ಅಭಿವೃದ್ಧಿಗೆ ಹಣವಿಲ್ಲ, ಸಿಎಂ ಹಿಂದೆ ಇರುವುದಕ್ಕೆ ನನಗೆ ಹಣ ಬಂದಿದೆ: ಸತ್ಯ ಒಪ್ಪಿಕೊಂಡ ಆರ್ಥಿಕ ಸಲಹೆಗಾರ ರಾಯರೆಡ್ಡಿ

| Updated By: ರಮೇಶ್ ಬಿ. ಜವಳಗೇರಾ

Updated on: Jul 11, 2024 | 7:06 PM

ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳು ಜಾರಿಗೆಯಾಗಿ ಒಂದು ವರ್ಷ ಕಳೆದಿದೆ.‌ ಆರ್ಥಿಕ‌ ಸಂಕಷ್ಟದ ನಡುವೆಯೂ ಸಿದ್ದರಾಮಯ್ಯ ಸರ್ಕಾರ ನಾನಾ ಮಾರ್ಗಗಳಿಂದ ಗೃಹ ಜ್ಯೋತಿ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಗಳಿಗೆ ಹಣ ಹೊಂದಿಸಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಆದ್ರೆ, ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹೊಡೆತ ಬಿದ್ದಿದೆ ಎನ್ನುವುದು ಸಾಬೀತಾಗಿದೆ. ಇದಕ್ಕೆ ಪೂರಕವೆಂಬಂತೆ ಸ್ವತಃ ಸಿಎಂ ಆರ್ಥಿಕ ಸಲಹೆಗಾರ, ಕಾಂಗ್ರೆಸ್ ಹಿರಿಯ ಶಾಸಕ ಒಪ್ಪಿಕೊಂಡಿದ್ದಾರೆ.

ಅಭಿವೃದ್ಧಿಗೆ  ಹಣವಿಲ್ಲ, ಸಿಎಂ ಹಿಂದೆ ಇರುವುದಕ್ಕೆ ನನಗೆ ಹಣ ಬಂದಿದೆ: ಸತ್ಯ ಒಪ್ಪಿಕೊಂಡ ಆರ್ಥಿಕ ಸಲಹೆಗಾರ ರಾಯರೆಡ್ಡಿ
ಬಸವರಾಜ್ ರಾಯರೆಡ್ಡಿ
Follow us on

ಕೊಪ್ಪಳ, (ಜುಲೈ 11): ಜಾರಿಗೆ ತಂದಿರುವ ಪಂಚ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರ ಕಸರತ್ತು ನಡೆಸಿದೆ. ವಿವಿಧ ಮೂಲಗಳಿಂದ ಹಣ ಹೊಂದಿಸಿ ಗ್ಯಾರಂಟಿಗೆ ಹಾಕಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಿಪಕ್ಷ ಬಿಜೆಪಿ ಆರೋಪಿಸುತ್ತಿದೆ. ಇದೀಗ ಇದು ನಿಜ ಎನಿಸಿದೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಅವರೇ ಒಪ್ಪಿಕೊಂಡಿದ್ದಾರೆ. ಇಂದು ಕೊಪ್ಪಳದಲ್ಲಿ ಮಾತನಾಡಿರು ಅವರು, ಹೆಚ್ಚಿನ ಅನುದಾನವನ್ನು ಗ್ಯಾರಂಟಿ ಯೋಜನೆಗಳು ಮುಚ್ಚಿಬಿಟ್ಟಿವೆ. ತುಂಬಾ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಹಣ ಕೇಳುತ್ತಿದ್ದಾರೆ. ಆದ್ರೆ ಹಣವಿಲ್ಲ ಎಂದು ವಾಸ್ತವ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಮಾತನಾಡಿದ ರಾಯರೆಡ್ಡಿ, ಕರ್ನಾಟಕದಲ್ಲಿ ಹೆಚ್ಚಿನ ಅನುಧಾನವನ್ನು ಗ್ಯಾರಂಟಿ ಯೋಜನೆಗಳೆ ಮುಚ್ಚಿಬಿಟ್ಟಿವೆ. ಪ್ರತಿವರ್ಷ ಆರವತ್ತರಿಂದ ಆರವತ್ತೈದು ಸಾವಿರ ಕೋಟಿ ಅವುಗಳಿಗೆ ನೀಡಬೇಕಾಗಿದೆ. ಹೀಗಾಗಿ ಅಭಿವೃದ್ದಿ ಕೆಲಸಗಳಿಗೆ ಹಣ ಇಲ್ಲದಂತಾಗುತ್ತಿದೆ. ರಾಜ್ಯದಲ್ಲಿ ಅನೇಕರು ಕೆಲಸ ಮಾಡಬೇಕು ಅಂತ ಅಂದುಕೊಂಡ್ರು ಕೂಡಾ ಅನುದಾನ ಸಿಗುತ್ತಿಲ್ಲ. ನನಗೆ ಅನುದಾನ ಸಿಕ್ಕಿದೆ. ನಾನು ಸಿಎಂ ಆರ್ಥಿಕ ಸಲಹೆಗಾರ ಆಗಿರುವುದಿರಂದ ಪ್ರತಿದಿನ ಸಿಎಂ ಜೊತೆ ಇರುವುದರಿಂದ ನನಗೆ ಮಾತ್ರ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಸಿಕ್ಕಿದೆ ಎಂದಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗೆ SCSP-TSP ಹಣ ಬಳಕೆ: ವರದಿ ಕೇಳಿದ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ

ಈ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಹಣವಿಲ್ಲ. ಇರುವ ಹಣ ಗ್ಯಾರಂಟಿಗಳಿಗೆ ವಿನಿಯೋಗ ಮಾಡಿಕೊಳ್ಳುವಂತಾಗಿದೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಇದೀಗ ಬಸವರಾಜ್ ರಾಯರೆಡ್ಡಿ ಅವರ ಈ ಹೇಳಿಕೆಯಿಂದ ವಿಪಕ್ಷಗಳ ಆರೋಪಗಳು ಸತ್ಯವಾಗಿದೆ ಎನಿಸಿದೆ.

ಈ ಗ್ಯಾರಂಟಿ ಯೋಜನೆಗಳ ಸಂಬಂಧ ವಿಪಕ್ಷಗಳಾದ ಜಿಡಿಎಸ್ ಮತ್ತು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಜನರಿಗೆ ಎಲ್ಲಾ ಉಚಿತವಾಗಿ ಕೊಟ್ಟು ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಲಾಗುತ್ತಿದೆ. ಅಲ್ಲದೇ ವಿವಿಧ ಇಲಾಖೆಯ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಡುವ ಅನುದಾನವನ್ನು ಈ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಶಾಸಕರಿಗೂ ಅನುದಾನ ನೀಡುತ್ತಿಲ್ಲ. ಒಂದು ವರ್ಷದಲ್ಲಿ ಯಾವುದೇ ಶಂಕು ಸ್ಥಾಪನೆ, ಗುದ್ದಲಿ ಪೂಜೆಗಳು ಸಹ ನಡೆದಿಲ್ಲ ಎಂದು ಹೀಗೆ ಹಲವು ರೀತಿಯಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇದರ ಮಧ್ಯ ಇದೀಗ ಬಸವರಾಜ ರಾಯರೆಡ್ಡಿ ಅವರ ಬಾಯಿಂದಲೇ ಸತ್ಯ ಆಚೆ ಬಂದಿದೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ SCP,TSP ಅನುದಾನ ಬಳಕೆ

ಕರ್ನಾಟಕ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಮತ್ತು ಬುಡಕಟ್ಟು ಉಪ ಯೋಜನೆ (TSP) ಅಡಿಯಲ್ಲಿ ನಿಗದಿಪಡಿಸಿದ ಹಣವನ್ನು ಬಳಸಿಕೊಳ್ಳಲು ನಿರ್ಧರಿಸಿದೆ ಎಂಬ‌ ಮಾಹಿತಿ ಇದೆ. ಕರ್ನಾಟಕ ಸರ್ಕಾರವು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಂಚಿಕೆಯಿಂದ ಗ್ಯಾರಂಟಿ ಯೋಜನೆಗಳಿಗೆ ಯೋಜನೆಗಳಿಗೆ 14,730.53 ಕೋಟಿ ರೂ ಬಳಸಿಕೊಳ್ಳಲು ತೀರ್ಮಾನ ತೆಗೆದುಕೊಂಡಿದೆ.

ಸರ್ಕಾರದ ಗ್ಯಾರಂಟಿ ಯೋಜನೆಗೆ ಎಸ್​ಸಿಎಸ್​ಪಿ, ಟಿಎಸ್​​​ಪಿ (SCSP, TSP) ಹಣ ಬಳಕೆ ವಿಚಾರವಾಗಿ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ನೋಟಿಸ್ ಜಾರಿ ಮಾಡಿದೆ. ಇನ್ನು ಎಸ್​ಸಿ ಎಸ್​ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದಕ್ಕೆ ವಿಪಕ್ಷಗಳಾದ ಜೆಡಿಎಸ್​ ಮತ್ತು ಬಿಜೆಪಿ ಸಿಡಿದೆದ್ದು, ಇದನ್ನು ವಿರೋಧಿಸಿ ಪ್ರತಿಭಟನೆಗೆ ಸಜ್ಜಾಗಿವೆ. ಇದೇ ಜುಲೈ 15ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದು, ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ