ಹಡೆದವ್ವ ಸಾವಿನ ನೋವಿನಲ್ಲೂ ಬಂದು SSLC ಪರೀಕ್ಷೆ ಬರೆದ ವಿದ್ಯಾರ್ಥಿ..!
ಜನ್ಮ ನೀಡಿದ ಹಡೆದವ್ವ ಪ್ರೀತಿ, ಮಮತೆಗೆ ಬೆಲೆ ಕಟ್ಟಲಾಗದು. ಮಕ್ಕಳ ವಿಚಾರಕ್ಕೆ ಬಂದರೆ ಎಂಥಹ ತ್ಯಾಗಕ್ಕಾದರೂ ತಾಯಿ ಸಿದ್ಧಳಿರುತ್ತಾಳೆ. ಹೀಗಿರುವಾಗ ಇನ್ಮುಂದೆ ಆಕೆ ಕಣ್ಣು ಮುಂದೆ ಇರುವುದಿಲ್ಲ. ತಾಯಿಯನ್ನು ನೋಡಲಾಗದು, ಮುಂದೆ ಆಕೆಯೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದಾಗ ಕರುಳಿನ ಕುಡಿ ಮನಸ್ಸಿಗೆ ಹೇಗಾಗಿರಬೇಡ. ಆ ನೋವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆದರೂ ಸಹ ಮಗ ತಾಯಿ ಅಗಲಿಕೆಯ ನೋವಿನ ಮಧ್ಯೆಯೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾನೆ.

ಕೊಪ್ಪಳ, (ಮಾರ್ಚ್ 21): ಹೆತ್ತ ತಾಯಿ-ತಂದೆ ಇನ್ನಿಲ್ಲ ಎಂದಾಕ್ಷಣ ಮಕ್ಕಳಿಗೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಹಲವು ವರ್ಷಗಳ ಕಾಲ ಬೆಳೆಸಿ ಏಕಾಏಕಿ ಬಿಟ್ಟು ಹೋಗುತ್ತಾರೆ ಅಂದ್ರೆ ಆಗುವ ನೋವು ಅಷ್ಟಿಷ್ಟಲ್ಲ. ಅದರಂತೆ ಕೊಪ್ಪಳದಲ್ಲಿ ವಿದ್ಯಾರ್ಥಿಯೋರ್ವ ತಾಯಿಯನ್ನು ಕಳೆದುಕೊಂಡ ನೋವಿನಲ್ಲೂ ಇಂದು (ಮಾರ್ಚ್ 21) ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾನೆ. ಹೌದು…ಕೊಪ್ಪಳ (Koppal) ಜಿಲ್ಲೆ ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಅಡಿವಯ್ಯ ಸ್ವಾಮಿ, ತಾಯಿ ಸಾವಿನ ದುಃಖದಲ್ಲೂ ಹೋಗಿ ಪರೀಕ್ಷೆ ಬರೆದಿದ್ದಾನೆ. ಬಳಿಕ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾನೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇರೂರಿನ ಅಡಿವಯ್ಯ ಸ್ವಾಮಿ, ಕೇಸರಹಟ್ಟಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದ. ಇಂದು (ಮಾರ್ಚ್ 21) ಬೆಳಗ್ಗೆ ಇನ್ನೇನು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕು ಎನ್ನುವರಷ್ಟರಲ್ಲಿ ಅಡಿವೆಯ್ಯ ಸ್ವಾಮಿ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ (38) ಶುಕ್ರವಾರ ಬೆಳಗಿನ ಸಮಯದಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇತ್ತ ಪರೀಕ್ಷೆಗೆ ಸಿದ್ಧವಾಗಿದ್ದ ಅಡಿವೆಯ್ಯ ಸ್ವಾಮಿಗೆ ತಾಯಿ ನಿಧನದ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಆದರೂ ಸಹ ತಾಯಿಯ ಅಗಲಿಕೆಯ ಸುದ್ದಿಯ ಮಧ್ಯೆಯೂ ಧೃತಿಗೆಡದ ವಿದ್ಯಾರ್ಥಿ, ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆದಿದ್ದಾನೆ.
ಇದನ್ನೂ ಓದಿ: ಅಜ್ಜಿ ಮೃತದೇಹಕ್ಕೆ ಪೂಜೆ ಸಲ್ಲಿಸಿ ದುಃಖದಲ್ಲಿಯೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ
ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ವಿದ್ಯಾರ್ಥಿ ಅಡಿವೆಯ್ಯ ಸ್ವಾಮಿ ಮನೆಗೆ ಶಿಕ್ಷಕರು ಭೇಟಿ ಸಾಂತ್ವಾನ ಹೇಳಿದರು. ಬಳಿಕ ಅಡಿವೆಯ್ಯ ಸ್ವಾಮಿಗೆ ಧೈರ್ಯ ತುಂಬಿ ಪರೀಕ್ಷಾ ಕೇಂದ್ರದವರೆಗೆ ಕರೆದೊಯ್ಯಲು ನೆರವಾದರು.ಇನ್ನು ಮನೆಯಲ್ಲಿ ತಾಯಿ ಸಾವನ್ನಪ್ಪಿದ್ದರೆ ಇತ್ತ ಪುತ್ರ ಅಡಿವೆಯ್ಯ ಸ್ವಾಮಿ ತಾಯಿ ಕಳೆದುಕೊಂಡ ನೋವಿನಲ್ಲಿ ಪರೀಕ್ಷೆ ಬರೆದಿದ್ದಾನೆ. ಬಳಿಕ ಅಡಿವೆಯ್ಯ ಸ್ವಾಮಿ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ ವಿಧಿವಿಧಾನ ನೆರವೇರಿಸಿದ್ದಾನೆ.
ವಿದ್ಯಾರ್ಥಿ ತಾಯಿ ವಿಜಯಲಕ್ಷ್ಮಿ ಕಳೆದ ಕೆಲ ದಿನಗಳ ಹಿಂದೆ ಸ್ನಾನದ ಕೋಣೆಯಲ್ಲಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ಪರಿಣಾಮ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ವಿಜಯಲಕ್ಷ್ಮಿ ಸಾವನ್ನಪ್ಪಿದ್ದಾರೆ. ಆದರೂ ಸಹ ಅಡಿವೆಪ್ಪ ಸ್ವಾಮಿ ಪರೀಕ್ಷೆಗೆ ಹಾಜರಾಗಿ ನಂತರ ತಾಯಿಯ ಅಂತಿಮ ದರ್ಶನ ಪಡೆದು, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾನೆ.
Published On - 9:19 pm, Fri, 21 March 25