ಏಪ್ರಿಲ್‌ 28ಕ್ಕೆ ಕರ್ನಾಟಕಕ್ಕೆ ಮೋದಿ: 2ನೇ ಹಂತದ ಬಿಜೆಪಿ ಪ್ಲ್ಯಾನ್‌ ಏನು? ಎಲ್ಲೆಲ್ಲಿ? ಇಲ್ಲಿದೆ ವಿವರ

ಕೈ, ಕಮಲ ಅಭ್ಯರ್ಥಿಗಳು ಎಲ್ಲ ಕಡೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ಅದರಂತೆ ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಏ.28 ರಂದು ರಾಜ್ಯಕ್ಕೆ ಲಗ್ಗೆಯಿಡುತ್ತಿದ್ದಾರೆ. ಇದರಿಂದ ಸಮಾವೇಶಕ್ಕೆ ಭರ್ಜರಿ ಸಿದ್ದತೆ ಶುರುವಾಗಿದೆ.

ಏಪ್ರಿಲ್‌ 28ಕ್ಕೆ ಕರ್ನಾಟಕಕ್ಕೆ ಮೋದಿ: 2ನೇ ಹಂತದ ಬಿಜೆಪಿ ಪ್ಲ್ಯಾನ್‌ ಏನು? ಎಲ್ಲೆಲ್ಲಿ? ಇಲ್ಲಿದೆ ವಿವರ
ಏಪ್ರಿಲ್‌ 28ಕ್ಕೆ ಕರ್ನಾಟಕಕ್ಕೆ ಮೋದಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 24, 2024 | 10:28 PM

ಬಾಗಲಕೋಟೆ, ಏ.24: ‌ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಕಾವು ಮತ್ತಷ್ಟು ಹೆಚ್ಚಾಗಿದೆ. ಚುನಾವಣೆ ದಿನ ಹತ್ತಿರ ಬರುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷದಿಂದ ಬಿರುಸಿನ ಪ್ರಚಾರ ಶುರುವಾಗಿದೆ. ಇನ್ನು ಬಾಗಲಕೋಟೆಗೆ(Bagalkote) ಪ್ರಧಾನಿ ನರೇಂದ್ರ ಮೋದಿ(Narendra Modi) ಲಗ್ಗೆಯಿಡುತ್ತಿದ್ದು, ಕೇಸರಿ ಕಲಿಗಳಿಗೆ ಮತ್ತಷ್ಟು ಹುರುಪು ಬಂದಿದೆ. ಎಪ್ರಿಲ್ 28 ರಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಮೋದಿ ಬಾಗಲಕೋಟೆಗೆ ಬರಲಿದ್ದಾರೆ. ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ, ವಿಜಯಪುರ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರ ಪ್ರಚಾರ ಮಾಡಲಿದ್ದಾರೆ. ಮೋದಿ ಆಗಮನದಿಂದ‌ ಅಭ್ಯರ್ಥಿಗಳಿಗೆ ಬೂಸ್ಟ್ ಸಿಕ್ಕಂತಾಗಿದ್ದು, ಬಿಜೆಪಿ ಕಾರ್ಯಕರ್ತರಿಗೆ ಹೆಚ್ಚಿನ ಉತ್ಸಾಹ ಬರಲಿದೆ. ಇದು ಬಾಗಲಕೋಟೆ , ವಿಜಯಪುರ ಅಭ್ಯರ್ಥಿಗಳಿಗೆ ಬಾರಿ ಪ್ಲಸ್ ಆಗಲಿದೆ.

ನೂರು ಎಕರೆ ಜಾಗದಲ್ಲಿ ಸಮಾವೇಶ

ಮೋದಿ ಪ್ರಚಾರ ಸಮಾವೇಶಕ್ಕೆ ಬರದ ಸಿದ್ದತೆ ಶುರುವಾಗಿದೆ. ಸಮಾವೇಶಕ್ಕಾಗಿ ನೂರು‌ ಎಕರೆ ಜಾಗದಲ್ಲಿ ಸಿದ್ದತೆ ‌ನಡೆದಿದೆ. ಬಾಗಲಕೋಟೆಯ ನವನಗರದ ವ್ಯಾಪ್ತಿ ಪ್ರದೇಶದ ನೂರು ಎಕರೆ ಜಾಗದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದ ಮೈದಾನದಲ್ಲಿ ಇಂದು ಬಿಜೆಪಿ ಮುಖಂಡರು ಪೂಜೆ ಸಲ್ಲಿಸಿದ್ದಾರೆ. ಗೋಪೂಜೆ ಹಾಗೂ ಭೂಮಿ ಪೂಜೆ ‌ಮಾಡಿ ಕಾರ್ಯಕ್ರಮದ ವೇದಿಕೆ ಸಿದ್ದತೆ ‌ಕಾರ್ಯ ಶುರು ಮಾಡಿದ್ದಾರೆ. ಉತ್ತರಕ್ಕೆ‌ ಮುಖ ‌ಮಾಡಿ 6\40 ಅಡಿ ವೇದಿಕೆ ಜೊತೆಗೆ ವೇದಿಕೆ‌ ಮುಂದೆ 40 ಅಡಿ‌ ಡಿ‌ಜೋನ್ ಇರಲಿದೆ. ಮುಂದೆ 300\600 ಅಡಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಖುರ್ಚಿ ಹಾಗೂ ಪೆಂಡಾಲ್ ವ್ಯವಸ್ಥೆ ಇರಲಿದೆ.

ಇದನ್ನೂ ಓದಿ:ಮೋದಿಗಿರುವಂತಹ ಗಟ್ಟಿತನ ಅಮೆರಿಕಕ್ಕೆ ಸ್ವಲ್ಪವಾದರೂ ಬೇಕು: ಜೆಪಿ ಮಾರ್ಗನ್ ಸಿಇಒ

ಎರಡು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ 

ಬಾಗಲಕೋಟೆ ಹಾಗೂ ವಿಜಯಪುರ ಅವಳಿ ಜಿಲ್ಲೆಗಳಿಂದ ಎರಡು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ವೇದಿಕೆಯಲ್ಲಿ ಕೇಂದ್ರ ಸರಕಾರದ ಯೋಜನೆ ಸದುಪಯೋಗ ಪಡೆದುಕೊಂಡ ಐದು ಜನ ಫಲಾನುಭವಿಗಳಿಂದ ಮೋದಿಗೆ ಸನ್ಮಾನ ನಡೆಯಲಿದೆ. ಎಲ್​ಇಡಿ ಮೂಲಕ ಮೋದಿ ಗ್ಯಾರಂಟಿಗಳು, ಕೇಂದ್ರದ ಯೋಜನೆಗಳ‌ ಪ್ರದರ್ಶನ ನಡೆಯಲಿದ್ದು, ವೇದಿಕೆಯ ಬಲಭಾಗದಲ್ಲಿ ಹೆಲಿಪ್ಯಾಡ್ ಸಿದ್ದ ಮಾಡಲಾಗುತ್ತದೆ. ಒಟ್ಟಿನಲ್ಲಿ ಮೋದಿ ಆಗಮನ ಕ್ಷೇತ್ರದಲ್ಲಿ ಬಾರಿ ಸಂಚಲನ ಮೂಡಿಸಿದ್ದು, ಬಾಗಲಕೋಟೆ-ವಿಜಯಪುರ‌ ಕೇಸರಿ ಪಾಳಯಕ್ಕೆ ಮತ್ತಷ್ಟು ಚೈತನ್ಯ ತಂದಿದೆ.

ಬೆಣ್ಣೆ ನಗರಿ ದಾವಣಗೆರೆಗೆ ಮೋದಿ ಆಗಮನ

ಬೆಣ್ಣೆ ನಗರಿ ದಾವಣಗೆರೆ ಎಂದರೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಅದೃಷ್ಟದ ಭೂಮಿ. ಇಲ್ಲಿ ಸಮಾವೇಶ ಮಾಡಿದ ಪಕ್ಷಗಳು ಅತ್ಯಧಿಕ ಸೀಟ್​ಗಳನ್ನು ಗೆದ್ದು ಅಧಿಕಾರ ನಡೆಸಿದ ನಿದರ್ಶನಗಳು ಕೂಡ ಇವೆ. ಮಾಜಿ ಪ್ರಧಾನಿ ದೇವೆಗೌಡ ರಿಂದ ಹಿಡಿದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಮೋದಿಯವರಿಗೂ ಕೂಡ ಅದೃಷ್ಟದ ಭೂಮಿಯಾಗಿದೆ. ಇದರಿಂದ ಪ್ರತಿ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ಬೃಹತ್ ಸಮಾವೇಶ ಇಲ್ಲಿ ಹಮ್ಮಿಕೊಂಡಿರುತ್ತಾರೆ. ಈಗ ಲೋಕಸಭಾ ಚುನಾವಣೆ ಹಿನ್ನಲೆ ಇದೇ 28 ರಂದು ಮಧ್ಯಾಹ್ನ 1 ಗಂಟೆಗೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಲೋಕ ರಣಕಹಳೆ ಮೊಳಗಿಸಲಿದ್ದಾರೆ.

ಇದನ್ನೂ ಓದಿ:ಏಪ್ರಿಲ್ 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ: ಅನಂತಕುಮಾರ್ ಹೆಗಡೆ ಮನೆ ಸಮೀಪದ ಮೈದಾನದಲ್ಲೇ ಸಮಾವೇಶ!

ಒಂದು ಗಂಟೆಗಳ ಕಾಲ ಸಮಾವೇಶದಲ್ಲಿ ಭಾಗವಹಿಸಿ ಕಾರವಾರ ಹಾಗೂ ಬೆಳಗಾವಿಗೆ ತೆರಳಲಿದ್ದಾರೆ. ಇನ್ನು ದಾವಣಗೆರೆ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಪ್ರಚಾರ ಸಮಾವೇಶ ನಡೆಸಲಿದ್ದಾರೆ.. ಅದ್ದರಿಂದ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಸಿದ್ದವಾಗುತ್ತಿದೆ. 2014 ರಲ್ಲಿ ಸಮಾವೇಶ ಮಾಡಿ ಪ್ರಧಾನಿ ಪಟ್ಟಕ್ಕೆ ಏರಿದ್ದ ಮೋದಿ. 2019 ರಲ್ಲಿ ಕೂಡ ಸಮಾವೇಶ ನಡೆಸಿ ಅತ್ಯಧಿಕ ಸೀಟ್ ಗೆದ್ದು‌ ಮತ್ತೊಮ್ಮೆ ಅಧಿಕಾರ ಹಿಡಿದಿದ್ದ ಮೋದಿ. ಈ ಬಾರಿ ಮತ್ತೊಮ್ಮೆ ಅದೃಷ್ಟದ ಪರೀಕ್ಷೆ ಗೆ ಮುಂದಾಗಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಗೆ ದಾವಣಗೆರೆ ನಿಜಕ್ಕೂ ಅದೃಷ್ಟದ ನೆಲೆಯಾಗಿದೆ. 2014 ರ ಲೋಕಾಸಭಾ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಸಮಾವೇಶ ಮಾಡಿ ದಾವಣಗೆರೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸುವ ಮೂಲಕ ಮೊದಲ ಬಾರಿಗೆ ಪ್ರಧಾನಿ ಪಟ್ಟ ಏರಿದರು. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೂಡ ದಾವಣಗೆರೆಯಲ್ಲಿ ಸಮಾವೇಶ ಮಾಡುವ ಮೂಲಕ ರಾಜ್ಯದಲ್ಲಿ 25 ಲೋಕಸಭಾ ಸದಸ್ಯರನ್ನು ಗೆಲ್ಲಿಸಿ, ಪ್ರಧಾನಿಯಾಗಿ‌ ಮತ್ತೆ ಪಟ್ಟವನ್ನೇರಿದರು.

ಹೀಗೆ ಮೋದಿಯವರಿಗೆ ದಾವಣಗೆರೆ ಒಂದು ರೀತಿಯ ಅದೃಷ್ಟದ ನೆಲೆಯಾಗಿದ್ದು. ಈ ಬಾರಿ ತಮ್ಮ ಪಕ್ಷ ರಾಜ್ಯದಲ್ಲಿ 25 ಕ್ಕೂ ಹೆಚ್ಚು ಸೀಟ್​ಗಳನ್ನು ಗೆಲ್ಲಲು ಮೋದಿ ಬೆಣ್ಣೆನಗರಿಗೆ ಆಗಮಿಸುತ್ತಿದ್ದು, ಇದರಿಂದ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಮುಂದಾಗಿದ್ದಾರೆ. ಅಲ್ಲದೆ ಮಧ್ಯ ಕರ್ನಾಟಕದಲ್ಲಿ ಲಿಂಗಾಯತ ಮತಗಳ ಜೊತೆ ಅಹಿಂದ ಮತಗಳನ್ನು ಒಗ್ಗೂಡಿಸಲು ಈ ಬಾರಿ ತಂತ್ರವನ್ನು ರೂಪಿಸಿದ್ದು, ಅದರ ಜೊತೆ ಯುವ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಿದ್ದಾರೆ. ಒಟ್ಟಾರೆಯಾಗಿ ದಾವಣಗೆರೆ ಬಿಜೆಪಿ ಪಕ್ಷಕ್ಕೆ ಒಂದು ಅದೃಷ್ಟದ ನೆಲೆಯಾಗಿದ್ದು, ಈ ಬಾರಿ ಬೆಣ್ಣೆ ನಗರಿಗೆ ಅಗಮಿಸುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಜೊತೆಗೆ ಅದೃಷ್ಟ ಪರೀಕ್ಷೆ ‌ಮಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ