಕಿನ ಗಿಣಿಗೇರಾ ಬಳಿ ಇರುವ ಪ್ರಸಿದ್ಧ ‘ಕಲ್ಯಾಣಿ ಸ್ಟೀಲ್’ (Kalyani Steels) ಕಾರ್ಖಾನೆಯನ್ನು ತಕ್ಷಣವೇ ಸೀಜ್ ಮಾಡುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಕಡಕ್ ಆದೇಶ ಹೊರಡಿಸಿದೆ.
ಕೇಂದ್ರ ಮಂಡಳಿಯ ಈ ಗಂಭೀರ ಆದೇಶ ಹೊರಬೀಳುತ್ತಿದ್ದಂತೆಯೇ ಕಾರ್ಯಪ್ರವೃತ್ತರಾಗಿರುವ ಕೊಪ್ಪಳ ಜಿಲ್ಲಾಧಿಕಾರಿ (DC) ಸುರೇಶ್ ಇಟ್ನಾಳ್ ಅವರು, ಕಾರ್ಖಾನೆಗೆ ನೀಡಲಾಗಿರುವ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಕಲ್ಯಾಣಿ ಸ್ಟೀಲ್ಸ್ ಸಂಸ್ಥೆಯು ನಿರಂತರವಾಗಿ ಉಲ್ಲಂಘಿಸುತ್ತಾ ಬಂದಿರುವುದು ತನಿಖೆಯಲ್ಲಿ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಇಡೀ ಪ್ಲಾಂಟ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಮೊದಲ ಹಂತವಾಗಿ ಪವರ್ ಕಟ್ ಮಾಡಲು ಆದೇಶಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದ ಬೆನ್ನಲ್ಲೇ ಗಿಣಿಗೇರಾ ವ್ಯಾಪ್ತಿಯ ಜೆಸ್ಕಾಂ ಅಧಿಕಾರಿಗಳ ತಂಡ ಕಲ್ಯಾಣಿ ಸ್ಟೀಲ್ ಕಾರ್ಖಾನೆಯ ಆವರಣಕ್ಕೆ ಧಾವಿಸಿದ್ದು, ಕಾರ್ಖಾನೆಗೆ ಸರಬರಾಜಾಗುತ್ತಿದ್ದ ಉನ್ನತ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಪತ್ನಿಯ ಮುಗಿಸಲು ಮಚ್ಚು ಹಿಡಿದು ಅಟ್ಟಾಡಿಸಿದ ಪಿಎಸ್ಐ ಭೈರಪ್ಪ ಅರೆಸ್ಟ್
ಕೊಪ್ಪಳದಲ್ಲಿ ಸೀಜ್ ಆಗುತ್ತಿರುವ 4ನೇ ಕಾರ್ಖಾನೆ:
ಕೊಪ್ಪಳ ಜಿಲ್ಲೆಯಲ್ಲಿ ಪರಿಸರ ಮಾಲಿನ್ಯ ಉಂಟುಮಾಡುವ ಮತ್ತು ನಿಯಮಗಳನ್ನು ಪಾಲಿಸದ ಉದ್ಯಮಗಳ ವಿರುದ್ಧ ಜಿಲ್ಲಾಡಳಿತ ಹಮ್ಮಿಕೊಂಡಿರುವ ಬೃಹತ್ ಆಪರೇಷನ್ನಲ್ಲಿ ಸೀಜ್ ಆಗುತ್ತಿರುವ ನಾಲ್ಕನೇ ಪ್ರಮುಖ ಕಾರ್ಖಾನೆ ಇದಾಗಿದೆ. ಈ ಹಿಂದೆ ಜಿಲ್ಲಾಡಳಿತವು ಪರಿಸರ ಮಲಿನಗೊಳಿಸಿದ ಆರೋಪದ ಮೇಲೆ ಹೊಸಪೇಟೆ ಇಸ್ಪಾತ್ ಮತ್ತು ಪಿಬಿಎಸ್ 1 (PBS 1) ಸೇರಿದಂತೆ ಪ್ರಮುಖ ಕಾರ್ಖಾನೆಗಳಿಗೆ ಬೀಗ ಜಡಿದು ಬಂದ್ ಮಾಡಿಸಿತ್ತು. ಇದೀಗ ಅದೇ ದಾರಿಯಲ್ಲಿ ಪರಿಸರ ನಿಯಮಗಳನ್ನು ಗಾಳಿಗೆ ತೂರಿ ದರ್ಬಾರ್ ನಡೆಸುತ್ತಿದ್ದ ಕಲ್ಯಾಣಿ ಸ್ಟೀಲ್ಸ್ ಸರದಿಯಾಗಿದ್ದು, ಕಾರ್ಖಾನೆಗೆ ಕಂಪ್ಲೀಟ್ ಬೀಗ ಬೀಳುವುದು ಖಚಿತವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



