ತುಂಗಭದ್ರಾದ ಹೊಸ ಕ್ರಸ್ಟ್‌ಗೇಟ್‌ಗಳ ಲೋಕಾರ್ಪಣೆ: ಜೂ 25ರಂದು ಶಾಲೆಗಳಿಗೆ ರಜೆ ಘೋಷಣೆ

Koppal News: ಕೊಪ್ಪಳ ನಾಳೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. 51 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್‌ಗೇಟ್‌ಗಳ ಲೋಕಾರ್ಪಣೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಲಾಗಿದೆ. ಬೃಹತ್​ ವೇದಿಕೆ ಕೂಡ ಸಜ್ಜಾಗಿದೆ. ಇನ್ನು ಮುನಿರಾಬಾದ್‌ನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ತುಂಗಭದ್ರಾದ ಹೊಸ ಕ್ರಸ್ಟ್‌ಗೇಟ್‌ಗಳ ಲೋಕಾರ್ಪಣೆ: ಜೂ 25ರಂದು ಶಾಲೆಗಳಿಗೆ ರಜೆ ಘೋಷಣೆ
ತುಂಗಭದ್ರಾ ಡ್ಯಾಮ್
Image Credit source: tv9 kannada
Edited By:

Updated on: Jun 24, 2026 | 5:29 PM

ಮುಖ್ಯಾಂಶಗಳು

  • ನಾಳೆ ತುಂಗಭದ್ರಾ ಡ್ಯಾಮ್​ನ ನೂತನ ಕ್ರಸ್ಟ್‌ಗೇಟ್‌ಗಳ ಲೋಕಾರ್ಪಣೆ
  • ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆ ಘೋಷಣೆ
  • ದಕ್ಷಿಣ ಭಾರತದ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಮಾಗಮ

ಕೊಪ್ಪಳ, ಜೂನ್​​ 24: ಕರ್ನಾಟಕ ಸೇರಿದಂತೆ ನೆರೆಯ ಮೂರು ರಾಜ್ಯಗಳ ರೈತರ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯಕ್ಕೀಗ (Tungabhadra Dam) ಹೊಸ ಕಳೆ ಬಂದಿದೆ. ಕ್ರಸ್ಟ್ ಗೇಟ್ ದುರಂತಕ್ಕೆ ಇದೀಗ ಶಾಶ್ವತ ಮುಕ್ತಿ ಸಿಕ್ಕಿದ್ದು, ಜೂನ್​​ 25ರಂದು ನೂತನ 33 ಕ್ರಸ್ಟ್​ ಗೇಟ್‌ಗಳ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆ ಕೊಪ್ಪಳ ತಾಲೂಕಿನ ಮುನಿರಾಬಾದ್​​ನಲ್ಲಿ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ನಾಳೆ ರಜೆ (holiday) ಘೋಷಿಸಲಾಗಿದೆ.

ಬೃಹತ್ ವೇದಿಕೆ ಸಿದ್ಧ

ನಾಳೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್​ ಗೇಟ್‌ಗಳು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಮಹಾ ಕಾರ್ಯಕ್ರಮಕ್ಕಾಗಿ ಕೊಪ್ಪಳ ತಾಲೂಕಿನ ಮುನಿರಾಬಾದ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜರ್ಮನ್ ಮಾದರಿಯಲ್ಲಿ ಬೃಹತ್ ಹವಾಮಾನ ನಿಯಂತ್ರಿತ ಟೆಂಟ್ ಅಳವಡಿಸಲಾಗಿದ್ದು, ವಿಐಪಿಗಳಿಗಾಗಿ ಹೈಟೆಕ್ ವೇದಿಕೆ ಸಜ್ಜಾಗಿದೆ.

ಇದನ್ನೂ ಓದಿ: ರೈತರಿಗೆ ಖುಷಿ ಸುದ್ದಿ: ಜೂ 25ಕ್ಕೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ

ಈಗಾಗಲೇ ನೆರೆಯ ರಾಜ್ಯ ಆಂಧ್ರ ಹಾಗೂ ತೆಲಂಗಾಣ ಸಿಎಂಗಳಿಗೆ ಬಸವರಾಜ್ ರಾಯರೆಡ್ಡಿ ನೇತೃತ್ವದ ನಿಯೋಗ ಖುದ್ದು ಭೇಟಿ ಮಾಡಿ ಆಹ್ವಾನ ನೀಡಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನೀರಿಕ್ಷೆ ಇದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ.

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬರುವುದು ಖಚಿತ

ಇನ್ನು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು ಸಾಕ್ಷಿಯಾಗುತ್ತಿದ್ದಾರೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬರುವುದು ಖಚಿತವಾಗಿದೆ. ಇಂದು ಅಧಿಕೃತ ಪ್ರವಾಸ ಪಟ್ಟಿ ಬಿಡುಗಡೆ ಆಗಿದೆ. ನಾಳೆ ಬೆಳಿಗ್ಗೆ 9.40ಕ್ಕೆ ಮುನಿರಾಬಾದ್​ಗೆ ಆಗಮಿಸಲಿದ್ದಾರೆ. 10 ಗಂಟೆಗೆ ಟಿಬಿ ಡ್ಯಾಂಗೆ ಭೇಟಿ ನೀಡಿ ಗೇಟ್​ಗಳ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಯವರೆಗೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಬಳಿಕ ಆಂಧ್ರಪ್ರದೇಶಕ್ಕೆ ಪ್ರಯಾಣ ಬೆಳಸಲಿದ್ದಾರೆ.

ಘಟನೆ ಹಿನ್ನೆಲೆ 

ಕಳೆದ 2024ರ ಡಿಸೆಂಬರ್ ತಿಂಗಳ ಆ ಕರಾಳ ದಿನಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗುವ ಮೂಲಕ ಲಕ್ಷಾಂತರ ಕ್ಯೂಸೆಕ್ ನೀರು ನದಿಗೆ ಹರಿದು ಹೋಗಿತ್ತು. ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರದ ರೈತರು ಕಣ್ಣೀರು ಹಾಕಿದ್ದರು. ಆದರೆ, ರಾಜ್ಯ ಸರ್ಕಾರ ಈ ಸವಾಲನ್ನು ಗಂಭೀರವಾಗಿ ಸ್ವೀಕರಿಸಿತು. ಕೇವಲ ಒಂದು ಗೇಟ್ ರಿಪೇರಿ ಮಾಡುವುದರ ಬದಲಾಗಿ, ಭವಿಷ್ಯದ ದೃಷ್ಟಿಯಿಂದ ಇಡೀ ಡ್ಯಾಂನ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನೇ ಬದಲಾಯಿಸಲು ಮಾಸ್ಟರ್ ಪ್ಲ್ಯಾನ್​ ಮಾಡಿತ್ತು. ಇದೀಗ ಬರೋಬ್ಬರಿ 51 ಕೋಟಿ ರೂ ವೆಚ್ಚದಲ್ಲಿ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us