ಮದುವೆಯಾಗೋದಾಗಿ ನಂಬಿಸಿ ಗರ್ಭಿಣಿ ಮಾಡಿ ಯುವತಿಗೆ ಕೈಕೊಟ್ಟ ವಿವಾಹಿತ: ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ
ಯುವತಿಗೆ ಮದುವೆ ಭರವಸೆ ನೀಡಿ, ಆಕೆಯನ್ನು ಗರ್ಭಿಣಿಯಾಗಿಸಿ ಬಳಿಕ ವಂಚನೆ ಮಾಡಿರುವ ಆರೋಪ ವಿವಾಹಿತ ವ್ಯಕ್ತಿಯೋರ್ವನ ಮೇಲೆ ಕೊಪ್ಪಳದ ಹೊಸೂರಿನಲ್ಲಿ ಕೇಳಿಬಂದಿದೆ. ಸಂತ್ರಸ್ತೆ ಗರ್ಭಿಣಿಯಾದ ಬಳಿಕ ಆರೋಪಿ ಕೈಕೊಟ್ಟಿದ್ದು, ಯುವತಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ. ಹುಟ್ಟುವ ಮಗುವಿಗೆ ತಂದೆಯ ಅಗತ್ಯವಿದ್ದು, ಕುಟುಂಬಸ್ಥರು ಕೂಡ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಕೊಪ್ಪಳ, ಮೇ 02: ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ದೈಹಿಕ ಸಂಪರ್ಕವನ್ನೂ ಬೆಳೆಸಿ ಆಕೆ ಗರ್ಭಿಣಿಯಾದ ಬಳಿಕ ವ್ಯಕ್ತಿಯೋರ್ವ ಕೈಕೊಟ್ಟ ಆರೋಪ ಕೊಪ್ಪಳ ತಾಲೂಕಿನ ಹೊಸೂರು ಗ್ರಾಮದಲ್ಲಿ ಕೇಳಿಬಂದಿದೆ. 28 ವರ್ಷದ ಯುವತಿಗೆ 48 ವರ್ಷದ ವೀರಪ್ಪ ಎಂಬಾತ ವಂಚನೆ ಮಾಡಿದ್ದಾನೆ. ತನಗೆ ನ್ಯಾಯ ಬೇಕು, ಹುಟ್ಟುವ ಮಗುವಿಗೆ ಅಪ್ಪ ಬೇಕು ಎಂದು ಆಗ್ರಹಿಸಿ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹೀಗಿದ್ದರೂ ಆರೋಪಿ ಮದುವೆಗೆ ನಿರಾಕರಿಸುತ್ತಿದ್ದಾನೆ ಎನ್ನಲಾಗಿದೆ.
ಪತ್ನಿಯಿದ್ದರೂ ಸಂತ್ರಸ್ತ ಯುವತಿಯ ಜೊತೆಗೆ ಆರೋಪಿ ಸಂಬಂಧ ಇಟ್ಟುಕೊಂಡಿದ್ದ. ಬಳಿಕ ಇವರಿಬ್ಬರ ವಿಷಯ ಗ್ರಾಮಸ್ಥರಿಗೆ ಗೊತ್ತಾಗಿತ್ತು. ಇಬ್ಬರನ್ನೂ ಹೊಸೂರಿನ ಗ್ರಾಮಸ್ಥರು ದೂರ ಮಾಡಿದ್ದರು. ಆದ್ರೆ ಪತ್ನಿ ತೀರಿಕೊಂಡ ಬಳಿಕ ವೀರಪ್ಪ ಮತ್ತೆ ಸಂತ್ರಸ್ತೆಯ ಸ್ನೇಹ ಬೆಳೆಸಿದ್ದ. ಆಕೆಗೆ ಬೆದರಿಕೆ ಹಾಕಿ ಮತ್ತೆ ದೈಹಿಕ ಸಂಪರ್ಕ ಬೆಳೆಸಿದ್ದ. ಯುವತಿ ಸದ್ಯ ಐದು ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗು ಎಂದು ಕೇಳಿದರೆ ವೀರಪ್ಪ ಹಿಂದೇಟು ಹಾಕಿದ್ದಾನೆ. ಈಗ ಮದುವೆ ಆಗಲ್ಲ ಎಂದು ಆತ ಉಲ್ಟಾ ಹೊಡೆದ ಕಾರಣ ಸಂತ್ರಸ್ತೆ ಮಹಿಳಾ ಠಾಣೆ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿ: ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜತೆ ಸಂಸಾರ; ಇದೇನಿದು ವಿದ್ಯೆ ಕಲಿಸುವ ಗುರುವಿನ ಆಟ?
ನ್ಯಾಯಕ್ಕಾಗಿ ಆಗ್ರಹ
ಇನ್ನು ಸಂತ್ರಸ್ತೆ ಮಾತ್ರವಲ್ಲದೆ ಆಕೆಯ ಕುಟುಂಬಸ್ಥರು ಕೂಡ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಆರೋಪಿ ವೀರಪ್ಪನೊಂದಿಗೆ ತನ್ನ ಮದುವೆ ಮಾಡಿಸಿ ಎಂದು ಸಂತ್ರಸ್ತೆ ಅಂಗಲಾಚುತ್ತಿದ್ದಾಳೆ. ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕೆಯ ಸಹೋದರ, ಹುಟ್ಟುವ ಮಗುವಿಗೆ ಅಪ್ಪ ಬೇಕು. ಹೀಗಾಗಿ ಸಹೋದರಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ. ವೀರಪ್ಪ ಮದುವೆಯಾಗುವುದಾಗಿ ಆಕೆಯನ್ನು ನಂಬಿಸಿದ್ದ ಕಾರಣ ಗರ್ಭಿಣಿ ಎಂಬ ವಿಚಾರವನ್ನು ಆಕೆ ತಿಳಿಸಿರಲಿಲ್ಲ. ಆದರೆ ಇತ್ತೀಚೆಗೆ ನಡೆದ ಸಹೋದರನ ಮದುವೆ ಸಂದರ್ಭ ಈ ವಿಚಾರ ಬಯಲಾಗಿದೆ. ಸಹೋದರಿಯನ್ನು ನಂಬಿಸಿ ವೀರಪ್ಪ ಮೋಸ ಮಾಡಿರೋದು ಗೊತ್ತಾದ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



