ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ವರ್ಷ ಶಬ್ದ, ವಾಯುಮಾಲಿನ್ಯ ಕಡಿಮೆ: ಕಾರಣ ಇಲ್ಲಿದೆ
Air, Noise Pollution in Deepavali; ಈ ವರ್ಷ ಪಟಾಕಿಗಳ ಮಾರಾಟ ಮತ್ತು ಸಿಡಿಸುವಿಕೆಯ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಗಾಳಿ ಮತ್ತು ಶಬ್ದದ ಗುಣಮಟ್ಟವು ಸುಧಾರಿಸಿದೆ ಎಂದು ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು, ನವೆಂಬರ್ 16: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಈ ವರ್ಷ ದೀಪಾವಳಿ (Deepavali) ಸಂದರ್ಭದಲ್ಲಿ ಬೆಂಗಳೂರು (Bangalore) ಮತ್ತು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕಳೆದ ಹಬ್ಬದ ಸೀಸನ್ಗೆ ಹೋಲಿಸಿದರೆ ಉತ್ತಮವಾಗಿದೆ. ಆದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ಹಬ್ಬ ಹರಿದಿನಗಳಲ್ಲಿ ಮಾಲಿನ್ಯ (Air pollution) ಪ್ರಮಾಣ ಹೆಚ್ಚಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ ವರದಿಯು ಕಳಪೆಯಾಗಿದೆ ಎಂಬುದು ತಿಳಿದುಬಂದಿದೆ.
ಕೆಎಸ್ಪಿಸಿಬಿ ಅಧಿಕಾರಿಗಳ ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕ (AQI) ದ ಪ್ರಕಾರ ಹಬ್ಬದ ಅವಧಿಯಲ್ಲಿ ಗಾಳಿಯ ಗುಣಮಟ್ಟದ ಜತೆಗೇ ಶಬ್ದ ಮಾಲಿನ್ಯದ ಮಟ್ಟವೂ ಸಹ ಹೆಚ್ಚಾಗಿದೆ. ಈ ವರ್ಷ ಪಟಾಕಿಗಳ ಮಾರಾಟ ಮತ್ತು ಸಿಡಿಸುವಿಕೆಯ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗಾಳಿ ಮತ್ತು ಶಬ್ದದ ಗುಣಮಟ್ಟವು ಸುಧಾರಿಸಿದೆ. ಆದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ದೀಪಾವಳಿ ಪೂರ್ವದಲ್ಲಿ ಮಳೆಯಾಗಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗಿತ್ತು. ಆದ್ದರಿಂದ, ತೇವಾಂಶ ಮತ್ತು ಗಾಳಿಯು ಶುದ್ಧವಾಗಿತ್ತು. ಆದರೆ ಈ ಋತುವಿನಲ್ಲಿ ಮೂರು ವರ್ಷಗಳ ದೀಪಾವಳಿ ಹಬ್ಬದ ಸಮಯದಲ್ಲಿ ಅದು ಶುಷ್ಕವಾಗಿತ್ತು ಮತ್ತು ಮಳೆಯಿಲ್ಲ, ಆದ್ದರಿಂದ ಧೂಳಿನ ಕಣಗಳು ವಾತಾವರಣದಲ್ಲಿ ನೆಲೆಗೊಂಡವು ಮತ್ತು ಇದುವೇ ಎಕ್ಯೂಐ ಹೆಚ್ಚಳಕ್ಕೆ ಕಾರಣವಾಯಿತು ಎಂದು ಹಿರಿಯ ಕೆಎಸ್ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಎಸ್ಪಿಸಿಬಿ ದತ್ತಾಂಶದ ಪ್ರಕಾರ, ಬೆಂಗಳೂರು ದಕ್ಷಿಣದ ಕವಿಕಾ ವ್ಯಾಪ್ತಿಯಲ್ಲಿ, ಕಳೆದ ವರ್ಷ ಹಬ್ಬದ ಸಂದರ್ಭದಲ್ಲಿ ಎಕ್ಯೂಐ 312 ಆಗಿದ್ದರೆ, ಈ ವರ್ಷ ನವೆಂಬರ್ 12 ರಂದು 171, ನವೆಂಬರ್ 13 ರಂದು 212 ಮತ್ತು ನವೆಂಬರ್ 14 ರಂದು 252 ಆಗಿತ್ತು. ಹಾಗೆಯೇ, ಬೆಂಗಳೂರು ದಕ್ಷಿಣದ ಸಿಲ್ಕ್ ಬೋರ್ಡ್ನಲ್ಲಿ , ಎಕ್ಯೂಐ ಕಳೆದ ವರ್ಷ 320 ಇದ್ದರೆ, ಈ ವರ್ಷ ನವೆಂಬರ್ 12 ರಂದು 161, ನವೆಂಬರ್ 13 ರಂದು 268 ಮತ್ತು ನವೆಂಬರ್ 14 ರಂದು 242 ಇತ್ತು.
ಬೀದರ್ನಲ್ಲಿ ಹೆಚ್ಚಿದ ವಾಯು ಮಾಲಿನ್ಯ
ಕಳೆದ ವರ್ಷಕ್ಕೆ ಹೋಲಿಸಿದರೆ ಬೀದರ್ನಲ್ಲಿ ಎಕ್ಯೂಐ ಏರಿಕೆಯಾಗಿದೆ. ಕಳೆದ ವರ್ಷ ಬೀದರ್ನಲ್ಲಿ ಹಬ್ಬದ ಮೊದಲ ದಿನದಂದು ಎಕ್ಯೂಐ 50 ಆಗಿತ್ತು ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ. ಈ ಹಬ್ಬದ ವರ್ಷ ನವೆಂಬರ್ 12 ರಂದು ಎಕ್ಯೂಐ 122 ಕ್ಕೆ ಏರಿಕೆಯಾಗಿತ್ತು. ಇದು ಕಳೆದ ವರ್ಷ ಹಬ್ಬದ ಎರಡನೇ ದಿನದಂದು 38 ಆಗಿದ್ದರೆ, ಈ ವರ್ಷ 197 ಕ್ಕೆ ಏರಿಕೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ಆರು ಸ್ಥಳಗಳಲ್ಲಿ ಎಕ್ಯೂಐ ಶೇಕಡಾವಾರು ಇಳಿಕೆಯಾಗಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಕೋಲಾರದಲ್ಲಿ ಎಕ್ಯೂಐನಲ್ಲಿ ಶೇ 116.5 ಏರಿಕೆಯಾಗಿದೆ. ಎಕ್ಯೂಐ ಶೇಕಡಾವಾರು ಅತಿಹೆಚ್ಚು ಏರಿಕೆಯು ಬೀದರ್ನಲ್ಲಿ ಶೇ 341.7 ಕಂಡುಬಂದಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಎಕ್ಯೂಐನಲ್ಲಿ ಶೇ 112.1 ರಷ್ಟು ಏರಿಕೆಯಾಗಿದೆ ಎಂದು ಕೆಎಸ್ಪಿಸಿಬಿ ದತ್ತಾಂಶ ಆಧರಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಇದನ್ನೂ ಓದಿ: ಈ ಹಬ್ಬದ ಸೀಸನ್ನಲ್ಲಿ ರೀಟೇಲ್ ಮಾರುಕಟ್ಟೆಯಲ್ಲಿ 3.75 ಲಕ್ಷಕೋಟಿ ರೂ ವಹಿವಾಟು; ಇದು ಹೊಸ ದಾಖಲೆ
ಅದೇ ರೀತಿ ಜನವಸತಿ ಪ್ರದೇಶವಾಗಿರುವ ಬಳ್ಳಾರಿಯ ಕೆಎಚ್ಬಿ ಕಾಲೋನಿ ಗಾಂಧಿ ನಗರದಲ್ಲಿ ಶಬ್ದ ಮಾಲಿನ್ಯದ ವಿಷಯದಲ್ಲಿ ಶೇ 51.1ರಷ್ಟು ಡೆಸಿಬಲ್ ಏರಿಕೆಯಾಗಿದೆ. ಜನವಸತಿ ಪ್ರದೇಶವಾಗಿರುವ ದಾವಣಗೆರೆಯ ಚೌಕಿಪೇಟೆಯಲ್ಲಿ ಶಬ್ದದ ಮಟ್ಟದಲ್ಲಿ ಶೇ 15.3 ಏರಿಕೆಯಾಗಿದೆ. ಈ ದೀಪಾವಳಿ ಹಬ್ಬದಂದು ಚಿಕ್ಕಬಳ್ಳಾಪುರದಲ್ಲಿ ಶೇ 31.8 ಮತ್ತು ಬಾಗಲಕೋಟೆಯಲ್ಲಿ 31.5 ಹೆಚ್ಚಳವಾಗಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿ ವಸತಿ ಪ್ರದೇಶದಲ್ಲಿ ಶೇ 40.4ರಷ್ಟು ಡೆಸಿಬಲ್ ಏರಿಕೆ ದಾಖಲಾಗಿದೆ. ವಿಶೇಷವೆಂದರೆ, ದಾಸರಹಳ್ಳಿಯ ಪಾರ್ವತಿನಗರದಲ್ಲಿ ಶೇ 33.7ರಷ್ಟು ಕುಸಿತ ದಾಖಲಾಗಿದೆ.
ಕೆಎಸ್ಪಿಸಿಬಿಯು ರಾಜ್ಯದಾದ್ಯಂತ 39 ವಾಯು ಗುಣಮಟ್ಟ ನಿಗಾ ಕೇಂದ್ರಗಳನ್ನು ಸ್ಥಾಪಿಸಿದೆ. ಶಬ್ದ ಮಾಲಿನ್ಯಕ್ಕಾಗಿ ಮಂಡಳಿಯು ಬೆಂಗಳೂರಿನಲ್ಲಿ 10 ವಿಶೇಷ ಆನ್ಲೈನ್ ಕೇಂದ್ರಗಳನ್ನು ಮತ್ತು 14 ಸಾಮಾನ್ಯ ಶಬ್ದ ಕೇಂದ್ರಗಳನ್ನು ಸ್ಥಾಪಿಸಿದೆ. ಇದಲ್ಲದೇ ರಾಜ್ಯದಾದ್ಯಂತ 28 ಮ್ಯಾನುವಲ್ ಸ್ಟೇಷನ್ಗಳನ್ನು ಸ್ಥಾಪಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ