KPSC ಪರೀಕ್ಷೆ ಅಕ್ರಮ, ಒಂದೇ ಕೊಠಡಿಯಲ್ಲಿದ್ದ 15 ಮಂದಿ ಪಾಸ್! ಕೆಎಎಸ್ ಮುಖ್ಯಪರೀಕ್ಷೆ ಫಲಿತಾಂಶದ ಬಗ್ಗೆಯೇ ಹತ್ತಾರು ಸಂಶಯ

ಕೆಪಿಎಸ್‌ಸಿ ಕೆಎಎಸ್ ಮುಖ್ಯಪರೀಕ್ಷಾ ಫಲಿತಾಂಶದಲ್ಲಿ ಭಾರೀ ಅಕ್ರಮ ಆರೋಪ ಕೇಳಿಬಂದಿದೆ. ಒಂದೇ ಪರೀಕ್ಷಾ ಕೊಠಡಿಯಿಂದ 15 ಅಭ್ಯರ್ಥಿಗಳು ಆಯ್ಕೆಯಾಗಿರುವುದು ವ್ಯಾಪಕ ಸಂಶಯಕ್ಕೆ ಕಾರಣವಾಗಿದ್ದು, ಕುಟುಂಬಸ್ಥರು, ಅಕ್ಕಪಕ್ಕದವರು ಪಾಸ್ ಆಗಿರುವ ಬಗ್ಗೆಯೂ ದೂರುಗಳಿವೆ. ಈ ಹಗರಣದಲ್ಲಿ ಸಾವಿರ ಕೋಟಿ ರೂಪಾಯಿ ವರೆಗಿನ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹ ವ್ಯಕ್ತವಾಗಿದೆ.

KPSC ಪರೀಕ್ಷೆ ಅಕ್ರಮ, ಒಂದೇ ಕೊಠಡಿಯಲ್ಲಿದ್ದ 15 ಮಂದಿ ಪಾಸ್! ಕೆಎಎಸ್ ಮುಖ್ಯಪರೀಕ್ಷೆ ಫಲಿತಾಂಶದ ಬಗ್ಗೆಯೇ ಹತ್ತಾರು ಸಂಶಯ
ಸಾಂದರ್ಭಿಕ ಚಿತ್ರ
Image Credit source: tv9
Edited By:

Updated on: Mar 06, 2026 | 6:43 AM

ಬೆಂಗಳೂರು, ಮಾರ್ಚ್ 6: ಕರ್ನಾಟಕ (Karnataka) ಲೋಕಸೇವಾ ಆಯೋಗ (KPSC) ನಡೆಸಿದ ಕೆಎಎಸ್ (KAS) ಮುಖ್ಯಪರೀಕ್ಷೆಯ ಫಲಿತಾಂಶದ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಆರೋಪದ ನಡುವೆ, ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಅಭ್ಯರ್ಥಿಗಳು ಪಾಸಾಗಿ ಸಂದರ್ಶನಕ್ಕೆ ಆಯ್ಕೆಯಾಗಿರುವುದು ವ್ಯಾಪಕ ಸಂಶಯಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾವಿರ ಕೋಟಿ ರೂಪಾಯಿ ಮಟ್ಟದ ಹಗರಣ ನಡೆದಿರಬಹುದು ಎಂಬ ಆರೋಪವನ್ನು ಕೆಲ ಅಭ್ಯರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಮಾಡಿವೆ.

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ್ ಮಾತನಾಡಿ, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಕೆಪಿಎಸ್‌ಸಿ ಅಧ್ಯಕ್ಷರು, ಕೆಲವು ಅಧಿಕಾರಿಗಳು, ರಾಜ್ಯದ ಕೆಲ ಸಚಿವರು ಹಾಗೂ ಶಾಸಕರು ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಫಲಿತಾಂಶದ ಬಗ್ಗೆ ಸಂಶಯ ಏಕೆ?

ಕೆಎಎಸ್ ಮುಖ್ಯಪರೀಕ್ಷೆಯ ಫಲಿತಾಂಶದ ಕುರಿತು ಹಲವು ಅಂಶಗಳು ಅನುಮಾನಗಳಿಗೆ ಕಾರಣವಾಗಿವೆ. ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿರುವುದು ಮೊದಲ ಸಂಶಯವಾಗಿದೆ. ಇದಲ್ಲದೆ, ಅಕ್ಕಪಕ್ಕದ ಕ್ರಮ ಸಂಖ್ಯೆಯ ಅಭ್ಯರ್ಥಿಗಳು ಮುಖ್ಯಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ.

ಇದರ ಜೊತೆಗೆ ಒಂದೇ ಕುಟುಂಬದ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿರುವುದು, ಸಹೋದರ-ಸಹೋದರಿಯರು ಅಂತಿಮ ಹಂತಕ್ಕೆ ತಲುಪಿರುವುದು, ಆಯ್ಕೆಯಾದ ಒಬ್ಬ ಅಭ್ಯರ್ಥಿಯ ತಾಯಿ ಕೆಎಎಸ್ ಅಧಿಕಾರಿಯಾಗಿರುವುದು ಮುಂತಾದ ವಿಚಾರಗಳು ಚರ್ಚೆಗೆ ಕಾರಣವಾಗಿವೆ. ಇನ್ನೂ ಒಂದೇ ಹಳ್ಳಿಯ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿರುವುದು ಮತ್ತು ಕೆಪಿಎಸ್‌ಸಿ ಅಧ್ಯಕ್ಷರ ಪರಿಚಯದವರು ಆಯ್ಕೆಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಆಂತರಿಕ ತನಿಖೆ ಆರಂಭಿಸಿದ ಕೆಪಿಎಸ್‌ಸಿ

ಈ ಆರೋಪಗಳು ಹೊರಬಿದ್ದ ತಕ್ಷಣ ಕೆಪಿಎಸ್‌ಸಿ ಆಂತರಿಕ ತನಿಖೆಗೆ ಮುಂದಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ, ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂಬುದಾಗಿ ಪ್ರಾಥಮಿಕ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಯಾರಾದರೂ ಅಭ್ಯರ್ಥಿಗಳ ಬಳಿ ಸಾಕ್ಷ್ಯಗಳಿದ್ದರೆ ಅವನ್ನು ನೀಡುವಂತೆ ಅವರು ಮನವಿ ಮಾಡಿದ್ದಾರೆ.

ರಾಜಕೀಯ ವಾಗ್ವಾದ

ಈ ವಿಚಾರ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೆಪಿಎಸ್‌ಸಿಯಲ್ಲಿ ನಿರಂತರವಾಗಿ ಅಕ್ರಮ ಆರೋಪಗಳು ಕೇಳಿಬರುತ್ತಿರುವುದರಿಂದ ಆಯೋಗವನ್ನೇ ಮುಚ್ಚುವುದು ಒಳ್ಳೆಯದು ಎಂದು ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ಈ ಕುರಿತು ಕೆಪಿಎಸ್‌ಸಿ ಅಧ್ಯಕ್ಷರು ಸ್ಪಷ್ಟನೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಪಿಎಸ್​ಸಿ ವಿರುದ್ಧ ಮತ್ತೆ ಅಕ್ರಮ ಆರೋಪ: ಧ್ವನಿ ಎತ್ತಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ಕೆಪಿಎಸ್​ಸಿ

ಒಟ್ಟಾರೆ, ಕೆಎಎಸ್ ಮುಖ್ಯಪರೀಕ್ಷೆಯ ಫಲಿತಾಂಶದ ಬಗ್ಗೆ ಎದ್ದಿರುವ ಆರೋಪಗಳು ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಅಭ್ಯರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us