
ಬೆಂಗಳೂರು, (ಸೆಪ್ಟೆಂಬರ್ 07): ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಜಾಮೀನು ಅರ್ಜಿ ವಜಾಗೊಂಡಿದೆ. ಶಿವಶಂಕಂರಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಂದು (ಸೆಪ್ಟೆಂಬರ್ 07) ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆ ನಡೆಸುವ ವೇಳೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.ನೀಟ್ ಪರೀಕ್ಷೆ ಅಕ್ರಮದಿಂದ ಕೆಲ ವಿದ್ಯಾರ್ಥಿಗಳೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳಿಂದಾಗಿಯೇ ಇತ್ತೀಚೆಗೆ ಭಾರೀ ಪ್ರತಿಭಟನೆ ನಡೆದಿದೆ. ಹೀಗಾದರೆ ರಾತ್ರಿ ಹಗಲು ಓದಿದವರ ಕಥೆ ಏನಾಗಬೇಕು? ಕೆಪಿಎಸ್ಸಿ ಮೇಲಿನ ಜನರ ವಿಶ್ವಾಸವೇ ನಾಶವಾಗಿದೆ. ನಿಮ್ಮ ಕುಟುಂಬದ ಸದಸ್ಯರೇ ಇದರಲ್ಲಿ ಭಾಗಿಯಾಗಿದ್ದಾರೆ. ಇದು ವ್ಯವಸ್ಥಿತ ಫ್ರಾಡ್ ಎಂದು ತರಾಟೆಗೆ ತೆಗೆದುಕೊಂಡು ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.
ಬೇರೆಯವರಿಗೆ ಹೋಲಿಸಿದರೆ ಅರ್ಜಿದಾರರ ಪಾತ್ರ ಗಂಭೀರವಾಗಿದೆ. ಸರ್ಕಾರ ಒದಗಿಸಿರುವ ದಾಖಲೆಗಳು ಅರ್ಜಿದಾರರ ವಿರುದ್ಧವಾಗಿದೆ. ವ್ಯವಸ್ಥೆ ಹೀಗಾದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಡೇನಾಗಬೇಕು. ಪರೀಕ್ಷೆ ಬರೆದ ಕುಟುಂಬದವರ ಸ್ಥಿತಿ ಏನಾಗಬೇಕು? ಅಕ್ರಮ ಎಸಗಿದವರನ್ನು ಅಲ್ಲಲ್ಲೇ ಬಂಧಿಸಬೇಕು. ವ್ಯವಸ್ಥಿತ ಫ್ರಾಡ್ನಲ್ಲಿ ಶಿವಶಂಕರಪ್ಪ ಕುಟುಂಬ ಭಾಗಿಯಾಗಿದೆ/ ಪರೀಕ್ಷಾ ನಿಯಂತ್ರಕರು, ಸದಸ್ಯರು ಭಾಗಿಯಾಗಿರುವುದು ಕಾಣುತ್ತಿದೆ ಎಂದು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.
ನಿರ್ದಿಷ್ಟ ಹುದ್ದೆಗಳ ಅರ್ಜಿದಾರರು ಸಾಹುಕಾರ್ ಸಂಪರ್ಕದಲ್ಲಿದ್ದರು. ಬಂಧಿತ ಕನ್ನಾಳೆ ಕೂಡಾ ಸಾಹುಕಾರ್ ಜೊತೆ ಸಂಪರ್ಕದಲ್ಲಿದ್ದ. ಪರೀಕ್ಷೆಯ ದಿನದಂದು ಖಾಸಗಿ ಫೋನ್ನಿಂದ ರಾತ್ರಿ 8 ಗಂಟೆಯವರೆಗೆ ಫಲಾನುಭವಿಗಳ ಜೊತೆ ಮಾತನಾಡಿದ್ದಾರೆ. ಪುತ್ರ, ಪುತ್ರಿಯರು ಕೆಪಿಎಸ್ಸಿ ದುರ್ಬಳಕೆಗೆ ಅವಕಾಶ ನೀಡಿದ್ದಾರೆ. ಅಧಿಕಾರಿಗಳು, ಮಧ್ಯವರ್ತಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಜಾಮೀನು ಅರ್ಜಿ ವಜಾ ಮಾಡುವಂತೆ ಎಸ್ಪಿಪಿ ಬಿ.ಎನ್.ಜಗದೀಶ್ ಅವರು ವಾದ ಮಂಡಿಸಿದ್ದರು. ಈ ಎಲ್ಲಾ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಅಂತಿಮವಾಗಿ ಶಿವಶಂಕರಪ್ಪ ಸಾಹುಕಾರ್ಗೆ ತರಾಟಗೆ ತೆಗೆದುಕೊಂಡು ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.

ಇನ್ನೊಂದೆಡೆ ಸಿಐಡಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಈಗಾಗಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕಿನ್ನಾಳೆಯನ್ನು ಬಂಧಿಸಿದ್ದಾರೆ. ಇನ್ನು ವಿಚಾರಣೆ ವೇಳೆ ಅಕ್ರಮದ ಬಗ್ಗೆ ಹಲವು ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
Published On - 4:07 pm, Mon, 7 September 26